ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಂಬ್ ಸ್ಫೋಟ ಹತ್ತಿರದಿಂದ ಕೇಳಿದವರ ಅನುಭವ

By Prasad
|
Google Oneindia Kannada News

Bangalore bomb blast : Experience of a twitter
ಹತ್ತಿರದಿಂದ ಕೇಳಿದವರ ಕಿವಿ ಕಿವುಡು ಮಾಡುವಷ್ಟು ಭಾರೀ ಶಬ್ದದಿಂದ ಏ.17ರಂದು ಬೆಳಿಗ್ಗೆ ಹತ್ತೂವರೆ ಸುಮಾರಿಗೆ ಸ್ಫೋಟಿಸಿದ ಬಾಂಬ್ ಸ್ಫೋಟದ ಶಬ್ದಕ್ಕೆ ಮಲ್ಲೇಶ್ವರಂ ಬೆಚ್ಚಿ ಬಿದ್ದಿದೆ. ಆ ಭಯಾನಕ ಶಬ್ದ ಕೇಳುತ್ತಿದ್ದಂತೆ ಹತ್ತಿರದಲ್ಲಿದ್ದವರು ಓಡಿ ಪರಾರಿಯಾಗಿದ್ದರೆ, ದೂರದಲ್ಲಿದ್ದವರು ಏನೋ ನಡೆಯಿತು, ನೋಡೋಣವೆಂದು ಆ ಸ್ಥಳಕ್ಕೆ ಧಾವಿಸಿದ್ದಾರೆ. ಗಿಡದ ಮೇಲೆ ವಾಸವಿದ್ದ ಹಕ್ಕಿಗಳಂತೂ ವಾರಗಳ ಕಾಲ ಆ ಪ್ರದೇಶಕ್ಕೆ ಬರಲಾರವು.

ಮಲ್ಲೇಶ್ವರದ ಅಂಗಡಿ ಮುಂಗಟ್ಟುಗಳಲ್ಲಿ ಅದೇ ಮಾತು. ಕೊಳ್ಳಲು ಬಂದವರು ಯಾವುದಕ್ಕೆ ಬಂದಿದ್ದೇವೆಂಬುದನ್ನು ಮರೆತು ಬಾಂಬ್ ಸ್ಫೋಟದ ಮಾತುಕತೆಯಲ್ಲಿಯೇ ತೊಡಗಿದ್ದರು. ಕೆಲವರು ಅಂಥಾದ್ದೇನು ಆಗಿಲ್ಲ ಎಂದು ಪರಿಸ್ಥಿತಿಯನ್ನು ತಿಳಿಮಾಡುತ್ತಿದ್ದರೆ, ಮತ್ತೊಬ್ಬರು ಹೆಬ್ಬಾಳದಲ್ಲೂ ಸ್ಫೋಟ ಸಂಭವಿಸಿತಂತೆ, ಮುಂದೆ ಎಲ್ಲೋ ಏನೋ ಎಂದು ಹೇಳುತ್ತ ಮತ್ತಷ್ಟು ಭಯಾನಕತೆ ತುಂಬುತ್ತಿದ್ದರು. ತಮಾಷೆ ಅಂದ್ರೆ 6ನೇ ಕ್ರಾಸಿನಲ್ಲಿ ಇದ್ದ ಕೆಲವರಿಗೆ ಆ ಶಬ್ದವೇ ಕೇಳಿರಲಿಲ್ಲ.

ಅಷ್ಟರಲ್ಲಿ ತುಂಟ ಪೋರನೊಬ್ಬ, ಮುಂದಿನ ಬಾಂಬ್ ಬ್ಲಾಸ್ಟ್ ಕೆ.ಆರ್. ಮಾರ್ಕೆಟ್ಟಿನಲ್ಲಿ ಎಂದು ಡೈಲಾಗು ಹೊಡೆದು ಸುತ್ತಮುತ್ತಲಿದ್ದವರಿಂದ ಬೈಸಿಕೊಂಡಿದ್ದ ಮತ್ತು ನಗೆಬುಗ್ಗೆ ಏಳಲು ಕಾರಣವಾಗಿದ್ದ. ಆದರೆ, ಈ ಭೀಕರ ಶಬ್ದುವನ್ನು ಅತ್ಯಂತ ಹತ್ತಿರದಿಂದ ಕೇಳಿ, ಮೊದಲು ಟ್ವೀಟ್ ಮಾಡಿದವರಲ್ಲಿ ಒಬ್ಬರಾಗಿರುವ ಕಾಲೇಜು ಲೆಕ್ಚರರ್ ಮತ್ತು ಆಗಿರುವ ರಾಜೇಶ್ ಪದ್ಮಾರ್ ಎಂಬುವವರು ತಮ್ಮ ಅನುಭವವನ್ನು ಒನ್ಇಂಡಿಯಾ ಕನ್ನಡದ ಜೊತೆ ಹಂಚಿಕೊಂಡಿದ್ದಾರೆ.

