ರೈತರ ಏಕೈಕ ಜನಪ್ರತಿನಿಧಿ ಕೆಎಸ್ ಪುಟ್ಟಣ್ಣಯ್ಯ
ಬೆಂಗಳೂರು, ಮೇ 8: ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ ಸರ್ವೋದಯ ಪಕ್ಷದ ವತಿಯಿಂದ ಮೇಲುಕೋಟೆ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ರೈತರ ಏಕೈಕ ಪ್ರತಿನಿಧಿಯಾಗಿ ಮತ್ತೊಮ್ಮೆ ವಿಧಾನಸಭೆ ಪ್ರವೇಶಿಸಲು ಸಜ್ಜಾಗಿದ್ದಾರೆ. ಪುಟ್ಟಣ್ಣಯ್ಯ ಅವರ ಗೆಲುವಿನ ಹಿನ್ನೆಲೆಯಲ್ಲಿ ರಾಜ್ಯ ರೈತ ಸಂಘ ವತಿಯಿಂದ ಎಲ್ಲೆಡೆ ಪಟಾಕಿ ಸಿಡಿಸಿ-ಸಿಹಿ ಹಂಚಿ ಸಂಭ್ರಮ ಆಚರಿಸಿದೆ.
ರಾಜ್ಯ ರೈತರ ಧ್ವನಿಯಾಗಿರುವ ಕೆಎಸ್ ಪುಟ್ಟಣ್ಣಯ್ಯ ಅವರು ಎರಡನೇ ಬಾರಿಗೆ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ. 1994ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ನಂತರ ಸತರ ಮೂರು ಬಾರಿ ಸೋಲಿನ ಕಹಿ ಉಂಡಿದ್ದರು. ಆದರೆ, ಈ ಬಾರಿ ಜಾಣ್ಮೆಯಿಂದ, ಜನ ಪ್ರೀತಿಯಿಂದ ಪುಟ್ಟಣ್ಣಯ್ಯ ಅವರು ಜನಪ್ರತಿನಿಧಿಯಾಗಿದ್ದಾರೆ.
ಮೇಲುಕೋಟೆ
ವಿಧಾನಸಭಾ
ಕ್ಷೇತ್ರದಲ್ಲಿ
ಪುಟ್ಟಣ್ಣಯ್ಯ
ಅವರ
ಗೆಲುವು
ಸುಲಭವಾಗಿರಲಿಲ್ಲ.
ರೈತ
ಮುಖಂಡರಾದರೂ
ಸಾಮಾಜಿಕ
ಜಾಲ
ತಾಣಗಳ
ಮೂಲಕ
ಪ್ರಚಾರಕ್ಕೆ
ಇಳಿದು
ಜನಜಾಗೃತಿ
ಮೂಡಿಸಿದ
ಮೊದಲ
ಅಭ್ಯರ್ಥಿಯಾಗಿ
ಯಶ
ಸಾಧಿಸಿದ್ದಾರೆ.
ರಾಜ್ಯ ರೈತ ಸಂಘ ಹಾಗೂ ಚುನಾವಣೆ: 1989ರ ಚುನಾವಣೆಯಲ್ಲಿ ಬಾಬಾಗೌಡ ಪಾಟೀಲ್ ಅವರು ಕಿತ್ತೂರು ಹಾಗೂ ಧಾರವಾಡ ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧೆಗಿಳಿದಿದ್ದರು. ಕಿತ್ತೂರು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಧಾರವಾಡ ಗ್ರಾಮಾಂತರ ಕ್ಷೇತ್ರವನ್ನು ಅಂದಿನ ರಾಜ್ಯ ರೈತ ಸಂಘದ ಅಧ್ಯಕ್ಷ ಪ್ರೊ.ಎಂ.ಡಿ ನಜುಂಡಸ್ವಾಮಿ ಅವರು ಪ್ರತಿನಿಧಿಸಿ, ಆಯ್ಕೆಯಾಗಿದ್ದರು.
ಈ ಬಾರಿ ಪುಟ್ಟಣ್ಣಯ್ಯ ಅವರು ಹಸಿರು ಶಾಲು ಹೊದ್ದು ರೈತರ ಪ್ರತಿನಿಧಿಯಾಗಿ ಮೇಲುಕೋಟೆಯಲ್ಲಿ ಪ್ರಚಾರಕ್ಕೆ ಆಗಮಿಸಿದಾಗಲೇ ಗೆಲುವಿನ ರುಚಿ ಉಂಡಿದ್ದರು. ಎಲ್ಲೆಡೆ ಮುದ್ದೆ ಬಸ್ಸಾರು ಊಟ, ನೀರು ಮಜ್ಜಿಗೆ ನೀಡಿದ ಜನರು ಮನೆ ಮಗನಂತೆ ತಮ್ಮ ಕ್ಷೇತ್ರ ಅಭ್ಯರ್ಥಿಯನ್ನು ಕಂಡರು. ಇದರ ಜೊತೆಗೆ ಕೆಎಸ್ ಪುಟ್ಟಣ್ಣಯ್ಯ ಅವರಿಗೆ ಯಡಿಯೂರಪ್ಪ ಅವರ ಕರ್ನಾಟಕ ಜನತಾ ಪಕ್ಷದ ಬೆಂಬಲವೂ ಸಿಕ್ಕಿತು.
