ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರು?
ಬೆಂಗಳೂರು, ಮೇ 6 : ಮತದಾನ ಮುಕ್ತಾಯವಾಗಿ ಪಕ್ಷಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ. ಮತದಾನಕ್ಕೆ ಮೊದಲು ಮತ್ತು ನಂತರ ವಿವಿಧ ರೀತಿಯ ಸಮೀಕ್ಷೆಗಳು ಕಾಂಗ್ರೆಸ್ ಸರ್ಕಾರ ರಚಿಸಲಿದೆ ಎಂದು ಭವಿಷ್ಯ ನುಡಿದಿದೆ. ಕಾಂಗ್ರೆಸ್ ಸರ್ಕಾರ ರಚನೆಯಾದರೆ ಯಾರು ಮುಖ್ಯಮಂತ್ರಿ? ಎಂಬ ಪ್ರಶ್ನೆ ಈಗ ಉದ್ಭವವಾಗಿದೆ.
ಈಗಾಗಲೇ ನಾನು ಮುಖ್ಯಮಂತ್ರಿ ಎಂದು ಮೂವರು ನಾಯಕರು ಬಹಿರಂಗವಾಗಿ ಘೋಷಿಸಿಕೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಹೆಸರುಗಳು ಸಿಎಂ ರೇಸ್ ನಲ್ಲಿ ಪ್ರಮುಖವಾಗಿ ಕೇಳಿಬರುತ್ತಿವೆ.
ಹಿರಿಯ ಮುಖಂಡ ಮತ್ತು ಕೆಪಿಸಿಸಿ ಖಜಾಂಚಿ ಶಾಮನೂರು ಶಿವಶಂಕರಪ್ಪ ನಾನು ಸಿಎಂ ಸ್ಥಾನದ ಆಕಾಂಕ್ಷಿ ಎಂದು ಹೇಳಿದ್ದಾರೆ. ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಮನಸ್ಸಿನ ಆಸೆಯನ್ನು ಹೊರಗೆ ಹೇಳದಿದ್ದರೂ, ನಾನು ಯಾಕಾಗಬಾರದು? ಎಂಬ ಆಲೋಚನೆಯಲ್ಲಿದ್ದಾರೆ.
ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತಗಳಿಸದೆ ಬೇರೆಯವರ ಬೆಂಬಲ ಪಡೆದು ಅಧಿಕಾರ ಪಡೆದರೆ ಯಾರು ಸಿಎಂ ಆಗುತ್ತಾರೆ? ಎಂಬುದು ಮತ್ತೊಂದು ಲೆಕ್ಕಾಚಾರ. ಕಾಂಗ್ರೆಸ್ ಪಕ್ಷದಲ್ಲಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫರ್ನಾಂಡಿಸ್ ಹೆಸರುಗಳು ಸಹ ಸಿಎಂ ಪಟ್ಟಕ್ಕೆ ಕೇಳಿಬರುತ್ತಿದೆ. ಯಾವ ನಾಯಕರ ಪ್ಲಸ್ ಪಾಯಿಂಟ್ ಗಳೇನು ಎಂದು ತಿಳಿಯೋಣ.
ಡಾ.ಜಿ.ಪರಮೇಶ್ವರ್
ಪಕ್ಷ ಯಾರ ಅಧ್ಯಕ್ಷತೆಯಲ್ಲಿ ಚುನಾವಣೆ ಎದುರಿಸುತ್ತದೆಯೋ, ಬಹುಮತ ಪಡೆದರೆ ಅವರೇ ಮುಖ್ಯಮಂತ್ರಿ ಎಂಬುದು ತೀರ್ಮಾನವಾದರೆ ಪರಮಶ್ವರ್ ಸಿಎಂ ಆಗುವುದರಲ್ಲಿ ಸಂಶಯವಿಲ್ಲ. ಸಭ್ಯ ರಾಜಕಾರಣಿ ಎಂಬ ಹೆಸರು ಸಹ ಪರಮೇಶ್ವರ್ ಅವರನ್ನು ಖುರ್ಚಿ ಮೇಲೆ ಕೂರಿಸಬಹುದು.
