ಸುತ್ತೂರು ಪುಣ್ಯಕ್ಷೇತ್ರದ ಮಹಿಮೆಯ ಕಥೆ
ಸುತ್ತೂರಿನ ಶ್ರೀ ಮಠಕ್ಕೆ ಸುಮಾರು ಹತ್ತು ಶತಮಾನಗಳ ಗತಇತಿಹಾಸವಿದೆ. ಈ ಕ್ಷೇತ್ರ ಶಾಂತಿ, ಸಂಯಮ, ಸಹಬಾಳ್ವೆಯನ್ನು ನಾಡಿಗೆ ಸಾರಿದ ಕ್ಷೇತ್ರವೂ ಹೌದು. ಇದಕ್ಕೆ ಪೂರಕವಾದ ಕಥೆಯೊಂದು ಪ್ರಚಲಿತದಲ್ಲಿರುವುದನ್ನು ನಾವು ಕಾಣಬಹುದು.
ಅದು ಸುಮಾರು ಒಂದು ಸಾವಿರ ವರ್ಷಗಳ ಹಿಂದಿನ ಕಾಲಾವಧಿ. ರಾಜರ ಆಡಳಿತವಿದ್ದ ದಿನಗಳು. ಎಲ್ಲೆಡೆಯೂ ರಾಜ್ಯ ವಿಸ್ತರಣೆಗಾಗಿ ರಾಜರುಗಳ ನಡುವೆ ಹೋರಾಟ ನಡೆಯುತ್ತಿತ್ತು. ಆಗಾಗ್ಗೆ ರಾಜರುಗಳು ದಂಡೆಯಾತ್ರೆ ಕೈಗೊಳ್ಳುತ್ತಿದ್ದರು. ಒಬ್ಬ ರಾಜನ ಮೇಲೆ ಮತ್ತೊಬ್ಬ ರಾಜ ಯುದ್ಧ ಸಾರುತ್ತಾ ಯುದ್ದ ಮಾಡುವುದರಲ್ಲಿಯೇ ದಿನಕಳೆಯುತ್ತಿದ್ದರು. ಅದರಂತೆ ಆಗಿನ ಕಂಚಿಯ ರಾಜೇಂದ್ರ ಚೋಳನೂ ಹಾಗೂ ತಲಕಾಡಿನ ಗಂಗರಾಜ ರಾಚಮಲ್ಲ ಇಬ್ಬರು ವೈರಿಗಳಾಗಿದ್ದರು. ಇವರಿಬ್ಬರ ನಡುವೆ ಆಗಾಗ್ಗೆ ಯುದ್ಧಗಳು ನಡೆಯುತ್ತಿದ್ದವು.
ಒಮ್ಮೆ ಇವರಿಬ್ಬರು ಭಾರೀ ಸೈನ್ಯದೊಂದಿಗೆ ಯುದ್ಧಕ್ಕೆ ಸಜ್ಜಾಗುತ್ತಾರೆ. ಆಗ ರಾಜೇಂದ್ರ ಚೋಳ ಏರಿ ಹೊರಟಿದ್ದ ಕುದುರೆ ಗೊತ್ತುಗುರಿಯಿಲ್ಲದೆ ಓಡತೊಡಗಿತ್ತು. ಏನೇ ಮಾಡಿದರೂ ಕುದುರೆಯನ್ನು ತಡೆದು ನಿಲ್ಲಿಸುವುದಕ್ಕೆ ರಾಜನಿಗೆ ಸಾಧ್ಯವಾಗಲಿಲ್ಲ. ಹಾಗೆ ಓಡಿದ ಕುದುರೆ ಕಪಿಲಾ ನದಿ ತೀರದಲ್ಲಿ ಕುಳಿತು ತಪಸ್ಸು ಮಾಡುತ್ತಿದ್ದ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳಿಗೆ ಪ್ರದಕ್ಷಿಣೆ ಹಾಕಿ ನಿಂತಿತು. ಇದರಿಂದ ಅಚ್ಚರಿಗೊಂಡ ರಾಜ ರಾಜೇಂದ್ರ ಚೋಳ ಕುದುರೆಯಿಂದಿಳಿದು ಧ್ಯಾನದಲ್ಲಿ ನಿರತರಾಗಿದ್ದ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಪಾದಕ್ಕೆರಗುತ್ತಾನೆ.
ಅದೇ ವೇಳೆಗೆ ರಾಜೇಂದ್ರ ಚೋಳನ ಕುದುರೆಯನ್ನು ಹಿಂಬಾಲಿಸಿಕೊಂಡು ರಾಚಮಲ್ಲನೂ ಅಲ್ಲಿಗೆ ಬರುತ್ತಾನೆ. ತನ್ನ ಮುಂದೆ ಬಂದು ನಿಂತ ರಾಜರಿಬ್ಬರನ್ನು ಕಂಡ ಶ್ರೀ ಶಿವರಾತ್ರೀಶ್ವರ ಮಹಾಸ್ವಾಮಿಗಳು ಅವರಿಬ್ಬರಿಗೆ ವೈರತ್ವವನ್ನು ಬಿಟ್ಟು ಸಹಬಾಳ್ವೆ ನಡೆಸುವಂತೆಯೂ, ಅಲ್ಲದೆ ಯುದ್ಧದಿಂದ ಆಗುವ ಸಾವು ನೋವುಗಳ ಬಗ್ಗೆ ಬೋಧಿಸುತ್ತಾರೆ. ಅವರ ಬೋಧನೆಯಿಂದ ಇಬ್ಬರಿಗೂ ಜ್ಞಾನೋದಯವಾಗುತ್ತದೆ. ಮುಂದೆ ಅವರು ಯುದ್ಧವನ್ನು ಬಿಟ್ಟು ಆ ಪುಣ್ಯಕ್ಷೇತ್ರದಲ್ಲಿಯೇ ನೆಲೆಸುತ್ತಾರೆ. ಅಂತಹವೊಂದು ಪುಣ್ಯಕ್ಷೇತ್ರವೇ ಸುತ್ತೂರು ಶ್ರೀ ಕ್ಷೇತ್ರವಾಗಿದೆ.
ಶ್ರೀ ಶಿವರಾತ್ರೀಶ್ವರ ಮಹಾಸ್ವಾಮಿಗಳಿಂದ ಆರಂಭವಾದ ಸುತ್ತೂರು ವೀರಸಿಂಹಾಸನ ಮಠವು ಹತ್ತು ಶತಮಾನಕ್ಕೂ ಹೆಚ್ಚಿನ ಇತಿಹಾಸ ಹೊಂದಿದ್ದು, ಆದಿಗುರು ಶ್ರೀ ಶಿವರಾತ್ರಿಶ್ವರ ಭಗವತ್ಪಾದರಿಂದ (ಕ್ರಿ.ಶ. 950-1030) ಇಲ್ಲಿವರೆಗೆ ಈ ಮಠವು ಹಲವು ಜಗದ್ಗುರುಗಳನ್ನು ಕಂಡಿದ್ದು ಅವರ ವಿವರ ಹೀಗಿದೆ. [ಜಾತ್ರೆಯ ವಿವರಗಳು]
ಸುತ್ತೂರು ಮಠದ ಜಗದ್ಗುರುಗಳು : ಶ್ರೀ ಈಶಾನೇಶ್ವರ ಒಡೆಯರು (1030-1090), ಶ್ರೀ ನಿಜಲಿಂಗಶಿವಾಚಾರ್ಯರು (1090-1170), ಶ್ರೀ ಸಿದ್ಧನಂಜದೇಶಿಕೇಂದ್ರರು (1170-1240), ಶ್ರೀ ಕಪನಿ ನಂಜುಂಡದೇಶಿಕೇಂದ್ರರು (1240-1310), ಶ್ರೀ ಚೆನ್ನವೀರದೇಶಿಕೇಂದ್ರರು (1310-1380), ಶ್ರೀ ಸಿದ್ದಮಲ್ಲಶಿವಾಚಾರ್ಯರು (1380-1470), ಶ್ರೀ ಪರ್ವತೇಂದ್ರ ಶಿವಾಚಾರ್ಯರು (1470-1490), ಶ್ರೀ ಭಂಡಾರಿಬಸಪ್ಪ ಒಡೆಯರು (1490-1515), ಶ್ರೀ ಕೂಗಲೂರು ಶ್ರೀ ನಂಜುಂಡದೇಶೀಕೇಂದ್ರರು (1515-1530), ಶ್ರೀ ಘನಲಿಂಗದೇವರು (1530-1550), ಶ್ರೀ ಇಮ್ಮಡಿ ಶ್ರೀ ಶಿವರಾತ್ರೀಶ್ವರ ಸ್ವಾಮಿಗಳು (1550-1590), ಶ್ರೀ ಚೆನ್ನಬಸವದೇಶೀಕೇಂದ್ರರು (1590-1608), ಶ್ರೀ ಗುರುನಂಜದೇಶೀಕೇಂದ್ರರು (1608-1641), ಶ್ರೀ ಚೆನ್ನಬಸವದೇವಾಚಾರ್ಯರು (1641-1713), ಶ್ರೀ ಪಂಚಾಕ್ಷರದೇಶೀಕೇಂದ್ರರು (1713-1730), ಶ್ರೀ ಚಿದ್ಘನಶಿವಾಚಾರ್ಯರು (1730-1750), ಶ್ರೀ ಚೆನ್ನವೀರ ದೇಶಿಕೇಂದ್ರರು (1750-1801), ಶ್ರೀ ಮಹಾಂತ ದೇಶೀಕೇಂದ್ರರು (1801-1842), ಶ್ರೀ ಸಿದ್ಧಮಲ್ಲ ಶಿವಾಚಾರ್ಯರು (1842-1884), ಶ್ರೀ ಶಿವರಾತ್ರಿ ದೇಶೀಕೇಂದ್ರರು (1884-1902), ಶ್ರೀ ಮಂತ್ರಮಹರ್ಷಿ ಪಟ್ಟದ ಶ್ರೀ ಶಿವರಾತ್ರಿ ಮಹಾಸ್ವಾಮಿಗಳು (1902-1926), ರಾಜಗುರುತಿಲಕ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು (1926-1986).
ಇಪ್ಪತ್ಮೂರು ಜಗದ್ಗುರುಗಳ ಸೇವೆಯಿಂದ ಶ್ರೀಮಠವು ಅಭಿವೃದ್ಧಿ ಪಥದಲ್ಲಿ ಸಾಗುತ್ತಾ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರ ಮಟ್ಟದಲ್ಲಿ ತನ್ನ ಛಾಪು ಮೂಡಿಸುತ್ತಾ ಸಾಗುತ್ತಿದೆ. ಹಿರಿಯ ಜಗದ್ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುತ್ತಾ ಅಭಿವೃದ್ಧಿಯತ್ತ ಕೊಂಡೊಯ್ಯವಲ್ಲಿ 1986 ರಿಂದ 24ನೇ ಪೀಠಾಧಿಕಾರಿಗಳಾಗಿರುವ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು ಮುಂದಾಗಿದ್ದು, ಅವರ ಸಾರಥ್ಯದಲ್ಲಿ ಸುತ್ತೂರು ಜಾತ್ರೆ ವೈಶಿಷ್ಟ್ಯಪೂರ್ಣವಾಗಿ ನಡೆಯುತ್ತಿದೆ. ಸಾಮಾನ್ಯವಾಗಿ ಎಲ್ಲೆಡೆ ಜಾತ್ರೆಗಳು ನಡೆಯುತ್ತವೆ, ಆದರೆ ಸುತ್ತೂರಿನ ಜಾತ್ರೆ ಮಾತ್ರ ಇತರೆಡೆಗಳಲ್ಲಿ ನಡೆಯುವ ಜಾತ್ರೆಗಿಂತ ವಿಭಿನ್ನ ಮತ್ತು ವಿಶಿಷ್ಟ ಅನ್ನೋದು ಅಲ್ಲಿಗೆ ತೆರಳಿದವರಿಗೆ ಮಾತ್ರ ಗೊತ್ತಾಗುತ್ತದೆ.