ಹೈ ಸ್ಪೋಟ, ಪಾಕ್ ಕೈವಾಡ ಸಾಬೀತು: NIA
ಮಂಗಳವಾರ ದೆಹಲಿ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಅವಳಿ ಬಾಂಬ್ ಸ್ಪೋಟದ ಸಂಚು ರೂಪಿಸಿದ್ದರು ಎಂದು ಬಂಧಿಸಲಾದ ಸೈಯದ್ ಮಕ್ಬುಲ್ ಮತ್ತು ಇಮ್ರಾನ್ ಖಾನ್ ಅವರನ್ನು ಹಾಜರು ಪಡಿಸಲಾಯಿತು. ಈ ಸಂದರ್ಭದಲ್ಲಿ ಸ್ಪೋಟದ ಕುರಿತಂತೆ ಉಗ್ರ ಯಾಸಿನ್ ಭಟ್ಕಳ್ ಸೇರಿದಂತೆ 9 ಮಂದಿಗೆ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ.
ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಿದ ಎನ್ಐಎ ಸ್ಪೋಟದಲ್ಲಿ ಪಾಕಿಸ್ತಾನ ಕೈವಾಡವಿರುವ ಬಗ್ಗೆ ದಾಖಲಾತಿ ಒದಗಿಸಿದೆ. ಹೈದರಾಬಾದ್ ನ ಬಾಂಬ್ ಸ್ಪೋಟಕ್ಕೂ ಮೊದಲು ಪಾಕಿಸ್ತಾನದ ಐಎಸ್ಐ ಎಜೆಂಟ್ ಗಳು ಪೊಲೀಸ್ ಕಮೀಷನರ್ ಕಚೇರಿಗೆ ನಕಲಿ ವ್ಯಕ್ತಿಗಳ ಹೆಸರಿನಲ್ಲಿ ಕರೆ ಮಾಡಿರುವ ಬಗ್ಗೆ ದಾಖಲೆ ನೀಡಲಾಗಿದೆ.
ದಿಲ್ ಸುಖ್ ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿನ ಪೊಲೀಸ್ ಭದ್ರತೆ ಬಗ್ಗೆ ನಕಲಿ ವ್ಯಕ್ತಿಗಳ ಹೆಸರಿನಲ್ಲಿ ಕರೆ ಮಾಡಿದ ಎಜೆಂಟ್ ಗಳು ಮಾಹಿತಿ ಸಂಗ್ರಹಿಸಿದ್ದರು ಎಂದು ಎನ್ ಐಎ ಹೇಳಿದೆ. ಅಲ್ಲದೆ ಸ್ಪೋಟಕ್ಕೂ ಒಂದು ವಾರಗಳ ಮೊದಲು ಪಾಕಿಸ್ತಾನದಿಂದ ಹೈದರಾಬಾದ್ ಗೆ ಫೋನ್ ಕರೆ ಬಂದಿರುವುದು ದಾಖಲೆಗಳಿಂದ ಸಾಬೀತಾಗಿದೆ.
ಬಾಂಬ್ ಸ್ಪೋಟದ ತನಿಖೆಯನ್ನು ಆಂಧ್ರಪ್ರದೇಶ ಪೊಲೀಸ್ ಮತ್ತು ಎನ್ ಐಎ ಜಂಟಿಯಾಗಿ ನಡೆಸುತ್ತಿವೆ. ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಪ್ರಕರಣದ ತನಿಖೆಯನ್ನು ಸಂಪೂರ್ಣವಾಗಿ ಎನ್ಐಎ ಹೆಗಲಿಗೆ ವಹಿಸುವಂತೆ ಆದೇಶಿಸಿ ಆಂಧ್ರಪ್ರದೇಶ ಸರ್ಕಾರಕ್ಕೆ ಪತ್ರ ಬರೆದಿದ್ದರು.
ಸೋಮವಾರ ಆಂಧ್ರಪ್ರದೇಶ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ನೇತೃತ್ವದಲ್ಲಿ ನಡೆದ, ಸಚಿವ ಸಂಪುಟ ಸಭೆಯಲ್ಲಿ ತನಿಖೆಯನ್ನು ಎನ್ಐಗೆ ವಹಿಸಲು ತೀರ್ಮಾನಿಸಲಾಗಿದೆ.
ರಿಯಾಜ್ ಭಟ್ಕಳ್ ಸಹಚರು ಎಂಬ ಶಂಕೆಯ ಮೇರೆಗೆ ಬಂಧಿಸಲಾಗಿರುವ ಸೈಯದ್ ಮಕ್ಬುಲ್ ಮತ್ತು ಇಮ್ರಾನ್ ಖಾನ್ ಅವರನ್ನು ತಿಹಾರ್ ಜೈಲಿನಿಂದ ಇಂದು ಹೈದರಾಬಾದ್ ಗೆ ಕರೆತಂದು ವಿಚಾರಣೆ ನಡೆಸಲಾಗುವುದು ಎಂದು ಎನ್ಐಎ ಅಧಿಕಾರಿಗಳು ಹೇಳಿದ್ದಾರೆ.