ಕಾಗೆ ಅಪಶಕುನಕ್ಕೆ ಹೆದರಿ ಇಂಜಿನಿಯರ್ ಆತ್ಮಹತ್ಯೆ!
ಬಸವೇಶ್ವರ ನಗರದ ನಿವಾಸಿಯಾಗಿರುವ ವಿ.ಆನಂದ್ (23) ಬುಧವಾರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಂಪನಿಗೆ ತೆರಳುವಾಗ ಕಾಗೆ ಆನಂದ್ ಅವರಿಗೆ ಎರಡು ಬಾರಿ ಸ್ಪರ್ಶಿಸಿದ್ದೆ ಆತ್ಮಹತ್ಯೆಗೆ ಕಾರಣ ಎಂದು ತಿಳಿದು ಬಂದಿದೆ.
ಕಾಗೆ ಸ್ಪರ್ಶಿಸಿದರೆ ಅಪಶಕುನವಲ್ಲ ಎಂಬ ತಾಯಿಯ ಮಾತಿಗೂ ಬೆಲೆ ಕೊಡದ ಆನಂದ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುರುವಾರ ಆನಂದ್ ಸಹೋದರ, ಅವರ ಮನೆಗೆ ಭೇಟಿ ನೀಡಿದಾಗ, ಸಾವನ್ನಪ್ಪಿರುವ ವಿಷಯ ಬೆಳಕಿಗೆ ಬಂದಿದೆ.
ಘಟನೆ ಏನು : ಎಚ್ಎಎಲ್ ನಲ್ಲಿ ಕೆಲಸ ಮಾಡುತ್ತಿರುವ ಆನಂದ್ ಬುಧವಾರ ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ಹೊರಟಿದ್ದರು. ಆದರೆ, ರಸ್ತೆಯಲ್ಲಿ ಕಾಗೆ ಅವರ ತಲೆಗೆ ಎರಡು ಬಾರಿ ತಾಗಿಕೊಂಡು ಹಾರಿಹೋಗಿದೆ. ಇದನ್ನು ದೊಡ್ಡ ಅಪಶಕುನ ಎಂದು ಅವರು ಭಾವಿಸಿದ್ದಾರೆ.
ತಕ್ಷಣ ಗದಗದಲ್ಲಿರುವ ತಾಯಿ ಪಾರ್ವತಿ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ದೊಡ್ಡ ಅಪಶಕುನ ನಡೆದಿದೆ ಎಂದು ಆತಂಕ ಹೇಳಿಕೊಂಡಿದ್ದಾರೆ. ಆನಂದ್ ಸಮಾಧಾನಪಡಿಸಿದ ತಾಯಿ, ಏನೂ ಆಗುವುದಿಲ್ಲ. ಇದು ಅಪಶಕುನವಲ್ಲ ಧೈರ್ಯವಾಗಿರುವಂತೆ ಹೇಳಿದ್ದಾರೆ.
ಆಂಜನೇಯ ಮತ್ತು ಶನಿಮಹಾತ್ಮ ದೇವಾಲಯದಲ್ಲಿ ಪೂಜೆ ಮಾಡಿಸು ಸರಿಹೋಗುತ್ತದೆ ಎಂಬ ಸಲಹೆಯನ್ನು ನೀಡಿದ್ದಾರೆ. ಆದರೆ, ತಾಯಿಯ ಮಾತಿನಿಂದ ಸಮಾಧಾನಗೊಳ್ಳದ ಆನಂದ್ ಬುಧವಾರ ರಾತ್ರಿ ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾರೆ.
ಗದಗ ಜಿಲ್ಲೆಯವರು : ಆನಂದ್ ಮೂಲತಃ ಗದಗ ಜಿಲ್ಲೆ ಲಕ್ಷ್ಮೇಶ್ವರದವರು. ಸಹೋದರ ವಿ.ಹಂಪಣ್ಣ ಮತ್ತು ಆನಂದ್ ಎರಡು ವರ್ಷಗಳಿಂದ ಬಸವೇಶ್ವರನಗರದಲ್ಲಿ ವಾಸಿಸುತ್ತಿದ್ದಾರೆ. ಇಂಜಿನಿಯರಿಂಗ್ ಪದವೀಧರರಾದ ಆನಂದ್ ಎಚ್ಎಎಲ್ ನಲ್ಲಿ ತರಬೇತಿ ನಿರತ ನೌಕರರಾಗಿ ಕೆಲಸ ಮಾಡುತ್ತಿದ್ದರು.
ಆನಂದ್ ತಂದೆ ಅನಾರೋಗ್ಯ ಪೀಡಿತರಾಗಿದ್ದರಿಂದ ಹಂಪಣ್ಣ ಊರಿಗೆ ತೆರಳಿದ್ದರು. ಇದೇ ವೇಳೆ ಬುಧವಾರ ಆನಂದ್ ತಲೆಗೆ ಕಾಗೆ ಸ್ಪರ್ಶಿಸಿದೆ. ತಂದೆಯ ಆನಾರೋಗ್ಯ, ತನ್ನ ತಲೆಗೆ ಕಾಗೆ ತಾಗಿರುವುದು ಎಲ್ಲವನ್ನು ಅಪಶಕುನದ ಸೂಚನೆ ಎಂದು ಅರಿತ ಆನಂದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಾಗೆ ಸ್ಪರ್ಶಿಸಿದೆ ಎಂದು ಆತ್ಮಹತ್ಯೆ ಮಾಡಿಕೊಳ್ಳುವುದು ನಂಬಿಕೆಯೋ? ಅಥವ ಮೂಢನಂಬಿಕೆಯ ಪರಮಾವಧಿಯೋ? ಆದರೆ, ಒಂದು ಜೀವ ಮಾತ್ರ ಇದಕ್ಕೆ ಬಲಿಯಾಗಿದೆ.