ಸಭೆ ಮುಕ್ತಾಯ; ಸಿದ್ದುಗೆ ಗದ್ದುಗೆ ಸಾಧ್ಯತೆ?
ಲಕೋಟೆ ಹೋಗಿ, ಚೀಟಿ ಬಂತು: ಎಐಸಿಸಿಯಿಂದ ವೀಕ್ಷಕರಾಗಿ ಆಗಮಿಸಿರುವ ಕೇಂದ್ರ ರಕ್ಷಣಾ ಸಚಿವ ಎ.ಕೆ.ಆಂಟನಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಶಾಸಕರು ಸಿದ್ದರಾಮಯ್ಯ ಪರವಾಗಿ ಬೆಂಬಲ ಸೂಚಿಸಿದ್ದಾರೆ. 70 ಶಾಸಕರು ಬೆಂಬಲ ಸೂಚಿಸುವ ಅಭ್ಯರ್ಥಿಯನ್ನು ಸಿಎಂ ಎಂದು ಘೋಸಿಸಲು ಕೇಂದ್ರ ವೀಕ್ಷಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಚೀಟಿ ಮೂಲಕ ಪ್ರತಿಯೊಬ್ಬರ ಶಾಸಕರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಪ್ರತಿ ಶಾಸಕರು ಚೀಟಿಯಲ್ಲಿ ತಮ್ಮ ಹೆಸರು, ಕ್ಷೇತ್ರದ ಹೆಸರು ಮತ್ತು ಸಿಎಂ ಅಭ್ಯರ್ಥಿ ಹೆಸರು ಬರೆದು ವೀಕ್ಷಕರಿಗೆ ನೀಡುತ್ತಿದ್ದಾರೆ. ಗೌಪ್ಯವಾಗಿ ಈ ಪ್ರಕ್ರಿಯೆ ನಡೆಯುತ್ತಿದ್ದು, ಶಾಸಕರಿಗೆ ಅವರ ಅಭಿಪ್ರಾಯ ವ್ಯಕ್ತಪಡಿಸಲು ಸೂಕ್ತ ಅವಕಾಶ ಒದಗಿಸಲಾಗಿದೆ.
ಸೋನಿಯಾಗೆ ಮಾಹಿತಿ : ಶಾಸಕಾಂಗ ಸಭೆಯ ಒಟ್ಟಾರೆ ಚಿತ್ರಣನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಈಗಾಗಲೇ ನೀಡಲಾಗಿದೆ. ಎಲ್ಲಾ ಶಾಸಕರ ಅಭಿಪ್ರಾಯ ಪಡೆದು ಒಮ್ಮತದ ನಿರ್ಣಯ ಕೈಗೊಳ್ಳುವಂತೆ ಸೋನಿಯಾ ಎ.ಕೆ.ಆಂಟನಿ ಅವರಿಗೆ ಸೂಚನೆ ನೀಡಿದ್ದಾರೆ.
ಬಹುತೇಕ ಶಾಸಕರು ಸಿದ್ದರಾಮಯ್ಯ ಪರವಾಗಿ ಬ್ಯಾಂಟಿಗ್ ಮಾಡಿದ್ದು, ಸಿದ್ದರಾಮಯ್ಯ ಗದ್ದುಗೆ ಏರುವುದು ಬಹುತೇಕ ಖಚಿತವಾಗಿದೆ. ಮಲ್ಲಿಕಾರ್ಜುನ ಖರ್ಗೆ ಹೆಸರನ್ನು ಉತ್ತರ ಕರ್ನಾಟಕ ಭಾಗದ ಕೆಲವು ಶಾಸಕರು ಸೂಚಿಸಿದರು, ಸಿದ್ದರಾಮಯ್ಯ ಹೆಚ್ಚಿನ ಮತ ಪಡೆದಿದ್ದಾರೆ.
ಕೇಂದ್ರದಿಂದ ಆಗಮಿಸಿದ ವೀಕ್ಷಕರು ದೆಹಲಿಗೆ ತೆರಳಿ ಸೋನಿಯಾ ಗಾಂಧಿ ಅವರಿಗೆ ವರದಿ ನೀಡಿದ ನಂತರ ಸಿಎಂ ಅಭ್ಯರ್ಥಿ ಹೆಸರು ಪ್ರಕಟಗೊಳ್ಳುತ್ತಿತ್ತು. ಆದರೆ, ಬಹುಮತ ಪಡೆದ ಅಭ್ಯರ್ಥಿಯ ಹೆಸರನ್ನು ಇಂದು ಸಂಜೆಯೇ ಪ್ರಕಟಿಸುವ ಸಾಧ್ಯತೆ ಇದೆ.
ಸಂಪುಟಕ್ಕೆ ಡಾ.ಜಿ.ಪರಮೇಶ್ವರ್ : ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರು ತಮ್ಮ ಸ್ವ ಕ್ಷೇತ್ರ ಕೊರಟಗೆರೆಯಲ್ಲಿ ಸೋಲು ಅನುಭವಿಸಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮಶ್ವರ್ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿ ಸಚಿವ ಸ್ಥಾನ ನೀಡುವ ಬಗ್ಗೆ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಮೇ 13ಕ್ಕೆ ಪ್ರಮಾಣ ವಚನ : ನೂತನ ಮುಖ್ಯಮಂತ್ರಿ ಮೇ 13ರಂದು ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕ್ರೀಡಾಂಗಣದಲ್ಲಿ ಸಮಾರಂಭಕ್ಕೆ ಸಿದ್ಧತೆಗಳು ಈಗಾಗಲೇ ಪ್ರಾರಂಭವಾಗಿದೆ.
ವಿಧಾನಸೌಧದ ಮುಂಭಾಗದಲ್ಲಿ ನಮ್ಮ ಮೆಟ್ರೋ ಕಾಮಗಾರಿ ನಡೆಯುತ್ತಿರುವುದರಿಂದ ಸ್ಥಳಾವಕಾಶದ ಕೊರತೆ ಉಂಟಾಗಿದೆ. ಆದ್ದರಿಂದ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಸಮಾರಂಭ ನಡೆಸಲು ತೀರ್ಮಾನಿಸಲಾಗಿದೆ.