ದೇವಾಲಯದಲ್ಲಿ ನಡೆದ ಅಪಶಕುನಕ್ಕೆ ಬೆಚ್ಚಿಬಿದ್ದ ಜನತೆ
ಮಂಡ್ಯ, ಜೂ 12: ಹಣ ಕಂಡರೆ ಹೆಣವೂ ಬಾಯಿ ಬಿಡುತ್ತೆ ಎನ್ನುವ ಗಾದೆಮಾತಿದೆ. ದೇವರ ಹುಂಡಿಯ ದುಡ್ಡು ಮತ್ತು ಅದಕ್ಕಿಂತ ಹೆಚ್ಚಾಗಿ ದೇವರ ಮೈಮೇಲಿರುವ ಒಡವೆಯನ್ನೂ ಬಿಡದ ಧನದಾಹಿಗಳ ಮಧ್ಯೆ ದೇವಾಲಯದಲ್ಲಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಪಶಕುನ ಎದುರಾಗದೆ ಇರುತ್ತದೆಯೇ ಎನ್ನುವುದು ಸ್ಥಳೀಯರ ಆತಂಕ.
ವಿಷಯ ಏನಂದರೆ, ರಾಜ್ಯದ ಮುಜರಾಯಿ ವ್ಯಾಪ್ತಿಗೆ ಬರುವ ಐತಿಹಾಸಿಕ ದೇವಾಲಯಗಳಲ್ಲಿ ಒಂದಾದ ಮಂಡ್ಯ ಜಿಲ್ಲೆಯ ಮೇಲುಕೋಟೆ ಚೆಲುವ ನಾರಾಯಣಸ್ವಾಮಿ ದೇವಾಲಯದ ಧ್ವಜಸ್ಥಂಭ ಮುರಿದು ವಾಲಿದೆ. ಈ ಧ್ವಜ ಮರದ ಮೇಲೆ ತಾಮ್ರದ ಹೊದಿಕೆಯಿಂದ ಮಾಡಲ್ಪಟ್ಟಿತ್ತು. ಇದಕ್ಕೆ ಚಿನ್ನದ ಲೇಪನ ಕೂಡಾ ನೀಡಲಾಗಿತ್ತು.
ಧ್ವಜಸ್ಥಂಭದ ಒಳಭಾಗದ ಮರ ಮುರಿದಿದ್ದರಿಂದ ಧ್ವಜಸ್ಥಂಭ ಒಂದು ಕಡೆಗೆ ವಾಲಿದೆ. ಚೆಲುವ ನಾರಾಯಣಸ್ವಾಮಿಗೆ ನಡೆಯುವ ಪ್ರಧಾನ ಪೂಜಾ ವಿಧಿವಿಧಾನಗಳಲ್ಲಿ ಧ್ವಜಸ್ಥಂಭ ಕೂಡಾ ಒಂದು. ಈಗ ಅದು ಭಿನ್ನವಾಗಿರುವುದರಿಂದ ಪೂಜಾ ಅರ್ಹತೆಯನ್ನು ಕಡೆದುಕೊಂಡಿದೆ.
ಬರುವ ತಿಂಗಳು ಕ್ಷೇತ್ರದಲ್ಲಿ ರಾಜಮುಡಿ ಉತ್ಸವ ನಡೆಯಲಿದೆ. ಉತ್ಸವದ ನಿಯಗಳ ಅನುಸಾರ ಈ ಧ್ವಜಸ್ಥಂಭದಲ್ಲಿ ಧ್ವಜಾರೋಹಣ ಮಾಡಿ ದೇವತೆಗಳನ್ನು ಆಹ್ವಾನಿಸಿ ಉತ್ಸವ ನಡೆಸುವುದು ವಾಡಿಕೆ.
ದೇವಾಲಯದಲ್ಲಿ ನಡೆಯುತ್ತಿರುವ ಅವ್ಯವಾಹರಗಳು, ಕ್ರಮಪ್ರಕಾರವಾಗಿ ಪೂಜೆಗಳು ನಡೆಯದೇ ಇರುವುದರಿಂದ ಸ್ಥಳೀಯರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಮೇಲುಕೋಟೆ ಸುತ್ತಮುತ್ತ ಮಳೆ ಬೀಳದೇ ಇರುವುದು ಅಪಶಕುನದ ಮುನ್ಸೂಚನೆ.
ಇನ್ನೂ ಏನೇನು ಕಾದಿದೆಯೋ ಎನ್ನುವ ಆತಂತಕದಲ್ಲಿ ಮೇಲುಕೋಟೆ ಜನತೆ ದಿನದೂಡುತ್ತಿದ್ದಾರೆ. ಭಿನ್ನವಾಗಿರುವ ಧ್ವಜಸ್ಥಂಭವನ್ನು ಉತ್ಸವದ ಮುನ್ನ ಸರಿಪಡಿಸುವಂತೆ ಜನತೆ ಧಾರ್ಮಿಕ ದತ್ತಿ ಇಲಾಖೆಗೆ ವಿನಂತಿಸಿಕೊಂಡಿದ್ದಾರೆ.
