ಸ್ಥಳೀಯ ಚುನಾವಣೆ: ರಾಮುಲು ಗಡಿಯಾರಗಳ ವಶ
ಬಳ್ಳಾರಿ, ಮಾರ್ಚ್5: ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇನ್ನೆರಡೇ ದಿನ ಬಾಕಿ. ಆದರೆ ರಾಜಕೀಯ ಪಕ್ಷಗಳು ಕಣಕ್ಕಿಳಿದ ತನ್ನ ಹುರಿಯಾಳುಗಳಿಗೆ ಶತಾಯಗತಾಯ ಜಯ ತಂದುಕಡಲೇಬೇಕೆಂದು ವಾಮ ಮಾರ್ಗಗಳೂ ಸೇರಿದಂತೆ ಎಲ್ಲ ದಿಕ್ಕಿಗಳಿಂದಲೂ ಮತದಾರನನ್ನು ಪ್ರಲೋಭೆಗೆ ಒಡ್ಡುತ್ತಿವೆ.
ಸ್ಯಾಂಪಲ್ ಅಷ್ಟೇ: ರಾಜ್ಯದ ನಾನಾ ಕಡೆ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತಗಳು ಹದ್ದಿನಕಣ್ಣು ನೆಟ್ಟಿವೆಯಾದರೂ ಕಣ್ಮರೆಯಲ್ಲಿ ಲಂಚರುಷುವತ್ತುಗಳ ಭರಾಟೆ ಜೋರಾಗಿಯೇ ಇದೆ. ಆದರೆ ಇದು ರಿಹರ್ಸಲ್ ಅಷ್ಟೇ. ಮುಂದಿದೆ ಮತದಾರನಿಗೆ ಹಬ್ಬ ಎನ್ನುತ್ತಿವೆ ರಾಜಕೀಯ ಪಕ್ಷಗಳು. ಏಕೆಂದೆರೆ ಸದ್ಯದಲ್ಲೇ ನಡೆಯುತಿಹುದು ವಿಧಾನಸಭೆ ಚುನಾವಣೆ.
ಒಂದು ಸ್ಯಾಂಪಲಾಗಿ ಹೇಳುವುದಾದರೆ ಶ್ರೀರಾಮುಲು ಅಧಿಪತ್ಯದ ಬಿಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಎರಡೇ ಎರಡು ಲಾರಿಗಳನ್ನು ನಿನ್ನೆ ವಶಪಡಿಸಿಕೊಳ್ಳಲಾಗಿದೆ. ಬಳ್ಳಾರಿಯ ಗಾಂಧಿ ನಗರ ಪೊಲೀಸರು ಈ ಲಾರಿಗಳನ್ನು ನಿಲ್ಲಿಸಿ ನೋಡಿದಾಗ ಅದರಲ್ಲಿ ಶ್ರೀರಾಮುಲು ಅವರ ಭಾವಚಿತ್ರವಿದ್ದ ಗೋಡೆ ಗಡಿಯಾರಗಳು (ಪಕ್ಕದ ಚಿತ್ರ ನೋಡಿ) ತುಂಬಿತುಳುಕುತ್ತಿದ್ದವು. ರಾಮುಲು ಭಾವಚಿತ್ರ ಮತ್ತು ಬಡವರು ಶ್ರಮಿಕರು ರೈತರ ಕಾಂಗ್ರೆಸ್ ಪಕ್ಷದ ಬಾವುಟದ ಮಧ್ಯೆ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಹೆದರೂ ರಾರಾಜಿಸುತ್ತಿತ್ತು.
ಸ್ವಾಭಿಮಾನಿ ಶ್ರೀರಾಮುಲುಗೆ ಇಂತಹ ಆಮಿಷಗಳ ಜರೂರತ್ತಾದರೂ ಏನಿತ್ತೋ ಚಂಚಲಗೂಡ ಜೈಲುವಾಸಿಗಳೇ ಹೇಳಬೇಕು. ಆಂಧ್ರ ಪ್ರದೇಶದಿಂದ ಬಂದಿದ್ದ ಈ ಲಾರಿಗಳಲ್ಲಿ ಗೋಡೆ ಗಡಿಯಾರಗಳು ಟಿಕ್ ಟಿಕ್ ಸದ್ದು ಮಾಡುತ್ತಾ ಕುಳಿತಿದ್ದವು. ಪಟೇಲ್ ನಗರದ 9ನೇ ವಾರ್ಡಿನ ಮತದಾರನ ''ಮತ ಖರೀದಿಗಾಗಿ'' ಗಡಿಯಾರಗಳನ್ನು ವಿತರಿಸಲು ಹುನ್ನಾರ ನಡೆದಿದೆ ಎಂಬ ಸುಳಿವರಿತ ಪೊಲೀಸರು ತಕ್ಷಣ ಕಾರ್ಯಮಗ್ನರಾಗಿ ಅವುಗಳನ್ನು ವಶಪಡಿಸಿಕೊಂಡಿದ್ದಾರೆ.
ಇದು ಒಬ್ಬ ಶ್ರೀರಾಮುಲು ಕಥೆಯಲ್ಲ. ಬಹುತೇಕ ಎಲ್ಲ ಪಕ್ಷಗಳ ಕಥೆಯೂ ಇದೇ ಆಗಿದೆ. ಸದ್ಯಕ್ಕೆ ನಾಡಿನ ದೊರೆಯಾಗಿರುವ ಶೆಟ್ಟರ್ ಸಹಿತ ಬೀದಿ ಬೀದಿ ಸುತ್ತುತ್ತಾ ತಮ್ಮ ಆಡಳಿತಾರೂಢ ಪಕ್ಷದಿಂದ ಮತದಾರನ ಓಲೈಕೆ ಕಾರ್ಯದಲ್ಲಿ ಮಗ್ನರಾಗಿರುವಾಗ... ಇತರೆ ಪಕ್ಷಗಳು ಹಿಂದೆ ಬೀಳಲು ಸಾಧ್ಯವೇ?
ಮೊನ್ನೆ ಮಾ.ಮು. ಒಬ್ಬರು ಆರತಿ ತಟ್ಟೆಗೆ 500/1000 ರೂ ಮೌಲ್ಯದ ನೋಟುಗಳನ್ನು ಹಾಕುತ್ತಿದ್ದುದು ಕಣ್ಣಿಗೆ ರಾಚುತ್ತಿತ್ತು. ಅಂತಹುದರಲ್ಲಿ ಕೆಂಪು ನೋಟುಗಳು ಮುಂದಿನ ಚುನಾವಣೆ ವೇಳೆಗೆ ಗಾಳಿಪಟದಂತೆ ಹಾರಿದರೆ ಅಚ್ಚರಿಯೇನೂ ಇಲ್ಲ.
ಮೊನ್ನೆ ಭಾನುವಾರ ಪ್ರೆಷರ್ ಕುಕ್ಕರ್ ವಿಶಲ್ ಜೋರಾಗಿ ಕೇಳಿಸಿದ್ದೇ ತಡ ಪೊಲೀಸರು ಸ್ಥಳಕ್ಕೆ ಹೋಗಿ ಹತ್ತಾರು ಕುಕ್ಕರ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು, ಚಿಕ್ಕಬಳ್ಳಾಪುರದಲ್ಲಿ ಮತದಾರನ ಹೊಟ್ಟೆ ತುಂಬಿಸಲು 25 ಕೆಜಿ ತೂಕದ 60 ಅಕ್ಕಿ ಮೂಟೆಗಳನ್ನು ಸ್ಥಳೀಯರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪಾವಗಡ ತಾಲೂಕಿನಲ್ಲಿ ಎಣ್ಣೆ ಪಾರ್ಟಿ, ಬಾಡೂಟ ನಡೆಯುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ. ಇವೆಲ್ಲಾ ಸ್ಯಾಂಪಲ್ ಅಷ್ಟೇ...
ನೋಡಿ, ಈ ಸುದ್ದಿ ಬರುತ್ತಿರುವ ಹೊತ್ತಿನಲ್ಲೇ ಮದ್ಯದ ಬಾಟಲಿಗಳು ತುಂಬಿದ್ದ ಬೊಲೆರೋ ವಾಹನವನ್ನು ಅಬಕಾರಿ ಪೊಲೀಸರು ಬೆಳಗಾವಿಯ ಕುದುರೆ ಮನೆ ಕ್ರಾಸ್ ಬಳಿ ವಶಪಡಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮತದಾರ ಪ್ರಭುವಿನ ಓಲೈಕೆ ಕಾಲ ಇದು. ಮತದಾರ ಎಚ್ಚೆತ್ತುಕೊಳ್ಳದ ಹೊರತು ಯಾರು, ಏನೂ ಮಾಡಲಾಗದು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