ಉರಗತಜ್ಞನಿಗೇ ಭೀತಿ ಹುಟ್ಟಿಸಿದ ಕಾಳಿಂಗ ಸರ್ಪ
ಶಿವಮೊಗ್ಗ, ಜು. 6 : "ನಾನು ಸಾಕಷ್ಟು ಹಾವುಗಳನ್ನು ಹಿಡಿದಿದ್ದೇನೆ. ಆದರೆ, ಇಷ್ಟು ಉದ್ದವಿರುವ, ಇಷ್ಟು ಭಯಾನಕವಾಗಿರುವ ಸರ್ಪವನ್ನು ಜನ್ಮದಲ್ಲಿ ನೋಡಿಲ್ಲ, ಹಿಡಿದೂ ಇಲ್ಲ. ಇದನ್ನು ನೋಡಿದಾಗ ನನಗೆ ಸ್ವಲ್ಪ ಭಯ ಆಗಿದ್ದು ಕೂಡ ನಿಜ" ಇದು ಶಿವಮೊಗ್ಗದ ಉರಗತಜ್ಞ ಕಿರಣ್ ಅವರ ಉದ್ಘಾರ.
ಉರಗತಜ್ಞರೇ ಈ ಹಾವನ್ನು ನೋಡಿ ಭಯಪಟ್ಟ ಮೇಲೆ ಇದು ಹೇಗಿದ್ದಿರಬಹುದು ಕಲ್ಪಿಸಿಕೊಳ್ಳಬಹುದು. ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮದಲ್ಲಿ ಗ್ರಾಮಸ್ಥರಿಗೆ ಶುಕ್ರವಾರ ಅಚ್ಚರಿ ಕಾದಿತ್ತು. ಅವರೆಂದೂ ನೋಡದಂತಹ ಭಯಾನಕ ಕಾಳಿಂಗ ಸರ್ಪ ಅಲ್ಲಿ ಆಗಮಿಸಿತ್ತು.
ಸುಮಾರು 14 ಅಡಿ ಉದ್ದದ ಕರಿ ಕಾಳಿಂಗ ಸರ್ಪ ಪುರದಾಳು ಗ್ರಾಮದ ಗಂಗಾಧರ ಎಂಬುವವರ ತೋಟದಲ್ಲಿ ಪ್ರತ್ಯಕ್ಷವಾಗಿತ್ತು. ಬೆಚ್ಚಿಬಿದ್ದ ಗಂಗಾಧರ ಅವರು ಕೂಡಲೆ ಉರಗ ಪ್ರೇಮಿ 'ಸ್ನೇಕ್' ಕಿರಣ್ ಅವರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಸ್ನೇಕ್ ಕಿರಣ್ ಅವರು ಬುಸುಗುಡುತ್ತಿದ್ದ ಕಾಳಿಂಗ ಸರ್ಪವನ್ನು ಅತ್ಯಂತ ಚಾಕಚಕ್ಯತೆಯಿಂದ ಪಳಗಿಸಿ ಹಿಡಿದರು ಮತ್ತು ಕಾಡಿನೊಳಗೆ ಸುರಕ್ಷಿತವಾಗಿ ಬಿಟ್ಟುಬಂದರು.
ಕಾಳಿಂಗ ಸರ್ಪ ಬೃಹತ್ ಗಾತ್ರವಿದ್ದರಿಂದ ಸ್ವಲ್ಪ ಗಾಬರಿಯಾಗಿದ್ದ ಕಿರಣ್ ಅವರು ಅದನ್ನು ಹಿಡಿಯಲು ಸಾಕಷ್ಟು ಸಮಯ ತೆಗೆದುಕೊಂಡರು. ಅದನ್ನು ಹಿಡಿಯಲು ಕಿರಣ್ ಅವರು ತಮ್ಮೆಲ್ಲ ಅನುಭವವನ್ನು ಬಳಸಬೇಕಾಯಿತು. ಈ ದೃಶ್ಯವನ್ನು ಅಕ್ಕಪಕ್ಕದ ಗ್ರಾಮಸ್ಥರೆಲ್ಲ ಅತ್ಯಂತ ಕುತೂಲಹದಿಂದ ನೋಡುತ್ತಿದ್ದರು. ಕೊನೆಗೂ ಕಾಳಿಂಗ ಸರ್ಪವನ್ನು ಕಿರಣ್ ಅವರು ಯಶಸ್ವಿಯಾಗಿ ಹಿಡಿದಾಗ ಗ್ರಾಮಸ್ಥರಲ್ಲಿ ನಿರಾಳ ಭಾವ ಮೂಡಿತ್ತು.
ಇಂತಹ ಬೃಹತ್ ಸರ್ಪಗಳು ಅಪರೂಪವೆ. ಆದರೆ, ಜನರು ಭೀತಿಗೊಳಗಾಗಿ ಅವರನ್ನು ಕೊಲ್ಲಲು ಮುಂದಾಗಬಾರದು. ಕೆಣಕಲು ಹೋಗದಿದ್ದರೆ ಅವೇನೂ ಮಾಡುವುದಿಲ್ಲ. ಆದರೆ, ಕಂಡತಕ್ಷಣ ಉರಗತಜ್ಞರಿಗೆ ತಿಳಿಸಬೇಕು ಎಂದು ಉರಗ ಪ್ರೇಮಿ ಕಿರಣ್ ಅವರು ಜನರಲ್ಲಿ ವಿನಂತಿಸಿಕೊಂಡಿದ್ದಾರೆ.