ಉಂಡ ಮನೆಗೆ 2 ಬಗೆದಿದ್ದ ಗುರು ಟೈಂ ಲೈನ್
ಗಲ್ಲಿಗೇರಿಸಿರುವುದು ತಡವಾಗಿದೆಯಾದರೂ ಕಡೆಗೂ ಉಗ್ರ ಅಫ್ಜಲ್ ಗುರುವನ್ನು ಗಲ್ಲಿಗೇರಿಸುವ ಮುಖಾಂತರ ಜಾಗತಿಕ ಭಯೋತ್ಪಾದಕರಿಗೆ ಭಾರತ ಸ್ಪಷ್ಟ ಸಂದೇಶ ರವಾನಿಸಿರುವುದು ನಿರಾಳತೆಯನ್ನು ಮೂಡಿಸಿದೆ. 2012ರ ನವೆಂಬರ್ 21ರಂದು ಮುಂಬೈ ದಾಳಿಯಲ್ಲಿ ಸಿಕ್ಕಿಬಿದ್ದಿದ್ದ ಮತ್ತೊಬ್ಬ ಉಗ್ರ ಅಜ್ಮಲ್ ಕಬಸ್ನನ್ನು ಗಲ್ಲಿಗೇರಿಸಿದ ನಂತರ ನೇಣಿಗೇರುತ್ತಿರುವ ಎರಡನೇ ಉಗ್ರ ಅಫ್ಜಲ್.
ಸಂಸತ್ ದಾಳಿ ನಡೆದ ನಂತರ ಹನ್ನೊಂದು ವರ್ಷಗಳ ಸುದೀರ್ಘ ಸಮಯ ಸಾಕಷ್ಟು ನಾಟಕೀಯ ಬೆಳವಣಿಗೆಗಳನ್ನು ಕಂಡಿದೆ. ಸಂಸತ್ ದಾಳಿ ನಡೆದ ನಂತರ ಆತನನ್ನು ಗಲ್ಲಿಗೇರಿಸುವವರೆಗೆ ನಡೆದುಬಂದ ದಾರಿಯತ್ತ ಒಂದು ಬಾರಿ ಕಣ್ಣು ಹಾಯಿಸೋಣ.
ಡಿಸೆಂಬರ್ 13, 2001 : ಐದು ಉಗ್ರರು ಸಂಸತ್ ಭವನದ ಆವರಣದೊಳಗೆ ನುಗ್ಗಿ ಮನಬಂದಂತೆ ಗುಂಡು ಹಾರಿಸಿ 9 ಜನರನ್ನು ಬಲಿ ತೆಗೆದುಕೊಂಡು, 15 ಜನರನ್ನು ಗಾಯಗೊಳಿಸಿದ್ದರು.
ಡಿಸೆಂಬರ್ 15, 2001 : ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಅಫ್ಲಲ್ ಗುರುವನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಸೆರೆ ಹಿಡಿಯಲಾಯಿತು. ನಂತರ ದೆಹಲಿ ಯುನಿವರ್ಸಿಟಿಯ ಜಾಕಿರ್ ಹುಸೇನ್ ಕಾಲೇಜಿನ ಪ್ರಾಧ್ಯಾಪಕ ಎಸ್ಎಆರ್ ಗೀಲಾನಿಯನ್ನು ವಿಚಾರಣೆಗೆ ವಶಪಡಿಸಿಕೊಂಡು ನಂತರ ಬಂಧಿಸಲಾಯಿತು. ತದನಂತರ ಶೌಕತ್ ಹುಸೇನ್ ಗುರು ಮತ್ತು ಅಫ್ಸಾನ್ ಗುರುವನ್ನು ಕೂಡ ಬಂಧಿಸಲಾಯಿತು.
ಡಿಸೆಂಬರ್ 29, 2001 : ಅಫ್ಲಲ್ ಗುರುವನ್ನು ಹತ್ತು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಯಿತು.
ಜೂನ್ 4, 2002 : ಅಫ್ಜಲ್ ಗುರು, ಗೀಲಾನಿ, ಶೌಕತ್ ಹುಸೇನ್ ಗುರು ಮತ್ತು ಅಫ್ಸಾನ್ ಗುರು ವಿರುದ್ಧ ಆರೋಪಪಟ್ಟಿ ಸಿದ್ಧಪಡಿಸಲಾಯಿತು.
ಡಿಸೆಂಬರ್ 18, 2002 : ಎಸ್ಎಆರ್ ಗೀಲಾನಿ, ಅಫ್ಜಲ್ ಗುರು, ಶೌಕತ್ ಹುಸೇನ್ ಗುರುವಿಗೆ ಮರಣದಂಡನೆ ವಿಧಿಸಲಾಯಿತು. ಆದರೆ, ಅಫ್ಸಾನ್ ಗುರುವನ್ನು ಆರೋಪದಿಂದ ಮುಕ್ತ ಮಾಡಲಾಯಿತು.
