ಮೈಸೂರು : ಜನರ ಕೈಗೆ 10 ರೂ. ಪ್ಲಾಸ್ಟಿಕ್ ನೋಟು
ದಕ್ಷಿಣ ಭಾರತದ ಐದು ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ 10 ರೂ ಮುಖಬೆಲೆಯ ಪ್ಲಾಸ್ಟಿಕ್ ನೋಟು ಪರಿಚಯಿಸಲು ರಿಜರ್ವ್ ಬ್ಯಾಂಕ್ ಸಿದ್ದತೆ ನಡೆಸಿದೆ. ಅದರಂತೆ, ಮೈಸೂರು, ಕೊಚ್ಚಿ, ಶಿಮ್ಲಾ, ಜೈಪುರ ಮತ್ತು ಭುವನೇಶ್ವರಗಳಲ್ಲಿ ಪ್ಲಾಸ್ಟಿಕ್ ನೋಟು ಶೀಘ್ರದಲ್ಲೇ ಜನರ ಜೇಬು ಸೇರಲಿದೆ.
ಕರ್ನಾಟಕದಲ್ಲಿ ಪ್ಲಾಸ್ಟಿಕ್ ನೋಟು ಕಿಸೆಗೆ ಇಳಿಸಿಕೊಳ್ಳವ ಅದೃಷ್ಟ ಮೈಸೂರಿನ ಜನತೆಯ ಪಾಲಾಗಿದೆ. ವಿವಿಧ ಹವಮಾನಗಳಲ್ಲಿ ಮತ್ತು ಬೌಗೋಳಿಕ ಪರಿಸರಗಳಲ್ಲಿ ಪ್ಲಾಸ್ಟಿಕ್ ನೋಟಿನ ಸ್ಥಿತಿಗತಿಯನ್ನು ತಿಳಿದುಕೊಳ್ಳಲು ದಕ್ಷಿಣ ಭಾತರದ ಐದು ನಗರಗಳನ್ನು ಆಯ್ಕೆ ಮಾಡಲಾಗಿದೆ.
ಪ್ಲಾಸ್ಟಿಕ್ ನೋಟು ಏಕೆ : ಕಾಗದದ ನೋಟು ಹರಿದು ಹೋಗಿ ನಷ್ಟ ಉಂಟಾಗುವುದನ್ನು ತಪ್ಪಿಸಲು ಪ್ಲಾಸ್ಟಿಕ್ ನೋಟು ಪರಿಚಯಿಸಲು ಮುಂದಾಗಿದ್ದರೂ, ದಕ್ಷಿಣ ಭಾರತದಲ್ಲಿ ನಕಲಿ ನೋಟಿನ ಜಾಲ ಪತ್ತೆ ಹಚ್ಚುವುದು ಆರ್ ಬಿಐನ ಪ್ರಮುಖ ಗುರಿಯಾಗಿದೆ.
ವಿಶ್ವದಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ದೇಶಗಳು ಪ್ಲಾಸ್ಟಿಕ್ ನೋಟು ಪರಿಚಯಿಸಿ ನಕಲಿ ನೋಟಿನ ಹಾವಳಿ ತಪ್ಪಿಸುವಲ್ಲಿ ಈಗಾಗಲೇ ಯಶಸ್ವಿಯಾಗಿವೆ. ಸದ್ಯ ಭಾರತದಲ್ಲಿಯೂ ದಕ್ಷಿಣ ಭಾರತದ ಮೂಲಕ ಪ್ಲಾಸ್ಟಿಕ್ ನೋಟು ಪರಿಚಯಿಸಿ ನಕಲಿ ನೋಟು ಜಾಲ ಪತ್ತೆ ಹಚ್ಚುವ ಪ್ರಯತ್ನ ನಡೆಸಲಾಗುತ್ತದೆ.
ರಾಷ್ಟ್ರೀಯ ಅಪರಾಧ ವಿಭಾಗದ ಅಂಕಿ ಅಂಶಗಳ ಪ್ರಕಾರ ಕರ್ನಾಟಕದಲ್ಲಿ 2012ನೇ ವರ್ಷದಲ್ಲಿ ಸಾವಿರ ರೂಗಳ 6,386 ನೋಟು, ಐನೂರು ರೂಗಳ 12,226 ನೋಟು, ನೂರು ರೂಗಳ 1,247 ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದೇ ಅವಧಿಯಲ್ಲಿ ಕೇರಳ, ಆಂಧ್ರ ಪ್ರದೇಶ, ತಮಿಳುನಾಡು ಮುಂತಾದ ರಾಜ್ಯಗಳಲ್ಲಿ ಕೋಟ್ಯಾಂತರ ರೂಪಾಯಿ ನಕಲಿ ನೋಟುಗಳನ್ನು ಪತ್ತೆ ಹಚ್ಚಲಾಗಿದೆ. ಆದ್ದರಿಂದ ಆರ್ ಬಿಇ ದಕ್ಷಿಣ ಭಾರತದ ರಾಜ್ಯಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ.
ಇಷ್ಟೊಂದು ನಕಲಿ ನೋಟುಗಳ ಚಲಾವನೆ ಆಗುತ್ತಿವೆ ಎಂದರೆ ದೊಡ್ಡ ಜಾಲವಿರಬಹುದು ಎಂದು ಆಲೋಚಿಸಿರುವ ಸರ್ಕಾರ ಪ್ಲಾಸ್ಟಿಕ್ ನೋಟಿನ ಅಸ್ತ್ರ ಬಳಸಿ ನಕಲಿ ನೋಟು ಜಾಲ ಗುರುತಿಸುವ ಸಾಹಸಕ್ಕೆ ಕೈ ಹಾಕಿದೆ. ಪ್ಲಾಸ್ಟಿಕ್ ನೋಟು ತಯಾರಿಸಲು ಅಗತ್ಯ ಸಾಮಾಗ್ರಿಗಳಿಗಾಗಿ ಈಗಾಗಲೇ ಟೆಂಡರ್ ಕರೆಯಲಾಗಿದೆ.
ಆದರೆ, ಈ ಯೋಜನೆ ಎಂದಿನಿಂದ ಆರಂಭವಾಗಲಿದೆ ಎಂದು ಆರ್ ಬಿಐ ಮಾಹಿತಿ ನೀಡಿಲ್ಲ. ಶೀಘ್ರದಲ್ಲೇ ಪ್ರಾರಂಭಿಸುತ್ತೇವೆ ಎಂದು ಬ್ಯಾಂಕ್ ತಿಳಿಸಿದೆ. ಏನೇ ಆಗಲಿ ಪ್ಲಾಸ್ಟಿಕ್ ನೋಟು ಬಂದು ಹರಿದ ನೋಟಿನಿಂದ ಮುಕ್ತಿ ಸಿಕ್ಕರೆ ಸಾಕು ಎಂದು ಜನರು ನಿರೀಕ್ಷಿಸುತ್ತಿದ್ದಾರೆ.