"ಸ್ಫೋಟ ಸಂಭವಿಸಿದಾಗ ಸಿಇಟಿಗಾಗಿ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದೆ. ಇದ್ದಕ್ಕಿದ್ದಂತೆ ಜೀವಮಾನದಲ್ಲೇ ಕೇಳಿರದಷ್ಟು ಭೀಕರ ಮತ್ತು ಭಯಾನಕ ಶಬ್ದವಾಯಿತು. ಆಗಸದಲ್ಲಿ ಕಪ್ಪು ಹೊಗೆ, ಧೂಳು ಆವರಿಸಿಕೊಂಡಿತು. ವಿದ್ಯಾರ್ಥಿಗಳು ಕಕ್ಕಾಬಿಕ್ಕಿಯಾದರು. ಕೂಡಲೆ ನನ್ನ ನೋಕಿಯಾ ಮೊಬೈಲ್ ಮುಖಾಂತರ ಟ್ವೀಟ್ ಮಾಡಿದೆ. ಸುಮಾರು 1 ಗಂಟೆಯ ನಂತರ ಅದು ಬಾಂಬ್ ಸ್ಫೋಟ ಎಂದು ಪೊಲೀಸರು ದೃಢಪಡಿಸಿದರು" ಎಂದು ಅವರು ಆರಂಭದ ಕ್ಷಣಗಳನ್ನು ಹಂಚಿಕೊಂಡರು.


"ಅಷ್ಟರಲ್ಲಿ ಕೆಲ ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ ಎಂಬುದು ತಿಳಿಯುತ್ತಿದ್ದಂತೆ ಟ್ಯೂಷನ್ ಶಾಲೆಯ ಮಕ್ಕಳು ಕೂಡ ತಮ್ಮ ಪಾಲಕರಿಗೆ ಫೋನ್ ಮಾಡಿ ತಾವು ಸುರಕ್ಷಿತವಾಗಿ ಇರುವುದರ ಬಗ್ಗೆ ಹೇಳಲು ಆರಂಭಿಸಿದರು. ಅಲ್ಲಿ ಭೀಕರ ಬಾಂಬ್ ಸ್ಫೋಟ ಸಂಭವಿಸಿ ಆತಂಕದ ವಾತಾವರಣವಿದ್ದರೂ, ನಮ್ಮ ವಿದ್ಯಾರ್ಥಿಗಳು ಸುರಕ್ಷಿತವಾಗಿರುವ ಬಗ್ಗೆ ನನಗೆ ತುಸು ಸಮಾಧಾನವಾಗಿತ್ತು. ಹೂವು ಮಾರುವವರಿಂದ ಹಿಡಿದು ಶ್ರೀಮಂತರವರೆಗೆ ಎಲ್ಲರೂ ಆತಂಕಗೊಂಡಿದ್ದರು. ವ್ಯಕ್ತಿ ಶ್ರೀಮಂತನೇ ಇರಲಿ ಬಡವನೇ ಇರಲಿ, ಭಯೋತ್ಪಾದಕರಿಗೆ ಯಾರ ಜೀವವೂ ತೃಣಸಮಾನ ಎಂಬುದರ ಬಗ್ಗೆ ಅರಿವಾಗಿತ್ತು" ಎಂದು ಅವರು ನುಡಿದರು.

"ಬೆಂಗಳೂರು ಎಷ್ಟೇ ಆಧುನಿಕವಾಗಿದ್ದರೂ, ಪೊಲೀಸ್ ಇಲಾಖೆ ಎಷ್ಟೇ ಹೈಟೆಕ್ ಆಗಿದ್ದರೂ ಜನರಿಗೆ ಮತ್ತು ನಗರಕ್ಕೆ ಭದ್ರತೆ ಒದಗಿಸುವ ವಿಷಯದಲ್ಲಿ ತಳಮಟ್ಟದಲ್ಲಿ ಇನ್ನೂ ಸಾಕಷ್ಟು ಮುಂದುವರಿಯಬೇಕಿದೆ. ಬೆಂಗಳೂರಿನಂಥ ನಗರದಲ್ಲಿ ಜನರಿಗೆ ತಾವು ಸುರಕ್ಷಿತವಾಗಿರುವ ಭಾವ ಬರಬೇಕಿದೆ. ಪೊಲೀಸರು ಅತ್ಯುತ್ತಮ ಕೆಲಸ ಮಾಡುತ್ತಿದ್ದರೂ ಇಂಥ ಘಟನೆಗಳನ್ನು ತಡೆಯಲು ಆಗುತ್ತಿಲ್ಲ. ಆದರೆ ವಿದೇಶದಲ್ಲಿ ಪರಿಸ್ಥಿತಿ ಹೀಗಿಲ್ಲ" ಎಂದು ಅವರು ತಮ್ಮ ಅನುಭವ ಹಂಚಿಕೊಂಡರು.

English summary
Science lecturer Rajesh Padmar is one of the first one to tweet about the Bangalore bomb blast, which took place in Malleshwaram in Bangalore on 17th April, 2013. He has shared his first hand experience of this horrible and terrifying incident with Oneindia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X