'ಹಸ್ತ'ಸಾಮುದ್ರಿಕಾ ಸ್ವಾಮಿ ಮನೆಯಲ್ಲಿ 15 ಕೆಜಿ ಚಿನ್ನ ಸಿಕ್ತು
ಬೆಂಗಳೂರಿನ ಆರ್ ಟಿ ನಗರದಲ್ಲಿರುವ ಎರಡನೇ ಬ್ಲಾಕಿನಲ್ಲಿರುವ ಖ್ಯಾತ ಜ್ಯೋತಿಷಿ, ಮುಲ್ಕಿ ಮೂಲದ ಚಂದ್ರಶೇಖರ ಸ್ವಾಮಿ ಅವರ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಶನಿವಾರ ಸಂಜೆ ದಾಳಿ ನಡೆಸಿದ್ದರು. ದಾಳಿಯ ಸಂದರ್ಭದಲ್ಲಿ ಸ್ವಾಮೀಜಿ ಮನೆಯಲ್ಲಿ ದೊರೆತ ದಾಖಲೆಗಳಲ್ಲಿ ಖ್ಯಾತ ರಾಜಕಾರಣಿಗಳ ಹೆಸರುಗಳೇ ಹೆಚ್ಚಾಗಿ ಕಂಡು ಬಂದಿದೆ. ಅಂದರೆ 'ಹಸ್ತ'ಸಾಮುದ್ರಿಕಾ ಸ್ವಾಮೀಜಿಯನ್ನು ಅಡ್ಡವಿಟ್ಟುಕೊಂಡು ಆ ಪ್ರಮಾಣದ ಚುನಾವಣಾ ದಂಧೆ ನಡೆಸಲಾಗಿದೆ.
ಹಾಗಾಗಿ ಇದು ಚುನಾವಣೆ ಸಂಬಂಧಿ ಅಕ್ರಮ ಎಂಬುದು ಮೇಲ್ನೋಟದಲ್ಲೇ ಸಾಬೀತಾಗಿದೆ. ಅಧಿಕಾರಿಗಳೂ ಹೆಚ್ಚು ಮುತುವರ್ಜಿ ತೋರಿಸಿ ಸ್ವಾಮೀಜಿಯ ಮನೆಯನ್ನು ಇಂಚಿಂಚೂ ಶೋಧಿಸಿದ್ದಾರೆ.
'ಪ್ರತಿಷ್ಠಿತ ಸ್ವಾಮೀಜಿ' ಮುಖವಾಡ ಧರಿಸಿದ್ದರಿಂದ ತನ್ನನ್ನು ಯಾರೇನೂ ಮಾಡಲಾರರು ಎಂದೇ ಚುನಾವಣೆ ಧಂಧೆಗೆ ಮುಂದಾಗಿದ್ದ ಸದರಿ ಸ್ವಾಮೀಜಿ, ತನ್ನ ಮನೆ ಮೇಲೆ ಅಧಿಕಾರಿಗಳು ಮುಗಿಬಿದ್ದಿದ್ದಾರೆ ಎಂಬುದು ತಿಳಿಯುತ್ತಿದ್ದಂತೆ ಕಂಗಾಲಾಗಿ, ಮನೆಯ ಬಾಗಿಲನ್ನೇ ತೆಗೆದಿಲ್ಲ. ನಂತರ ಅಧಿಕಾರಿಗಳು ಮನೆ ಮಹಡಿ ಮೇಲೆ ಹತ್ತಲು ಆರಂಭಿಸುತ್ತಿದ್ದಂತೆ Anantha Villa ಮನೆ ಬಾಗಿಲು ಓಪನ್ ಆಗಿದೆ. ಈ ಮಧ್ಯೆ ಸ್ವಾಮೀಜಿ ಪರಾರಿಯಾಗಲು ಯತ್ನಿಸಿದ್ದ ಎನ್ನಲಾಗಿದೆ.
ಅಧಿಕೃತ ಮಾಹಿತಿ ಪ್ರಕಾರ ವಾಸ್ತು ತಜ್ಞರೂ ಆದ ಚಂದ್ರಶೇಖರ ಸ್ವಾಮೀಜಿಯ ವಾರ್ಷಿಕ ಆದಾಯ ಕೇವಲ 6 ಲಕ್ಷ ರೂಪಾಯಿ. ಆದರೆ ದಾಳಿಯಲ್ಲಿ ಸಿಕ್ಕಿದ ಆಸ್ತಿಗಳ ಮೌಲ್ಯ ಬರೋಬ್ಬರಿ 200 ಕೋಟಿ ರೂಪಾಯಿಗೂ ಅಧಿಕ!
ಚಂದ್ರಶೇಖರ ಸ್ವಾಮೀಜಿ ಅವರ ಆರ್. ಟಿ. ನಗರದ ನಿವಾಸದಲ್ಲಿ ಭಾನುವಾರವೂ ಶೋಧ ನಡೆಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 15 ಕೆ.ಜಿ. ಚಿನ್ನ, 55 ಕೆ.ಜಿ ಬೆಳ್ಳಿ, 60 ಕೋಟಿ ರೂ. ಬ್ಯಾಂಕ್ ವಹಿವಾಟಿನ ಲೆಕ್ಕಪತ್ರ, 200 ಕೋಟಿ ರೂ.ಮೌಲ್ಯದ ಆಸ್ತಿಗೆ ಸಂಬಂಧಿಸಿದ ದಾಖಲೆ ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಚಂದ್ರಶೇಖರ್ ಸ್ವಾಮಿ ಅವರ ಬ್ಯಾಂಕ್ ಖಾತೆಯಿಂದ ರಾಜಕಾರಣಿಗಳಿಗೆ ಹಾಗೂ ವಿವಿಧ ರಾಜಕೀಯ ಪಕ್ಷಗಳಿಗೆ ಸುಮಾರು 60 ಕೋಟಿ ರು ವಿತರಣೆಯಾಗಿರುವ ಆರೋಪದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿ ಜಂಟಿ ಆಯುಕ್ತ ಕ್ಯಾ ಪ್ರದೀಪ್ ಆರ್ಯ ಅವರ ನೇತೃತ್ವದ 15 ಮಂದಿ ತಂಡ ಹಾಗೂ ಚುನಾವಣಾಧಿಕಾರಿಗಳ ತಂಡ ದಾಳಿ ನಡೆಸಿದ್ದರು. ಮಾಜಿ ಸಂಸದರೊಬ್ಬರಿಗೆ ಕಳೆದ ವಾರ 6.5 ಕೋಟಿ ರು ನೀಡಿರುವ ಬಗ್ಗೆ ಮಾಹಿತಿ ಸೇರಿದಂತೆ ಹಲವು ಮಹತ್ವದ ದಾಖಲೆಗಳು ದಾಳಿ ಸಂದರ್ಭದಲ್ಲಿ ಸಿಕ್ಕಿವೆ.