ಸದಾ ಸುದ್ದಿಯಲ್ಲಿರುವ ಮೇಲುಕೋಟೆ ದೇವಾಲಯ
ದುಡ್ಡು, ಒಣ ಪ್ರತಿಷ್ಠೆ ದೇವಾನುದೇವತೆಗಳನ್ನೇ ಬಿಟ್ಟಿಲ್ಲ ಎನ್ನುವುದಕ್ಕೆ ಈ ದೇವಾಲಯವೂ ಒಂದು ನಿದರ್ಶನ. ನಾಲ್ಕು ವರ್ಷಗಳಿಂದ ಕೋರ್ಟ್ ಮೆಟ್ಟಲೇರಿ ಪರಿಹಾರ ಕಾಣದ ಮೇಲುಕೋಟೆ ಯೋಗಾನರಸಿಂಹ ಸ್ವಾಮಿಯ ಹಣೆಗೆ ಯಾವ ನಾಮ ಹಾಕಬೇಕು ಎನ್ನುವುದು ಭಾರೀ ಚರ್ಚೆಗೆ ಒಳಗಾಗಿತ್ತು.
ದೇವರಿಗೆ ಯಾವ ನಾಮ
ಮೇಲುಕೋಟೆ ಯೋಗಾನರಸಿಂಹ ಸ್ವಾಮಿ ದೇವಾಲಯದಲ್ಲಿ ಸ್ವಾಮಿಗೆ 'U' ನಾಮ ಹಾಕಬೇಕೋ ಅಥವಾ 'Y' ನಾಮ ಹಾಕಬೇಕೋ ಎನ್ನುವ ವಿಚಾರದಲ್ಲಿ ದೇವಾಯಲದ ಆಡಳಿತ ವರ್ಗ ಮತ್ತು ಪೌರೋಹಿತ್ಯ ಬಳಗದಲ್ಲಿ ಭಾರೀ ಭಿನ್ನಾಭಿಪ್ರಾಯ ತಲೆದೋರಿ ಹೊಡೆದಾಟದ ಮಟ್ಟಕ್ಕೆ ಹೋಗಿತ್ತು.
ದೇವರ ಆಭರಣ ಮಾಯ
ಎರಡು ಬಣಗಳ ನಡುವೆ ನಾಮದ ವಿಚಾರದಲ್ಲಿ ಕಿತ್ತಾಟ ತಾರಕಕ್ಕೇರಿತ್ತು. ಸ್ವಾಮಿಗೆ ರಾಜರು ಕೊಟ್ಟ ರತ್ನ ಖಚಿತ ಹಣೆತಿಲಕವು ಕಳವಾಗಿತ್ತು, ಆದಾಗಿನಿಂದ ನಾಮದ ವಿಚಾರದಲ್ಲಿ ಎರಡು ಬಣಗಳ ನಡುವೆ ಮನಸ್ತಾಪಕ್ಕೆ ನಾಂದಿಯಾಯಿತು.
ಕೋರ್ಟ್ ಮೆಟ್ಟಲೇರಿದ ನಾಮದ ವಿಷ್ಯ
ನಾಮದ ವಿಚಾರಕ್ಕೆ ಪರಿಹಾರ ಸಿಗದೇ ಇದ್ದುದ್ದರಿಂದ ಯೋಗಾನರಸಿಂಹ ಸ್ವಾಮಿಗೆ ಯಾವ ನಾಮ ಹಾಕಬೇಕೋ ಅನ್ನೋ ವಿಷಯ ನ್ಯಾಯಾಲಯದ ಮೆಟ್ಟಲೇರಿತ್ತು. ಮುಂದಿನ ಆದೇಶ ನೀಡುವ ವರೆಗೆ ಯಥಾಸ್ಥಿತಿ ಕಾಪಾಡಿಕೊಂಡು ಬರಲು ಕೋರ್ಟ್ ಆದೇಶ ನೀಡಿತ್ತು.
ದಾಯಾದಿ ಕಲಹ
ಮುಖ್ಯವಾಗಿ ಕ್ಷೇತ್ರ ಒಂದಲ್ಲಾ ಒಂದು ರೀತಿಯಲ್ಲಿ ಚರ್ಚೆಗೆ ಒಳಗಾಗಲು ಕಾರಣ ದಾಯಾದಿ ಕಲಹ. ತಿಂಗಳೆಯರು ಮತ್ತು ಒಡಗಲಯರು ನಡುವಿನ ಭಿನ್ನಾಭಿಪ್ರಾಯ. ಪ್ರಧಾನ ಅರ್ಚಕ ಪಟ್ಟದಿಂದ ನರಸರಾಜ ಭಟ್ಟರನ್ನು ಕೆಳಗಿಳಿಸಲು ನಡೆಯುತ್ತಿರುವ ಹುನ್ನಾರ. ಸದ್ಯ ಧಾರ್ಮಿಕ ಪರಿಷತ್ ನರಸರಾಜ ಭಟ್ಟರನ್ನು ಅಮಾನತಿನಲ್ಲಿ ಇಟ್ಟಿರುವುದರಿಂದ ಅವರ ಸಹೋದರನಿಗೆ ಭಟ್ಟರು ಆ ಜಬಾಬ್ದಾರಿಯನ್ನು ವಹಿಸಿದ್ದಾರೆ.