ಗ್ರಾಮೀಣ ಸೇವೆ ತಪ್ಪಿಸಿದರೆ ವೈದ್ಯರಿಗೆ ದಂಡ!
ಸೋಮವಾರ ವಿಧಾನಪರಿಷತ್ ನಲ್ಲಿ ಇ.ಕೃಷ್ಣಪ್ಪ ಮತ್ತು ಅಲ್ಲಮಪ್ರಭು ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಯು.ಟಿ.ಖಾದರ್, ಕಡ್ಡಾಯ ಗ್ರಾಮೀಣ ಸೇವೆ ಪೂರೈಸದ ವೈದ್ಯರಿಗೆ ಪ್ರಸ್ತುತ 1 ಲಕ್ಷ ರೂ. ದಂಡ ವಿಧಿಸಲಾಗುತ್ತಿದೆ.
ರಾಜ್ಯದಲ್ಲಿ ಇದುವರೆಗೂ 900 ವೈದ್ಯರು 1 ಲಕ್ಷ ರೂ. ದಂಡ ಪಾವತಿಸಿ, ಗ್ರಾಮೀಣ ಸೇವೆಯಿಂದ ದೂರ ಉಳಿದಿದ್ದಾರೆ ಎಂದು ಮಾಹಿತಿ ನೀಡಿದರು. ಈ ದಂಡದ ಶುಲ್ಕದ ಪ್ರಮಾಣವನ್ನು ಹೆಚ್ಚಿಸಿ, ವೈದ್ಯರು ಕಡ್ಡಾಯವಾಗಿ ಗ್ರಾಮೀಣ ಸೇವೆ ನಿರ್ವಹಿಸುವಂತೆ ಮಾಡಲಾಗುವುದು ಎಂದರು.
ಯಾರಿಗೆ ಎಷ್ಟು ದಂಡ : ಕಡ್ಡಾಯ ಗ್ರಾಮೀಣ ಸೇವೆ ಪೂರೈಸದ ಸ್ನಾತಕೋತ್ತರ ಪದವೀಧರ ವೈದ್ಯರಿಗೆ ರೂ 25 ಲಕ್ಷ, ಸ್ನಾತಕೋತ್ತರ ಡಿಪ್ಲೊಮಾ ವೈದ್ಯರಿಗೆ ರೂ 15 ಲಕ್ಷ ಮತ್ತು ಪದವೀಧರ (ಎಂಬಿಬಿಎಸ್) ವೈದ್ಯರಿಗೆ ರೂ 10 ಲಕ್ಷ ದಂಡ ವಿಧಿಸಲು ನಿರ್ಧರಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ವೈದ್ಯರ ಕೊರತೆ ಇದೆ : ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ. ವೈದ್ಯರ ಕೊರತೆ ಇರುವ ಪ್ರದೇಶಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಎಂಬಿಬಿಎಸ್ ಪದವೀಧರರನ್ನು ನೇಮಕ ಮಾಡಿಕೊಳ್ಳುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ ಎಂದು ಹೇಳಿದರು.
ಗುತ್ತಿಗೆ ಆಧಾರದಲ್ಲಿ ನೇಮಕವಾದ ವೈದ್ಯರಿಗೆ ಮಾಸಿಕ 60 ಸಾವಿರದಿಂದ 80 ಸಾವಿರ ರೂ ಗೌರವಧನ ನಿಗದಿಪಡಿಸಲಾಗಿದೆ. ರಾಜ್ಯದಲ್ಲಿ ಒಟ್ಟು 296 ವೈದ್ಯರ ಹುದ್ದೆಗಳು ಖಾಲಿ ಇವೆ ಎಂದು ಸಚಿವ ಖಾದರ್ ಸದನಕ್ಕೆ ವಿವರಣೆ ನೀಡಿದರು.
ಸಿಬ್ಬಂದಿಗಳ ಕೊರತೆ : ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಸಿಬ್ಬಂದಿಯ ಕೊರತೆ ಇದೆ. ಸರ್ಕಾರ 3,579 ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಆರಂಭಿಸಿದೆ ಎಂದು ಸಚಿವರು ಹೇಳಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ, ಟೆಕ್ನಾಲಜಿಸ್ಟ್, ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ, ಅರೆ ವೈದ್ಯಕೀಯ ಮತ್ತು ಡಿ ಗ್ರೂಪ್ ಹುದ್ದೆಗಳು ಸೇರಿ 1,331 ಸಿಬ್ಬಂದಿ ನೇಮಕಕ್ಕೆ ಹಣಕಾಸು ಇಲಾಖೆಯಿಂದ ಒಪ್ಪಿಗೆ ದೊರೆತಿದೆ ಎಂದರು.