ಮತಎಣಿಕೆಗೂ ಮುನ್ನವೇ ಸೋಲೊಪ್ಪಿದ ಮಾಜಿ ಮಂತ್ರಿ
ಚುನಾವಣೆಗೆ ಮುನ್ನ ತಮ್ಮ ಪ್ರತಿಸ್ಪರ್ಧಿ ಡಿಕೆ ಶಿವಕುಮಾರ್ ಅವರು ಚುನಾವಣಾ ಅಕ್ರಮಗಳನ್ನು ಎಸಗುತ್ತಿದ್ದಾರೆ ಎಂದು 'ಡಿಕೆಶಿ ಸೀರೆಗಳನ್ನು' ಎಳೆ ಎಳೆಯಾಗಿ ಬಿಡಿಸಿಟ್ಟಿದ್ದ ಸಿಂಧ್ಯಾ ಅವರು ಚುನಾವಣೋತ್ತರದಲ್ಲಿ ಡಿಕೆಶಿ ವಿರುದ್ಧ ಭಾರಿ ಗಂಭೀರ ಆರೋಪವನ್ನೇ ಮಾಡಿದ್ದಾರೆ. ಏನಪಾ ಅಂದರೆ ಚುನಾವಣಾ ಸಿಬ್ಬಂದಿಯ ಜತೆಯೇ ಡಿಕೆಶಿ ಶಾಮೀಲಾಗಿ ಭಾರಿ ಅಕ್ರಮಗಳನ್ನು ಎಸಗಿದ್ದಾರೆ. ಹಾಗಾಗಿ ಚುನಾವಾಣಾಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪಿಜಿಆರ್ ಆಗ್ರಹಿಸಿದ್ದಾರೆ.
ಹಾಗಂತ ಡಿಕೆಶಿ ಏನೂ ಕೇಳಿಲ್ಲ: 'ಓಕೆ ಅಕ್ಸಪ್ಟೆಡ್. ನಾನು ಚುನಾವಣಾ ಅಕ್ರಮ ಎಸಗಿದ್ದೇನೆ. ಒಂದು ವೇಳೆ ಸಿಂಧ್ಯಾನೇ ಜಯಶಾಲಿಯಾದರೆ ಸಾಹೇಬರು ಏನ್ಮಾಡ್ತರಂತೆ' ಎಂದು ಡಿಕೆ ಶಿವಕುಮಾರ್ ಅವರೇನೂ ಕೇಳಿಲ್ಲ.
ಬೆಂಗಳೂರು ಪ್ಯಾಲೆಸ್ ಎದುರು ಇರುವ ಜೆಡಿಎಸ್ ಮಾಧ್ಯಮ ಕೇಂದ್ರದಲ್ಲಿ ಪತ್ರಿಕಾಗೋಷ್ಠಿ ನಡೆಸಿ 'ಮತಯಂತ್ರಗಳ ಅಂಕಿ-ಅಂಶಗಳನ್ನು ತಿರುಚಲಾಗಿದೆ. ಈ ಬಗ್ಗೆ ಚುನಾವಣಾ ಆಯೋಗ ತನಿಖೆ ನಡೆಸಬೇಕು' ಎಂದು ಪಿಜಿಆರ್ ಒತ್ತಾಯಿಸಿದ್ದಾರೆ.
ಈ ಆರೋಪಕ್ಕೆ 'ಬಲಾಢ್ಯ ಸಾಕ್ಷ್ಯವನ್ನೂ' ಒದಗಿಸಿರುವ ಮಾಜಿ ಸಚಿವ ಪಿಜಿಆರ್, ಚುನಾವಣೆಯ ದಿನ ಕನಕಪುರ ಕ್ಷೇತ್ರದ ಮತಯಂತ್ರಗಳನ್ನು ಶಿವಕುಮಾರ್ ಟ್ರಸ್ಟಿಯಾಗಿರುವ ಶಾಲೆಯಲ್ಲಿ ಅಕ್ರಮವಾಗಿ ಇರಿಸಲಾಗಿತ್ತು. ಕನಕಪುರದ ಎಲ್ಲ ಪ್ರದೇಶದಲ್ಲಿ ಆ ಸಮಯದಲ್ಲಿ ಕರೆಂಟ್ ಇದ್ದರೂ, ಮತ ಯಂತ್ರಗಳನ್ನು ಇರಿಸಲಾಗಿದ್ದ ಶಾಲೆಯಲ್ಲಿ ಮಾತ್ರ ರಾತ್ರಿ 8 ರಿಂದ 10 ಗಂಟೆ ತನಕ ಕರೆಂಟ್ ಹೋಗಿತ್ತು. ಈ ಅವಧಿಯಲ್ಲಿ ಮತ ಯಂತ್ರಗಳ ಅಂಕಿಗಳನ್ನು ತಿರುಚಲಾಗಿದೆ' ಎಂದು ಆಪಾದಿಸಿದ್ದಾರೆ.
ಈ ನಡುವೆಯೂ ಜೆಡಿಎಸ್ ಅಭ್ಯರ್ಥಿ ಪಿಜಿಆರ್ ಸಿಂಧ್ಯಾ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು.