ಅಫ್ಜಲ್ ಗುರುಗೆ ಗಲ್ಲಾಯಿತು : ಶಿಂಧೆ ಅಧಿಕೃತ ಪ್ರಕಟಣೆ
ಅಂದಹಾಗೆ ಮುಂಬೈ ದಾಳಿಕೋರ ಅಜ್ಮಲ್ ಕಸಬ್ ನನ್ನು ಗಲ್ಲಿಗೇರಿಸಿದ್ದನ್ನು ದೃಢಪಡಿಸಿದ್ದೂ ಇದೇ ಗೃಹ ಸಚಿವ ಸುಶೀಲ್ ಕುಮಾರ್. 'ಫೆ. 4 ರಂದು ಅಫ್ಜಲ್ ಗುರುಗೆ ಗಲ್ಲು ಪ್ರಕರಣವನ್ನು ಕೂಲಂಕಶವಾಗಿ ಪರಿಶೀಲಿಸಿ ಸಹಿ ಮಾಡಿದ್ದೆ. ಇದೇ 8 ರಂದು ಗಲ್ಲು ಶಿಕ್ಷೆ ನೀಡಲು ದಿನಾಂಕ, ಸಮಯವನ್ನು ನಿರ್ಧರಿಸಲಾಯಿತು' ಎಂದು ಶಿಂಧೆ ಮಾಹಿತಿ ನೀಡಿದ್ದಾರೆ.
ಕಾಶ್ಮೀರ ಕಣಿವೆಯಲ್ಲಿ ಅತ್ಯಂತ ಬಿಗಿ ಭದ್ರತೆ: ಇಂದು ಬೆಳಗ್ಗೆ ಗಲ್ಲಿಗೇರಿದ ಅಫ್ಜಲ್ ಗುರು (43) ಮೂಲತಃ ಕಾಶ್ಮೀರದ ಬಾರಾಮುಲ್ಲಾದವನು. ಅಂದರೆ ಅಜ್ಮಲ್ ಕಸಬ್ ನೆರೆಯ ಪಾಕಿಸ್ತಾನದಿಂದ ಬಂದಿದ್ದರೆ ಈ ಉಗ್ರ ನಮ್ಮ ಮಧ್ಯೆಯೇ ಬೆಳೆದವನು. ವಿದ್ಯಾವಂತ ಆದರೂ ಭಯೋತ್ಪಾದನೆಯ ಮಾರ್ಗದಲ್ಲಿ ಹೆಜ್ಜೆ ಹಾಕಿದ.
ಮೊನ್ನೆ ರಾಷ್ಟ್ರಪತಿ ಪ್ರಣಬ್ ದಾ ಅವರು ಅಫ್ಜಲ್ ಗುರುವಿನ ಮರಣಭಿಕ್ಷೆಯನ್ನು ತಿರಸ್ಕರಿಸುತ್ತಿದ್ದಂತೆ ಕಾಶ್ಮೀರದಲ್ಲಿ ಅಫ್ಜಲ್ ಗುರುವಿನ ಮರಣದಂಡನೆ ಗ್ಯಾರಂಟಿ ಎಂಬ ಮಾತು ಕಾಡ್ಗಿಚ್ಚಿನಂತೆ ಹರಡಿತ್ತು. ಹಾಗಾಗಿ, ಕಣಿವೆಯಲ್ಲಿ ಬಿಗುವಿನ ವಾತಾವರಣ ಮೂಡಿತ್ತು. ನಿನ್ನೆ ರಾತ್ರಿಯೇ ಜಮ್ಮು ಕಾಶ್ಮೀರ ಪೊಲೀಸರಿಗೆ ಮರಣದಂಡನೆ ಮಾಹಿತಿ ರವಾನೆಯಾಗಿತ್ತು.
ಇಂದು ಬೆಳಗ್ಗೆ 'ಅಫ್ಜಲನಿಗೆ ಗಲ್ಲು ಆಯಿತು' ಎಂಬ ಸುದ್ದಿ ಅಲ್ಲಿಲ್ಲಿ ಹರಡಿತ್ತು. ಆದರೆ ತಕ್ಷಣವೇ ಜಮ್ಮು ಕಾಶ್ಮೀರ ಸರಕಾರ ಕೇಬಲ್ ಟಿವಿ ಪ್ರಸಾರವನ್ನು ಸ್ಥಗಿತಗೊಳಿಸಿತು. ಮೊಬೈಲ್ ಸೇವೆಯನ್ನೂ ತಾತ್ಕಾಲಿಕವಾಗಿ ತಡೆಹಿಡಿದಿದೆ. ಇನ್ನು ಪ್ರವಾಸದಲ್ಲಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ವಾಪಸಾಗಿದ್ದಾರೆ.
ಈ ಮಧ್ಯೆ, ಅಫ್ಜಲ್ ಗುರುನನ್ನು ಗಲ್ಲಿಗೇರಿಸಿದ್ದನ್ನು ಪ್ರತಿಭಟಿಸಿ ಹುರಿಯತ್ ಕಾನ್ಫರನ್ಸ್ ಒಕ್ಕೂಟವು ಮೂರು ದಿನಗಳ ಬಂದ್ ಗೆ ಕರೆ ನೀಡಿದೆ. ಕಣಿವೆಯಲ್ಲಿ ಉದ್ವಿಗ್ನ ವಾತಾವರಣ ಮೂಡಿದೆ. ಉಗ್ರರ ಸೇಡಿನ ಕ್ರಮಕ್ಕೆ ಮುಂಜಾಗ್ರತೆಯಾಗಿ ಕೇಂದ್ರ ಸರಕಾರ 1 ವಾರ ಕಾಲ ಕರ್ಫ್ಯೂ ವಿಧಿಸಿದೆ. ಜತೆಗೆ ದೆಹಲಿ ಸೇರಿದಂತೆ ಇತರೆ ಭಾಗಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.
1984ರಲ್ಲಿ ಉಗ್ರವಾದಿ, ಜೆಕೆಎಲ್ಎಫ್ ನಾಯಕ ಮಕ್ಬೂಲ್ ಭಟ್ ಮರಣದಂಡನೆಯ ನಂತರ ಜಮ್ಮು ಕಾಶ್ಮೀರದಿಂದ ಗಲ್ಲಿಗೇರಿದ ಎರಡನೆಯ ಉಗ್ರ ಅಫ್ಜಲ್.