ರಾಸಲೀಲೆಗೆ ಪಲ್ಲಂಗವಾದ ಕೇರಳ ಬೋಟ್ ಹೌಸ್
ಅಲೆಪ್ಪಿ (ಕೇರಳ), ಜೂ. 29 : ಕೇರಳ ಅಂದರೆ ದೇವರ ನಾಡು, ಕೇರಳ ಅಂದರೆ ಪ್ರವಾಸಿಗರ ಸ್ವರ್ಗ, ಕೇರಳ ಅಂದರೆ ಹಚ್ಚಹಸಿರಿನ ಪ್ರಕೃತಿಯ ಮಡಿಲು, ಕೇರಳ ಅಂದರೆ ಹೊಸದಾಗಿ ಮದುವೆಯಾದವರ ಮಧುಚಂದ್ರದ ಕಡಲು ಎಂಬೆಲ್ಲ ಖ್ಯಾತಿಗೆ ಕಾರಣವಾಗಿದ್ದ ಕಥಕ್ಕಳಿ, ಕಲಾರಿಪಯಟ್ಟು ಯುದ್ಧಕಲೆಯ ಹುಟ್ಟೂರು ಈಗ ಮತ್ತೊಂದು ಕುಖ್ಯಾತಿಗೆ ಒಳಗಾಗುವ ಅಪಾಯದಲ್ಲಿದೆ.
ಕೇರಳ ತನ್ನ ಪ್ರವಾಸೋದ್ಯಮವನ್ನೇ ಬಲಿಕೊಡುವ ಹಂತಕ್ಕೆ ಬಂದು ತಲುಪಿದೆ. ಡೆಕ್ಕನ್ ಕ್ರಾನಿಕಲ್ ಪತ್ರಿಕೆ ಪ್ರಕಟಿಸಿರುವ ಒಂದು ವರದಿಯ ಪ್ರಕಾರ, ಮಧುಚಂದ್ರದ ಹಂಸತೂಲಿಕಾತಲ್ಪವಾಗಿದ್ದ ಸಮುದ್ರದ ಹಿನ್ನೀರಿನಲ್ಲಿರುವ ಹೌಸ್ ಬೋಟ್ ಇಂದು ಅನೈತಿಕ ಚಟುವಟಿಕೆಗಳ ಆಗರವಾಗುತ್ತಿದ್ದು, ರಾಸಲೀಲೆಯ ಪಲ್ಲಂಗವಾಗಿದೆ ಮತ್ತು ಕೇರಳ ಪ್ರವಾಸೋದ್ಯಮಕ್ಕೆ ಕಪ್ಪುಮಸಿ ಬಳಿಯುತ್ತಿದೆ. ಅಲ್ಲದೆ, ವಿಕೃತ ಕಾಮಿಗಳಿಗೆ, ಲೈಂಗಿಕ ಹೋರಿಗಳಿಗೆ ಅನೈತಿಕ ಚಟುವಟಿಕೆಯ ತಾಣವಾಗಿದೆ.
ಇದೆಲ್ಲ ಹೇಗೆ ನಡೆಯುತ್ತದೆ? ಈ ಡರ್ಟಿ ಬಿಸಿನೆಸ್ ಹಿಂದೆ ಯಾರ್ಯಾರ ಕೈವಾಡವಿದೆ? ಇದು ಯುವಜನತೆಯನ್ನು ಹೇಗೆ ದಾರಿ ತಪ್ಪಿಸುತ್ತಿದೆ? ಯುವಮನಸ್ಸುಗಳನ್ನು ಯಾರ ರೀತಿ ವೇಶ್ಯಾವಾಟಿಕೆಗೆ ಎಳೆಯುತ್ತಿದೆ ಮತ್ತು ಕೇರಳ ಸರಕಾರಕ್ಕೆ ಹೇಗೆ ಕಪ್ಪುಮಸಿ ಬಳಿಯುತ್ತಿದೆ ಎಂಬುದನ್ನು ತಿಳಿಯುವ ಪ್ರಯತ್ನ ಇಲ್ಲಿದೆ.
ಇದರ ಹಿಂದಿರುವವರು ಯಾರು?
ಜೆಸ್ಸಿ, ಜೀನತ್ ಮತ್ತು ಶೆಹ್ನಾ ಎಂಬ ಮೂವರು ಖತರ್ನಾಕ್ ಮಹಿಳಾಮಣಿಗಳು ನಡೆಸುತ್ತಿರುವ ಬೃಹತ್ ಜಾಲವನ್ನು ಇಲ್ಲಿ ಬೀಸಿದ್ದಾರೆ. ಈ ಮೂವರು ತಮ್ಮ ಗಿರಾಕಿಗಳಿಗಾಗಿ ಕೇರಳದ ಹುಡುಗರ ತಂಡವನ್ನು ಕಟ್ಟಿದ್ದಾರೆ. ಈ ಹುಡುಗರು ಶಾಲೆ ಮತ್ತು ಕಾಲೇಜುಗಳ ಎದಿರು ಠಳಾಯಿಸುತ್ತಿರುತ್ತಾರೆ. ಎಳೆ ಹುಡುಗಿಯರನ್ನು ಮತ್ತು ಯುವತಿಯರನ್ನು ಪ್ರೇಮದ ಬಲೆಯಲ್ಲಿ ಬೀಳಿಸಿ ನಂತರ ಅವರನ್ನು ಈ ಲೇಡಿಗಳಿಗೆ ಒಪ್ಪಿಸುವುದು ಅವರ ಜವಾಬ್ದಾರಿ. ಇವರಲ್ಲಿ ಜೆಸ್ಸಿ ಈಗಾಗಲೆ ಕೇರಳದಲ್ಲಿ ಭಾರೀ ಆಸ್ತಿಪಾಸ್ತಿ ಹೊಂದಿದ್ದಾಳೆ ಎಂದು ತಿಳಿದುಬಂದಿದೆ.
