ರಾಜಕೀಯ ಆಖಾಡಕ್ಕೆ ಯಡಿಯೂರಪ್ಪ ಪುತ್ರ ವಿಜಯೇಂದ್ರ?
ಕೆಜೆಪಿ ಪಕ್ಷದ ಆಪ್ತ ಮೂಲಗಳ ಪ್ರಕಾರ ಹನೂರು ಕ್ಷೇತ್ರದಲ್ಲಿ ಅಭ್ಯರ್ಥಿಯಾಗಬೇಕಿದ್ದ ವಸತಿ ಸಚಿವ ವಿ.ಸೋಮಣ್ಣ ಯಡಿಯೂರಪ್ಪನವರಿಗೆ ಕೈ ಕೊಟ್ಟಿದ್ದರಿಂದ, ಆ ಕ್ಷೇತ್ರದಲ್ಲಿ ತಮ್ಮ ಪುತ್ರ ವಿಜಯೇಂದ್ರ ಅವರನ್ನು ಕಣಕ್ಕಿಳಿಸಲು ಬಿಎಸ್ ವೈ ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಲಿಂಗಾಯಿತರ ಪ್ರಾಬಲ್ಯವಿರುವ ಹನೂರು ಕ್ಷೇತ್ರದಲ್ಲಿ ವಿಜೇಯೇಂದ್ರ ಅವರನ್ನು ಕಣಕ್ಕಿಳಿಸಿದರೆ, ಕ್ಷೇತ್ರದಲ್ಲಿ ಕೆಜೆಪಿ ಧ್ವಜ ಹಾರಿಸುವ ಜೊತೆಗೆ ಮಗನಿಗೂ ಭದ್ರ ರಾಜಕೀಯ ಬುನಾದಿ ಹಾಕಬಹದು ಎಂಬುದು ಯಡಿಯೂರಪ್ಪ ಲೆಕ್ಕಾಚಾರ.
ಸಂಸದ ಸ್ಥಾನದಿಂದ ಬಿ.ವೈ.ರಾಘವೇಂದ್ರ ಅಮಾನತಾಗುತ್ತಿದ್ದಂತೆಯೇ ಮತ್ತೊಬ್ಬ ಪುತ್ರನ ರಾಜಕೀಯ ಸೇರ್ಪಡೆಗೆ ಯಡಿಯೂರಪ್ಪ ವೇದಿಕೆ ಸಿದ್ದಗೊಳಿಸಿದ್ದಾರೆ. ಬಿಜೆಪಿಯಿಂದ ಅಮಾನತುಗೊಂಡಿರುವ ರಾಘವೇಂದ್ರ ಸಹ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ಯಡಿಯೂರಪ್ಪ ಬಿಜೆಪಿ ಪಕ್ಷದಲ್ಲಿದ್ದಾಗಲೇ ವಿಜಯೇಂದ್ರ ಗುಂಡ್ಲುಪೇಟೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಹುಟ್ಟಿಕೊಂಡಿದ್ದವು. ಆದರೆ, ಕೆಲವು ಅಡಚಣೆಗಳಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಈ ಬಾರಿ ವಿಜಯೇಂದ್ರ ಹನೂರು ಕ್ಷೇತ್ರದಿಂದ ಸ್ಪರ್ಧಿಸಿ ರಾಜಕೀಯ ಅಖಾಡಕ್ಕೆ ಧುಮುಕುತ್ತಾರೆ ಎಂಬುದು ಖಚಿತವಾಗಿದೆ.
ಸ್ಟಾರ್ ಕ್ಷೇತ್ರವಾದ ಹನೂರು : ಚಾಮರಾಜನಗರ ಜಿಲ್ಲೆಯ ಹನೂರು ಈ ಬಾರಿ ಸ್ಟಾರ್ ಕ್ಷೇತ್ರವಾಗಿ ಪರಿವರ್ತನೆಯಾಗಲಿದೆ. ಜೆಡಿಎಸ್ ನಿಂದ ಮಾಜಿ ಸಚಿವ ಹೆಚ್.ನಾಗಪ್ಪ ಅವರ ಪತ್ನಿ ಪರಿಮಳ ನಾಗಪ್ಪ ಸ್ಪರ್ಧಿಸಿದರೆ, ಕೆಜೆಪಿಯಿಂದ ಯಡಿಯೂರಪ್ಪ ಪುತ್ರ ವಿಜಯೇಂದ್ರ ಸ್ಪರ್ಧಿಸಲಿದ್ದಾರೆ.
ಪಕ್ಷೇತರ ಅಭ್ಯರ್ಥಿಯಾಗಿ ಹನೂರು ಕ್ಷೇತ್ರದಿಂದ ಕಣಕ್ಕಿಳಿಯಲು ಕಾಡುಗಳ್ಳ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮೀ ಆಲೋಚಿಸಿದ್ದಾರೆ. ಈ ಮೂವರಿಂದಾಗಿ ಹನೂರು ಸ್ಟಾರ್ ಕ್ಷೇತ್ರವಾಗಿ ಪರಿವರ್ತನೆಯಾಗಲಿದೆ. ಯಡಿಯೂರಪ್ಪ ತಮ್ಮ ವೈಯಕ್ತಿಕ ಪ್ರತಿಷ್ಠೆ ಪಣಕ್ಕಿಟ್ಟು ಪುತ್ರರತ್ನವನ್ನು ಗೆಲ್ಲಿಸಲು ಶ್ರಮಿಸುತ್ತಾರೆ.
ಆತ್ತ ವೀರಪ್ಪನ್ ನಿಂದ ಹತ್ಯೆಯಾದ ಹೆಚ್.ನಾಗಪ್ಪ ಪತ್ನಿ ಮತ್ತು ವೀರಪ್ಪನ್ ಪತ್ನಿಯ ನಡುವೆ ಪ್ರಬಲ ಪೈಪೋಟಿ ಏರ್ಪಡಲಿದೆ. ಕೆಜೆಪಿ ಹನೂರು ಕ್ಷೇತ್ರದ ಅಭ್ಯರ್ಥಿಯಾರು ಎಂದು ಘೋಷಿಸಿಲ್ಲ. ವಿಜಯೇಂದ್ರ ಅವರಿಗೆ ಆ ಕ್ಷೇತ್ರ ಕಾಯ್ದಿರಿಸಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