ದೆಹಲಿಯಲ್ಲಿ ಬಾಲಕಿ ಅತ್ಯಾಚಾರ : ಭುಗಿಲೆದ್ದ ಆಕ್ರೋಶ
ಮೊಂಗೊಲ್ಪುರಿಯಲ್ಲಿರುವ ದೆಹಲಿಯ ಮುನಿಸಿಪಲ್ ಕಾರ್ಪೊರೇಷನ್ ನಡೆಸುತ್ತಿರುವ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯ ಮೇಲೆ ಗುರುವಾರ ಮಧ್ಯಾಹ್ನ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಈ ಘಟನೆ ಗುರುವಾರ ನಡೆದಿದ್ದರೂ ಶುಕ್ರವಾರ ಬೆಳಿಗ್ಗೆ ಈ ಸಂಗತಿಯನ್ನು ಬಾಲಕಿಯ ಪಾಲಕರು ಪೊಲೀಸರಿಗೆ ತಿಳಿಸಿದ್ದಾರೆ.
ಬಾಲಕಿ ಮರುದಿನ ಶಾಲೆಗೆ ಹೋಗಲು ನಿರಾಕರಿಸಿದಾಗ ಈ ಘಟನೆ ಪಾಲಕರಿಗೆ ತಿಳಿದುಬಂದಿದೆ. ಅತ್ಯಾಚಾರ ನಡೆದಿರುವುದನ್ನು ಸರಕಾರಿ ಆಸ್ಪತ್ರೆ ಖಚಿತಪಡಿಸಿದ್ದು, ಆಕೆಯನ್ನು ಮೇಲಿಂದ ಮೇಲೆ ಅತ್ಯಾಚಾರಕ್ಕೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದನ್ನು ಪೊಲೀಸರು ತಳ್ಳಿಹಾಕಿಲ್ಲ.
ಬಾಲಕಿಯ ಗುಪ್ತಾಂಗಕ್ಕೆ ತೀವ್ರ ಗಾಯವಾಗಿದೆ ಎಂದು ಹೇಳಲಾಗಿದ್ದು, ಆಕೆಯನ್ನು ಸಂಜಯ್ ಗಾಂಧಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿದೆ. ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿರುವ ಬಾಲಕಿ ಆರೋಪಿಯ ಗುರುತು ಹೇಳಿಲ್ಲ. ಪೊಲೀಸರು ಶಾಲೆಯ ಭದ್ರತಾ ಸಿಬ್ಬಂದಿಯನ್ನು ವಿಚಾರಣೆಗಾಗಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ಉಳಿದ ಸಿಬ್ಬಂದಿಗಳನ್ನು ವಿಚಾರಿಸುತ್ತಿದ್ದಾರೆ.
ಆಸ್ಪತ್ರೆಗೆ ದಾಳಿಯಿಟ್ಟ ಜನರು : ಮತ್ತೆ ಮತ್ತೆ ಅತ್ಯಾಚಾರಗಳಾಗುತ್ತಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಮಾರು 400 ಜನರಿದ್ದ ಗುಂಪು ಸಂಜಯ್ ಗಾಂಧಿ ಆಸ್ಪತ್ರೆಯ ಎದುರಿಗೆ ಜಮಾಯಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಘಟನೆ ನಡೆದ ಶಾಲೆಯ ಮುಂದೆಯೂ ಜನರು ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗುತ್ತಿದ್ದಂತೆ ಜನರನ್ನು ಚೆದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಬೇಕಾಯಿತು. ಕೆಲ ವಾಹನಗಳಿಗೆ ಕಲ್ಲು ಎಸೆಯಲಾಗಿದೆ. ಪ್ರತಿಭಟನೆ ತೀವ್ರಸ್ವರೂಪ ಪಡೆಯುವ ಸೂಚನೆ ಕಂಡುಬರುತ್ತಿದ್ದಂತೆ ಲಾಠಿ ಚಾರ್ಜ್ ಮಾಡಿ ಜನರನ್ನು ಚೆದುರಿಸಿದ ಪೊಲೀಸರು ಆಸ್ಪತ್ರೆಯ ಎದುರಿಗೆ ಭಾರೀ ಬಿಗಿ ಬಂದೋಬಸ್ತ್ ಒದಗಿಸಿದ್ದಾರೆ.
ದೆಹಲಿಯಲ್ಲಿ ಡಿ.16ರಂದು 'ನಿರ್ಭಯಾ'ಳ ಮೇಲೆ ಭೀಕರ ಅತ್ಯಾಚಾರ ನಡೆದ ಮೇಲೆ ನ್ಯಾ. ಜೆಎಸ್ ವರ್ಮಾ ಅವರ ನೇತೃತ್ವದಲ್ಲಿ ಕ್ರಮ ಜರುಗಿಸಲು ಸಮಿತಿ ರಚಿಸಲಾಗಿತ್ತು. ಮಹಿಳೆಯರ ರಕ್ಷಣೆಗೆಂದು ಬಜೆಟ್ಟಿನಲ್ಲಿ ಸಾವಿರ ಕೋಟಿ ರು. ಮೀಸಲಿಡಲಾಗಿದೆ. ಇನ್ನು ಮೇಲಾದರೂ ಮಹಿಳೆಯರು ನಿರ್ಭಯದಿಂದಿರುತ್ತಾರೆಂದರೆ ಬಜೆಟ್ ದಿನವೇ ಅತ್ಯಾಚಾರ ನಡೆದಿದೆ.
ಮಹಿಳೆಯರ ರಕ್ಷಣೆಗೆಂದು ಸಾವಿರ ಕೋಟಿ ರು.ಯೇ ಮೀಸಲಿಡಲಿ, ಹತ್ತು ಸಾವಿರ ಕೋಟಿ ರು.ಯನ್ನೇ ಮೀಸಲಿಡಲಿ, ಇಂಥ ಹಣದಿಂದ ಮಹಿಳೆಯರ ರಕ್ಷಣೆ ಮಾಡಲು ಹೇಗೆ ಸಾಧ್ಯ ಎಂದು ಟ್ವಿಟ್ಟರಿನಲ್ಲಿ ಹಲವಾರು ಟ್ವಿಟ್ಟಿಗರು ಪ್ರಶ್ನಿಸಿದ್ದರು. (ಪಿಟಿಐ)