ಆಗಸ್ಟ್ 30, 2003 : ಸಂಸತ್ ದಾಳಿಯ ಮತ್ತೊಬ್ಬ ಪ್ರಮುಖ ಆರೋಪಿ, ಜೈಶ್-ಎ-ಮೊಹಮ್ಮದ್ ಸಂಘಟನೆಯ ನಾಯಕ ಗಾಝಿ ಬಾಬಾನನ್ನು ಗಡಿ ರಕ್ಷಣಾ ಪಡೆ ಶ್ರೀನಗರದಲ್ಲಿ ಹತ್ಯೆಗೈಯುತ್ತದೆ. ಹತ್ತು ಗಂಟೆಗಳ ಕಾಲ ನಡೆದ ಗುಂಡಿ ದಾಳಿಯಲ್ಲಿ ಆತನ ಜೊತೆ ಇನ್ನೂ ಮೂವರು ಉಗ್ರರು ಹತರಾಗುತ್ತಾರೆ.
ಅಕ್ಟೋಬರ್ 29, 2003 : ಗೀಲಾನಿಗೆ ಆರೋಪದಿಂದ ಮುಕ್ತಿ.
ಆಗಸ್ಟ್ 4, 2005 : ಅಫ್ಜಲ್ ಗುರುವಿಗೆ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಸುಪ್ರೀಂಕೋರ್ಟ್ ದೃಢಪಡಿಸುತ್ತದೆ. ಆದರೆ, ಶೌಕರ್ ಹುಸೇನ್ ಗುರುವಿಗೆ ವಿಧಿಸಿದ್ದ ಮರಣದಂಡನೆಯನ್ನು 10 ವರ್ಷ ಕಠಿಣ ಜೈಲು ಶಿಕ್ಷೆಗೆ ಕಡಿಮೆ ಮಾಡುತ್ತದೆ.
ಸೆಪ್ಟೆಂಬರ್ 26, 2006 : ಅಫ್ಜಲ್ ಗುರುವನ್ನು ಗಲ್ಲಿಗೇರಿಸಬೇಕೆಂದು ದೆಹಲಿ ಕೋರ್ಟ್ ಆದೇಶ ನೀಡುತ್ತದೆ.
ಅಕ್ಟೋಬರ್ 3, 2006 : ಅಫ್ಲಲ್ ಗುರುವಿನ ಹೆಂಡತಿ ತಬಸ್ಸುಮ್ ಗುರು ತನ್ನ ಗಂಡನಿಗೆ ಕ್ಷಮಾದಾನ ನೀಡಬೇಕೆಂದು ಆಗ್ರಹಿಸಿ ಅಂದಿನ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರಿಗೆ ಪತ್ರ ಬರೆಯುತ್ತಾರೆ.
ಜನವರಿ 12, 2007 : ಗಲ್ಲು ಶಿಕ್ಷೆ ನೀಡಿದ ಆದೇಶವನ್ನು ಮರುಪರಿಶೀಲಿಸಬೇಕು ಎಂಬು ಆಗ್ರಹಿಸಿ ಸಲ್ಲಿಸಿದ ಅರ್ಜಿಯನ್ನು 'ಮೆರಿಟ್ ಇಲ್ಲ' ಎಂದು ಸುಪ್ರೀಂಕೋರ್ಟ್ ತಿರಸ್ಕರಿಸುತ್ತದೆ.
ಮೇ 19, 2010 : ದೆಹಲಿ ಸರಕಾರ ಕೂಡ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿ, ಸುಪ್ರೀಂಕೋರ್ಟ್ ಆದೇಶವನ್ನು ಪುರಸ್ಕರಿಸುತ್ತದೆ.
ಡಿಸೆಂಬರ್ 30, 2010 : ಶೌಕತ್ ಹುಸೇನ್ ಗುರುವನ್ನು ತೀಹಾರ್ ಜೈಲಿನಿಂದ ಬಿಡುಗಡೆ ಮಾಡಲಾಗುತ್ತದೆ.
ಡಿಸೆಂಬರ್ 10, 2012 : ಡಿಸೆಂಬರ್ 22ರಂದು ಚಳಿಗಾಲದ ಅಧಿವೇಶನ ಮುಗಿದ ಮೇಲೆ ಉಗ್ರ ಅಫ್ಜಲ್ ಗುರುವಿಗೆ ವಿಧಿಸಿದ್ದ ಗಲ್ಲು ಶಿಕ್ಷೆಯ ಪ್ರಕರಣವನ್ನು ಕೈಗೆತ್ತಿಕೊಳ್ಳುವುದಾಗಿ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ಹೇಳುತ್ತಾರೆ.
ಫೆಬ್ರವರಿ 3, 2013 : ಅಫ್ಜಲ್ ಗುರು ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಕೂಡ ತಿರಸ್ಕರಿಸುತ್ತಾರೆ.
ಫೆಬ್ರವರಿ 9, 2013 : ದೆಹಲಿಯ ತೀಹಾರ್ ಜೈಲಿನಲ್ಲಿ ಬೆಳಗಿನ 8 ಗಂಟೆಗೆ ಅಫ್ಜಲ್ ಗುರುವನ್ನು ಗಲ್ಲಿಗೇರಿಸಲಾಗುತ್ತದೆ.