ಮುಂದಿನ ಕೆಲಸ ಈ ಮಹಿಳೆಯರದು
ತೀರ 'ಅರ್ಜೆಂಟ'ಲ್ಲಿರುವವರು ಮತ್ತು ಗಿರಾಕಿ ಹುಡುಕಿಕೊಂಡು ಬರುವವರ ರಾಷ್ಟ್ರೀಯತೆಯನ್ನು ನೋಡಿಕೊಂಡು ರೇಟನ್ನು ಇವರು ಫಿಕ್ಸ್ ಮಾಡುತ್ತಾರೆ. ಎಳೆ ಹುಡುಗಿಯರ ರೇಟು ತುಂಬಾ ಜಾಸ್ತಿ. ಏಕೆಂದರೆ, ಅವರಿಗೆ ಯಾವುದೇ ಗುಹ್ಯ ರೋಗ ಇರುವುದಿಲ್ಲ ಎಂಬ ಖಾತ್ರಿ ಇರುತ್ತದೆ. ಬರುವ ಹಣದಲ್ಲಿನ ಶೇ.50ರಷ್ಟು ದುಡ್ಡು ಈ ಲೇಡಿಗಳ ಕೈ ಸೇರುತ್ತದೆ. ಇವರಿಗೆ ಕೇರಳದ ಪ್ರಭಾವಿಗಳ ನೆಂಟಸ್ತನ ಕೂಡ ಇದೆ ಎಂದು ತಿಳಿದುಬಂದಿದೆ.
ಗಿರಾಕಿಗಳಾದರೂ ಎಂಥವರು?
ವಿದೇಶಿಯರು ಮತ್ತು ಬರೀ ಮಜಾ ಮಾಡಲು ಬರುವ ಹಣವಂತರು ಇವರ ಅಗ್ರಪಟ್ಟಿಯಲ್ಲಿದ್ದಾರೆ. ಹಿನ್ನೀರಿನಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲದ್ದರಿಂದ ಹೌಸ್ ಬೋಟನ್ನು ಬಾಡಿಗೆ ಪಡೆದು ಪ್ರಶಾಂತವಾದ ಪರಿಸರದಲ್ಲಿ ತಮ್ಮ ತೀಟೆಯನ್ನು ತೀರಿಸಿಕೊಳ್ಳುತ್ತಾರೆ. ಅರಬ್ ದೇಶದಿಂದ ಬರುವ ಗಿರಾಕಿಗಳ ಸಂಖ್ಯೆ ಜಾಸ್ತಿ ಎಂದು ಲೈಂಗಿಕ ಕೆಲಸಗಾರ್ತಿಯೊಬ್ಬಳು ಬಾಯಿಬಿಟ್ಟಿದ್ದಾಳೆ.
20 ವರ್ಷದ ಮಹಿಳೆಯ ಮಾರಾಟ
ಇತ್ತೀಚೆಗೆ 20 ವರ್ಷದ ಮಹಿಳೆಯನ್ನು ಈ ಜಾಲದಲ್ಲಿ ಬೀಳಿಸಲಾಗಿದ್ದು, ಮೂರು ದಿನಗಳ ಸಲುವಾಗಿ 45 ಸಾವಿರ ರು.ಗೆ ಅರಬ್ ಪ್ರಜೆಗೆ ಆಕೆಯನ್ನು ಮಾರಾಟ ಮಾಡಲಾಗಿತ್ತು. ಇದನ್ನು ಡೀಲ್ ಮಾಡಿದ್ದು ಜೆಸ್ಸಿ. ಜೀನತ್ ಮತ್ತು ಶೆಹ್ನಾ ಆಕೆಯನ್ನು ಕಾರಿನಲ್ಲಿ ಅರಬ್ ದೇಶಕ್ಕೆ ರವಾನಿಸಲು ಸಹಕರಿಸಿದ್ದರು. ಮೂವರು 35 ಸಾವಿರ ರು. ಹಂಚಿಕೊಂಡರೆ, ಮಹಿಳೆಗೆ 10 ಸಾವಿರ ರು. ನೀಡಲಾಗಿತ್ತು.
