ಉಗ್ರರ ಗುರ್ತಿಸಿದ ಆಟೋಚಾಲಕ ಬಹುಮಾನ ಬೇಡವೆಂದ
ಈ ಮಧ್ಯೆ, ಉಗ್ರರ ಬೆನ್ನುಹತ್ತಲು ಮಹತ್ವದ ಸುಳಿವು ನೀಡಿ, ಪೊಲೀಸರಿಗೆ ನೆರವಾಗಿರುವುದು ಒಬ್ಬ ಆಟೋ ಚಾಲಕ. ಆದರೆ ಭದ್ರತೆ ಮತ್ತು ತನಿಖೆ ಸುಗಮವಾಗಿ ನಡೆಯಲೆಂಬ ಕಾರಣಕ್ಕೆ ಪೊಲೀಸರು ಆಟೋದಾರನ ಹೆಸರು ವಿಳಾಸ ಬಹಿರಂಗಪಡಿಸಿಲ್ಲ.
ಬಾಂಬ್ ಸ್ಫೋಟವಾಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ತೆರಳಿದಾಗ ಸದರಿ ಆಟೋ ಚಾಲಕ ಅವರ ನೆರವಿಗೆ ಬಂದು ಕೆಲ ಶಂಕಿತರ ಚಲನವಲನದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾನೆ. ತಕ್ಷಣ ಪೊಲೀಸರು ಚಾಲಕನಿಂದ ಹೆಚ್ಚಿನ ಮಾಹಿತಿ ಕೋರಿದ್ದಾರೆ. ಕೊನೆಗೆ ಆತ ನೀಡಿದ ಮಾಹಿತಿಯನ್ನು ಆಧರಿಸಿ ತನಿಖೆಯ ದಿಕ್ಕು ಮುಂದುವರಿಸಿದ್ದಾರೆ.
ಅಷ್ಟೇ ಅಲ್ಲ. ತಮಿಳುನಾಡಿನಿಂದ ಕರೆತಂದ ಉಗ್ರರನ್ನು ಸದರಿ ಆಟೋ ಚಾಲಕನ ಮುಂದೆ ಪೆರೇಡ್ ಮಾಡಿಸಿದಾಗ ಆತ ಉಗ್ರರನ್ನು ಗುರುತಿಸಿದ್ದಾನೆ ಎಂದು ಬೆಂಗಳೂರು ಪೊಲೀಸ್ ಮೂಲಗಳು ತಿಳಿಸಿವೆ.
ಈ ಮಧ್ಯೆ, ಸ್ಫೋಟದ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಅದರಂತೆ ಪೊಲೀಸರು ಆಟೋ ರಾಜನಿಗೆ ಬಹುಮಾನ ನೀಡಲು ಮುಂದಾದರು. ಶ್ಲಾಘನೀಯವೆಂದರೆ ಹೀಗೆ ಉಗ್ರರ ಪತ್ತೆಗೆ ಸಹಕರಿಸಿದ ಆಟೋ ರಾಜ ಬಹುಮಾನ ಬೇಡ. ಆ ಹಣವನ್ನು ಸ್ಫೋಟದಿಂದ ಗಾಯಗೊಂಡವರ ಚಿಕಿತ್ಸೆಗೆ ಬಳಸಿ ಎಂದು ಪೊಲೀಸರಿಗೆ ತಿಳಿಸಿದ್ದಾನೆ.