ಮೇಲುಕೋಟೆ ಕಣದಲ್ಲಿ 13 ಜನರಿದ್ದರೂ ಜೆಡಿಎಸ್ ನ ಎರಡು ಬಾರಿ ಶಾಸಕ ಸಿ.ಎಸ್ ಪುಟ್ಟರಾಜು ಅವರ ಪ್ರಬಲ ಪೈಪೋಟಿ ನಡುವೆ ಪುಟ್ಟಣ್ಣಯ್ಯ ಅವರು 80041 ಮತ ಗಳಿಸಿದ್ದಾರೆ. ಪುಟ್ಟರಾಜು 70193 ಮತ ಪಡೆದು ಸೊಲೊಪ್ಪಿಕೊಂಡಿದ್ದಾರೆ.
ಗೆಲುವಿನ ಕಾರಣ: ಕಾವೇರಿ ನೀರಿಗಾಗಿ ಹೋರಾಟ, ಸಕ್ಕರೆ ಕಾರ್ಖಾನೆ, ಕಬ್ಬಿಗೆ ಬೆಂಬಲ ಬೆಲೆಗಾಗಿ ಹೋರಾಟ ಎಲ್ಲವೂ ರೈತ ಮುಖಂಡ ಪುಟ್ಟಣ್ಣಯ್ಯ ಅವರನ್ನು ಚಿರಪರಿಚಿತರನ್ನಾಗಿಸಿದೆ. ಇದರ ಜೊತೆಗೆ ಈ ಬಾರಿ ಪ್ರಚಾರ ಕಾರ್ಯದಲ್ಲಿ ಎಲ್ಲರಿಗಿಂತ ಮುಂದಿದ್ದರು. ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಪುಟ ಆರಂಭಿಸಿದರು, ಪ್ರತ್ಯೇಕ ಜಾಹೀರಾತು ನೀಡಿದರು. ತಮ್ಮದೇ ಆದ ಅಚ್ಚುಕಟ್ಟಾದ ವೆಬ್ ಸೈಟ್ ಅದೂ ಕನ್ನಡದಲ್ಲಿ ರೂಪಿಸಿ, ಕನ್ನಡ ಟೆಕ್ಕಿಗಳಿಗೂ ಹತ್ತಿರಾಗಿದ್ದು ಸುಳ್ಳಲ್ಲ.
"a proud farmer, activist and leader fighting for farmers' rights, tirelessly". ಎನ್ನುವ ಅವರ ಫೇಸ್ ಬುಕ್ ಪುಟದ ವಾಕ್ಯ ಬೆಂಗಳೂರಿನ ಟೆಕ್ಕಿಗಳು ಮೇಲುಕೋಟೆಯತ್ತ ನೋಡುವಂತೆ ಮಾಡಿತು. ಬಾಯಿ ಪ್ರಚಾರದ ಜೊತೆಗೆ ರೈತ ಮುಖಂಡನನ್ನು ಬೆಂಬಲಿಸಿ ಎಂದು ಎಲ್ಲರೂ ಸ್ವಯಂ ಪ್ರೇರಣೆಯಿಂದ ಪ್ರಚಾರಕ್ಕಿಳಿದರು.
ರಾಜ್ಯ ರೈತರ ಸಮಸ್ಯೆ ಲೋಡ್ ಶೆಡ್ಡಿಂಗ್, ರೈತರಿಗೆ ಸಾಲ, ಉಚಿತ ವಿದ್ಯುತ್, ಮರಳಿ ಊರಿಗೆ, ರೈತರ ಆತ್ಮಹತ್ಯೆ ಮುಂತಾದ ಸಮಸ್ಯೆಗಳತ್ತ ಗಮನ ಹರಿಸುವ ಭರವಸೆಯನ್ನು ಪುಟ್ಟಣ್ಣಯ್ಯ ನೀಡಿದ್ದಾರೆ. ರೈತರ ಆಶಾಕಿರಣವಾಗಿ ಪುಟ್ಟಣ್ಣಯ್ಯ ಅಸೆಂಬ್ಲಿಗೆ ಕಾಲಿಡುತ್ತಿದ್ದಾರೆ. ಮುಂದೇನಾಗುವುದೋ ಕಾದು ನೋಡೋಣ