ಕಿರುಕುಳ ತಡೆಯಲಾರದೆ ಮಹಿಳೆ ಪರಾರಿಗೆ ಯತ್ನ
ಆದರೆ, ಒಂದೇ ದಿನದಲ್ಲಿ ಆ ಮಹಿಳೆ ಈ ಮೂವರ ಕಿರುಕುಳ ಮತ್ತು ಅರಬ್ ಪ್ರಜೆಯ ಹಿಂಸೆಯನ್ನು ತಡೆಯಲಾರದೆ ಪರಾರಿಯಾಗಲು ಯತ್ನಿಸಿದ್ದಳು. ಈ ರೀತಿ ನಡೆಯುತ್ತಿರುವುದು ಮೊದಲೇನಲ್ಲ. ಹೀಗೆ ಮಹಿಳೆಯರು ಲೈಂಗಿಕ ಕಿರುಕುಳ ತಾಳಲಾರದೆ ಪರಾರಿಯಾದ ಅನೇಕ ಘಟನೆಗಳಿವೆ ಎಂದು ಆ ಲೈಂಗಿಕ ಕೆಲಸಗಾರ್ತಿ ಹೇಳುತ್ತಾಳೆ.
ಈ ಜಾಲದಲ್ಲಿ ಇನ್ನೂ ಅನೇಕರಿದ್ದಾರೆ
ಈ ಜಾಲದಲ್ಲಿ ಈ ಮೂವರು ಮಹಿಳೆಯರು ಮಾತ್ರವಿಲ್ಲ. ಮನೆಮಠ ಕಳೆದುಕೊಂಡಿರುವ, ಗ್ರಾಮ ತ್ಯಜಿಸಿರುವ, ಹಣಕ್ಕಾಗಿ ಆಸೆಪಡುವ, ದುಡಿಮೆಗಾಗಿ ಕಷ್ಟಪಡುತ್ತಿರುವ ಸಾವಿರದೆಂಟನೂರು ಲೈಂಗಿಕ ಕಾರ್ಯಕರ್ತೆಯರು ಇದರಲ್ಲಿ ಭಾಗಿಯಾಗಿದ್ದಾರೆ. ಈ 'ಉದ್ಯಮ'ದಲ್ಲಿ ಸಿಗುವ ಹೇರಳ ಹಣ ಅವರನ್ನು ಈ ಕೃತ್ಯಕ್ಕೆ ಸೆಳೆಯುತ್ತಿದೆ.
ಗೋವಾವನ್ನೇ ಹಿಂದಿಕ್ಕಿದ ಕೇರಳ
ಲೈಂಗಿಕ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದ್ದ ಗೋವಾವನ್ನೇ ಕೇರಳ ಇತ್ತೀಚಿನ ವರ್ಷಗಳಲ್ಲಿ ಹಿಂದಿಕ್ಕಿದೆಯೆಂದರೆ ಇಲ್ಲಿ ನಡೆಯುತ್ತಿರುವ ಬಿಸಿನೆಸ್ ಎಂಥಾದ್ದಿರಬೇಕು ಲೆಕ್ಕ ಹಾಕಿ. 2006ರಲ್ಲಿ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಪ್ರಾಯೋಜಿಸಿದ್ದ ಸರ್ವೇ ಪ್ರಕಾರ ಅಲೆಪ್ಪಿಯಲ್ಲಿ ಅತಿ ಹೆಚ್ಚು ಮಾನವ ಕಳ್ಳಸಾಗಾಣಿಕೆ, ಮಕ್ಕಳ ಲೈಂಗಿಕ ಶೋಷಣೆ ನಡೆಯುತ್ತಿದೆ.
ಸರಕಾರದ ಹಿತ್ತಾಳೆ ಕಿವಿ
ಇದು ಸರಕಾರಕ್ಕೆ ಬರದಿರುವ ಸಂಗತಿಯೇನಲ್ಲ. ಮಾನವ ಹಕ್ಕು ಕಾರ್ಯಕರ್ತರು ಈ ಕುರಿತು ಹಲವಾರು ಬಾರಿ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ, ಇಲ್ಲಿಯ ಆಡಳಿತ ಇದಕ್ಕೆ ಕ್ಯಾರೆ ಅನ್ನುತ್ತಿಲ್ಲ. ಸಹಜವಾಗಿಯೇ ಇಂಥ 'ಶೋ ಬಿಸಿನೆಸ್' ನಡೆಯಲು ಸರಕಾರ ಅವಕಾಶ ನೀಡುತ್ತಿದೆಯೆ ಎಂಬ ಮಟ್ಟಿಗೆ ಅನುಮಾನದ ಮುಳ್ಳು ಸರಕಾರದತ್ತ ತಿರುಗಿದೆ. ಇಷ್ಟಕ್ಕೂ ಭಾರತದ ಆರ್ಥಿಕ ಅಭಿವೃದ್ಧಿಗೆ ಅತಿಹೆಚ್ಚು ಪಾಲು ನೀಡುತ್ತಿರುವುದು ಕೇರಳ ಅಲ್ಲವೆ?