ಕಡಿತಕ್ಕೊಳಗಾದ ಯುವಕ ಪಾರು, ಹಾವು ಸಾವು!
ಕಳೆದ ರಾತ್ರಿ 11 ಗಂಟೆಯ ಹೊತ್ತಿಗೆ ಮಲಗಿದ್ದ ಭರಮಪ್ಪನ ಬಳಿ ಹಾವು ಬಂದು ಮಲಗಿದೆ. ಭರಮಪ್ಪನ ಕೈತಗುಲಿದ್ದರಿಂದ ಎಚ್ಚೆತ್ತ ನಾಗರಹಾವು ಯುವಕನ ಬಲಗೈನ ತೋರುಬೆರಳನ್ನು ಕಚ್ಚಿದೆ. ಯಮಕನಮರಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭರಮಪ್ಪ ಸಾವಿನಿಂದ ಪಾರಾಗಿದ್ದಾನೆ. ಆದರೆ, ಆ ಅದೃಷ್ಟ ನಾಗರಹಾವಿಗಿರಲಿಲ್ಲ. ಕಚ್ಚಿದ ಹಾವು ಬುಧವಾರ ಬೆಳಗಿನ ಜಾವ ಸಾವನ್ನಪ್ಪಿದೆ.
ಗ್ರಾಮಸ್ಥರು ಹೇಳುವುದೇನೆಂದರೆ, ಹಾವನ್ನು ಯಾರೂ ಹೊಡೆದಿಲ್ಲ. ನಾಗರಹಾವನ್ನು ಹೊಡೆದರೆ ಕಚ್ಚಿದ ವ್ಯಕ್ತಿ ಸಾವಿಗೀಡಾಗುತ್ತಾನೆ ಎಂಬ ನಂಬಿಕೆ ಇಲ್ಲಿನ ಗ್ರಾಮಸ್ಥರಲ್ಲಿ ಬಲವಾಗಿದೆ. ಇಲ್ಲಿ ಕಚ್ಚಿಸಿಕೊಂಡ ಯುವಕ ಸತ್ತಿಲ್ಲ, ಬದಲಾಗಿ ಹಾವೇ ಸಾವಿಗೀಡಾಗಿದೆ. ಹಾವನ್ನು ತಾನು ಕೂಡ ಹೊಡೆದಿಲ್ಲ ಎಂದು ಯುವಕ ಭರಮಪ್ಪ ಹೇಳುತ್ತಾನೆ.
ಭರಮಪ್ಪನಿಗೆ ಹಾವು ಕಚ್ಚಿದ ಸಂಗತಿ ಸ್ನೇಹಿತರಿಂದ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದಾರೆ. ಭರಮಪ್ಪನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಕಚ್ಚಿದ ಹಾವಿನ ಸುತ್ತ ಗ್ರಾಮಸ್ಥರು ಜಮಾಯಿಸಿದ್ದಾರೆ. ಯಾರೂ ಅದನ್ನು ಹೊಡೆಯದಂತೆ ಬೆಳಗಿನ ಜಾವದವರೆಗೆ ಎಚ್ಚರ ವಹಿಸಿದ್ದಾರೆ. ಬೆಳಿಗ್ಗೆ ನೋಡಿದಾಗ ಹಾವು ಸಾವಿಗೀಡಾಗಿತ್ತು. ಪಾಶಾಣ ತಿಂದ ಇಲಿಯನ್ನು ನುಂಗಿದ ಪರಿಣಾಮವಾಗಿ ಹಾವು ಸಾವಿಗೀಡಾಗಿದೆ ಎಂದು ತಿಳಿದುಬಂದಿದೆ.