ಸಿದ್ದರಾಮಯ್ಯ
ಅಪಾರ ರಾಜಕೀಯ ಅನುಭವದ ರಾಜಕಾರಣಿ ಸಿದ್ದರಾಮಯ್ಯ "ನಾನೇ ಮುಖ್ಯಮಂತ್ರಿ" ಎಂದು ಹಲವು ಬಾರಿ ಹೇಳಿದ್ದಾಗಿದೆ. ಹಿಂದುಳಿದ ವರ್ಗದ ಪ್ರಬಲ ನಾಯಕ ಎಂಬ ಪಟ್ಟವೂ ಇದೆ. ಕಾಂಗ್ರೆಸ್ ಅಧಿಕಾರ ಪಡೆದರೆ ನೀವೇ ಮುಖ್ಯಮಂತ್ರಿ ಎಂದು ಹೈಕಮಾಂಡ್ ನಾಯಕರು ಹಲವು ಬಾರಿ ಅವರಿಗೆ ಭರವಸೆ ನೀಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ
ಚುನಾವಣೆ ಪ್ರಾರಂಭವಾದ ನಂತರ ಪಕ್ಷದ ಸಿಎಂ ಸ್ಥಾನಕ್ಕೆ ಖರ್ಗೆ ಅವರ ಹೆಸರು ಕೇಳಿಬರುತ್ತಿದೆ. ಕೇಂದ್ರ ಸಚಿವರು, ಹೈ ಕಮಾಂಡ್ ನಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದಾರೆ ಎಂಬ ಅಂಶಗಳು ಖರ್ಗೆ ಅವರಿಗೆ ಪ್ಲಸ್. ಆದರೆ, ಅವರು ರಾಜ್ಯ ರಾಜಕಾರಣಕ್ಕೆ ಮರಳುತ್ತಾರೆಯೇ ಎಂಬುದು ಪ್ರಶ್ನೆ?
ವೀರಪ್ಪ ಮೊಯ್ಲಿ
ಹಾಲಿ ಕೇಂದ್ರ ಸಚಿವ, ಚಿಂತಕ, ಮಾಜಿ ಮುಖ್ಯಮಂತ್ರಿ ಎಂಬ ಅಂಶಗಳು ಸೇರಿಕೊಂಡರೆ ವೀರಪ್ಪ ಮೊಯ್ಲಿ ಸಿಎಂ ಸ್ಥಾನ ಏರುವುದು ಖಚಿತ. ದೆಹಲಿ ವಲಯದಲ್ಲೂ ಅತ್ಯಂತ ಪ್ರಭಾವಿ ವ್ಯಕ್ತಿ ಆಗಿರುವುದರಿಂದ ಇವರ ಹೆಸರು ಕೇಳಿ ಬರುತ್ತಲಿದೆ.
ಶಾಮನೂರು ಶಿವಶಂಕರಪ್ಪ
"ನಾನು ಸಿಎಂ ಸ್ಥಾನದ ಆಕಾಂಕ್ಷಿ" ಎಂದು ಶಾಮನೂರು ಶಿವಶಂಕರಪ್ಪ ಘೋಷಿಸಿ ಹಲವು ದಿನಗಳು ಕಳೆದಿವೆ. ಕೆಪಿಸಿಸಿ ಖಜಾಂಚಿಯಾಗಿ ದುಡಿದ ಅನುಭವ, ಹಿರಿಯ ಮುಖಂಡ, ಪ್ರಬಲ ಲಿಂಗಾಯತ ಮುಖಂಡ ಎಂಬ ಅಂಶಗಳು ಪ್ಲಸ್ ಪಾಯಿಂಟ್ ಆಗಲಿವೆ.
ಆಸ್ಕರ್ ಫರ್ನಾಂಡೀಸ್
ಪಕ್ಷದ ಹಿರಿಯ ಮುಖಂಡ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಎಂಬ ಅಂಶ ಆಸ್ಕರ್ ಅವರನ್ನು ಸಿಎಂ ಗದ್ದುಗೆ ವರೆಗೆ ಕರೆತರಬಹುದು. ಆದರೆ, ಉಳಿದ ಕಾಂಗ್ರೆಸ್ ನಾಯಕರು ಇದಕ್ಕೆ ಸಮ್ಮತಿ ಸೂಚಿಸುತ್ತಾರಾ? ಎಂದು ಕಾದು ನೋಡಬೇಕು.
ಹೈ ಕಮಾಂಡ್ ನಿಲುವೇನು?
ಎಲ್ಲಾ ಲೆಕ್ಕಾಚಾರ ಬುಧವಾರ ಪ್ರಕಟವಾಗುವ ಚುನಾವಣೆ ಫಲಿತಾಂಶ ಮತ್ತು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿರ್ಧಾರದ ಮೇಲೆ ನಿಂತಿದೆ. ಬಹುಮತ ದೊರಕಲಿದೆಯೇ? ಅಥವ ಬೇರೆ ಪಕ್ಷದೊಂದಿಗೆ ಕಾಂಗ್ರೆಸ್ ಕೈ ಜೋಡಿಸಿಕೊಂಡು ಅಧಿಕಾರ ಪಡೆಯಬೇಕೆ ಎಂಬ ಕುತೂಹಲ ಎರಡು ದಿನಗಳಲ್ಲಿ ಬಗೆಹರಿಯಲಿದೆ.