ಈಶ್ವರಪ್ಪ ಭಾರಿ ಮೋಸಗಾರ: ಯಡಿಯೂರಪ್ಪ
ಸೋಮವಾರ (ಮಾ.4) ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಬಿಜೆಪಿ ಅಧ್ಯಕ್ಷ ಕೆಎಸ್ ಈಶ್ವರಪ್ಪ ಅವರು ಶಿವಮೊಗ್ಗ ನಗರಕ್ಕೆ ತಂದಿರುವ ದುಃಸ್ಥಿತಿಯ ಬಗ್ಗೆ ದುಃಖ ವ್ಯಕ್ತಪಡಿಸಿದರು. ಜಿಲ್ಲೆಯ ಜನತೆಗೆ ಈಶ್ವರಪ್ಪ ಭಾರಿ ಮೋಸ ಎಸಗಿದ್ದಾರೆ ಎಂದರು.
ಶಿವಮೊಗ್ಗ ನಗರದಲ್ಲಿ ಯಾವುದೇ ಹೊಸ ಅಭಿವೃದ್ಧಿ ಕಾರ್ಯಕ್ಕೆ ಕೈ ಹಾಕಿಲ್ಲ. ಗ್ರೀನ್ ಏರ್ ಪೋರ್ಟ್ ಕನಸಾಗೇ ಉಳಿದಿದೆ. ನಾನು ಅಧಿಕಾರದಲ್ಲಿದ್ದ ಕಾಲದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತಗೊಳಿಸಲಾಗಿದೆ. ಇಲ್ಲವೇ ವಿಳಂಬಗೊಳಿಸಲಾಗಿದೆ. ಈ ರೀತಿ ದ್ವೇಷ ರಾಜಕೀಯದಿಂದ ಬಳಲುತ್ತಿರುವುದು ಜನತೆಯೇ ಹೊರತು ನಾನಲ್ಲ ಎಂದು ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಆಶ್ರಯ ಯೋಜನೆಯಡಿಯಲ್ಲಿ ಬಡವರಿಗೆ ಮಂಜೂರಾದ ನಿವೇಶನವನ್ನು ಒದಗಿಸದೆ ಈಶ್ವರಪ್ಪ ಅನ್ಯಾಯ ಮಾಡಿದ್ದಾರೆ. ಆಶ್ವಾಸನೆ, ಭರವಸೆಗಳನ್ನು ನೀಡಿ ಜನರಿಗೆ ದ್ರೋಹ ಮಾಡಿದ್ದಾರೆ. ಇದರ ಫಲವನ್ನು ಅನುಭವಿಸಲಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಶಿವಮೊಗ್ಗವನ್ನು ಮಾದರಿ ನಗರವನ್ನಾಗಿಸಿದ್ದೆ. ಆದರೆ, ನಾನು ಕೈಗೊಂಡ ಯೋಜನೆಗಳನ್ನು ತಮ್ಮ ಸಾಧನೆ ಎಂದು ಬಿಂಬಿಸುತ್ತಿದ್ದಾರೆ. ಇವರಿಗೆ ಒಳ್ಳೆಯದಾಗಲ್ಲ ಎಂದು ಯಡಿಯೂರಪ್ಪ ಸಿಡಿಮಿಡಿಗೊಂಡರು.
ಶಿವಮೊಗ್ಗ ನಗರಸಭೆ ಆಡಳಿತ ಚುಕ್ಕಾಣಿಯನ್ನು ಕರ್ನಾಟಕ ಜನತಾ ಪಕ್ಷ ಹಿಡಿಯಲಿದೆ. ಬಿಜೆಪಿ ಧೂಳಿಪಟವಾಗಲಿದೆ. ಜಿಲ್ಲೆಯಲ್ಲಿ ಈಗಾಗಲೇ ಬಿಜೆಪಿ ವಿರೋಧಿ ಅಲೆ ಎದ್ದಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೆಲಕಚ್ಚುವುದು ನಿಶ್ಚಿತ. ಕೆಜೆಪಿಗೆ ಎಲ್ಲೆಡೆ ಜನ ಬೆಂಬಲ ವ್ಯಕ್ತವಾಗಿರುವುದರಿಂದ ಬೇರೆ ಪಕ್ಷಗಳ ಬೆಂಬಲ ಕೋರುವ ಪ್ರಮೇಯವೇ ಇಲ್ಲ. ನಾನು ಯಾವ ಪಕ್ಷದ ಜೊತೆಗೂ ಒಪ್ಪಂದ ಮಾಡಿಕೊಂಡಿಲ್ಲ. ಜನರ ಏಳಿಗೆ ಕಲ್ಯಾಣ ಕರ್ನಾಟಕ ಮಾತ್ರ ಕೆಜೆಪಿ ಗುರಿ ಎಂದು ಯಡಿಯೂರಪ್ಪ ಪುನರುಚ್ಚರಿಸಿದರು. ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