ಗುರುವಾರ ಮಧ್ಯಾಹ್ನದ ರಾಜಕೀಯ ಬೆಳವಣಿಗೆಗಳು
ಕಾಂಗ್ರೆಸ್ ಕಚೇರಿ ಮತ್ತು ನಾಯಕರ ಮನೆಗಳು ಕಾರ್ಯಕರ್ತರಿಂದ ತುಂಬಿ ಹೋಗಿದೆ. ಬಿಜೆಪಿ, ಕೆಜೆಪಿ, ಜೆಡಿಎಸ್ ಮತ್ತು ಬಿಎಸ್ಆರ್ ನಾಯಕರು ಚಿಕ್ಕಪುಟ್ಟ ಹೇಳಿಕೆಗಳನ್ನು ನೀಡುತ್ತಾ ಸೋಲಿನ ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದಾರೆ. ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪತ್ರಿಕಾಗೋಷ್ಠಿ ನಡೆಸಿದ್ದಾರೆ.
ರಾಜ್ಯದಲ್ಲಿ ಬಿರುಸಿನಿಂದ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳು ನಡೆಯುತ್ತಿವೆ. ಕಾಂಗ್ರೆಸ್ ಪಕ್ಷ ದೆಹಲಿಯಿಂದ ಬರುವ ನಾಯಕರಿಗಾಗಿ ಕಾದು ಕುಳಿತಿದೆ. From horse mouth ಎಂಬಂತೆ ಕೆಲವು ನಾಯಕರುಗಳು ಖುದ್ದಾಗಿ ತಾವೇ ಸಿಎಂ ಆಗುವ ಬಗ್ಗೆ ಬಾಯಿ ಬಿಟ್ಟಿದ್ದಾರೆ.
ರಾಷ್ಟ್ರೀಯ ನಾಯಕರ ತೀರ್ಮಾನ : ಎಲ್ಲಾ 121 ಶಾಸಕರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಆದ್ದರಿಂದ ನನಗೆ ಸಿಎಂ ಸ್ಥಾನ ನೀಡಬೇಕು ಎಂಬುದು ನನ್ನ ಅಭಿಪ್ರಾಯ. ನಾಳೆ ಹೈ ಕಮಾಂಡ್ ನಾಯಕರು ರಾಜ್ಯಕ್ಕೆ ಆಗಮಿಸಲಿದ್ದಾರೆ. ಶಾಸಕರ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ನಾನು ಆಕಾಂಕ್ಷಿ : ಪಕ್ಷವನ್ನು ಸಮರ್ಥವಾಗಿ ಮುನ್ನೆಡಸಿ ಅಧಿಕಾರದ ಗದ್ದುಗೆಗೆ ತಂದು ಕೂರಿಸಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನಾನು ಸಿಎಂ ಸ್ಥಾನದ ಆಕಾಂಕ್ಷಿ ಎಂದು ಹೇಳಿದ್ದಾರೆ. ತಮ್ಮ ಸ್ವ ಕೇತ್ರ ಕೊರಟಗೆರೆಯಲ್ಲಿ ಅವರು ಸೋಲು ಅನುಭವಿಸಿದ್ದರೂ. ಪಕ್ಷಕ್ಕೆ ಬಹುಮತ ತಂದು ಕೊಡಲು ಶ್ರಮಿಸಿದ್ದೇನೆ. ಆದ್ದರಿಂದ ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂದರು.
ಆರ್.ವಿ.ದೇಶಪಾಂಡೆ ಟವೆಲ್ : ಕೆಪಿಸಿಸಿ ಮಾಜಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ನಾನು ಸಿಎಂ ಸ್ಥಾನದ ಆಕಾಂಕ್ಷಿ. ಪಕ್ಷದ ನಾಯಕರ ಮೇಲೆ ನನಗೆ ನಂಬಿಕೆ ಇದೆ. ಅವರು ನನಗೆ ಮುಖ್ಯಮಂತ್ರಿ ಹುದ್ದೆ ನೀಡುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ನಾನು ಸಿಎಂ, ತೀರ್ಮಾನವೇ ಮಾತ್ರ ಬಾಕಿ : ನಾನು ಸಿಎಂ ಸ್ಥಾನ ಏರುವುದು ಖಚಿತ. ಆದರೆ, ಹೈ ಕಮಾಂಡ್ ನಾಯಕರು ಅಂತಿಮ ತೀರ್ಮಾವನ್ನು ತೆಗೆದುಕೊಳ್ಳಬೇಕು ಎಂದು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಒಕ್ಕಲಿಗರಿಗೆ ಕೊಡಿ ಜಯಚಂದ್ರ : ಮುಖ್ಯಮಂತ್ರಿ ಸ್ಥಾನವನ್ನು ಒಕ್ಕಲಿಗ ಸಮುದಾಯಕ್ಕೆ ನೀಡಬೇಕು, ನಾನು ಪಕ್ಷಕ್ಕೆ ನಿಷ್ಠನಾಗಿ ಕೆಲಸ ಮಾಡಿದ್ದೇನೆ. ಆದ್ದರಿಂದ ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಟಿ.ಬಿ.ಜಯಚಂದ್ರ ದೆಹಲಿಯಲ್ಲಿ ಹೇಳಿದ್ದಾರೆ.
ಪಕ್ಷ ಸಂಘಟನೆ ಮಾಡುತ್ತೇನೆ : ಕೆಜೆಪಿ ಚುನಾವಣೆಯಲ್ಲಿ ಶೇ 10 ರಷ್ಟು ಗೆಲುವು ಸಾಧಿಸಿದೆ. ಮಾನ್ಯತೆ ಪಡೆದ ಪಕ್ಷದ ಸ್ಥಾನಕ್ಕೆ ಕೆಜೆಪಿ ಸೇರ್ಪಡೆಯಾಗಿದೆ. ಕಡಿಮೆ ಅವಧಿಯಲ್ಲಿ ಪಕ್ಷದ ಸಾಧನೆ ತೃಪ್ತಿ ತಂದಿದೆ ಎಂದು ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ರಾಜ್ಯಾದ್ಯಂತ ಸಂಚರಿಸಿ ಪಕ್ಷ ಸಂಘಟನೆ ಮಾಡುವುದಾಗಿ ತಿಳಿಸಿದರು.