ಬೆಂಗಳೂರು ಪೊಲೀಸ್ ವಿರುದ್ಧ ತಿರುಗಿಬಿದ್ದ ವಕೀಲ
ಸರ್ಕಲ್ ಇನ್ಸ್ ಪೆಕ್ಟರ್ ಶ್ರೀನಿವಾಸ ರೆಡ್ಡಿ, ಸಬ್ ಇನ್ಸ್ ಪೆಕ್ಟರ್ ದಾಳೇಗೌಡ ಹಾಗೂ ಇನ್ನೊಬ್ಬ ಅನಾಮಧೇಯ ವ್ಯಕ್ತಿಯ ವಿರುದ್ಧ ಸೋಮನಾಥ್ ಅವರು ಎಚ್ ಎಸ್ ಆರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೆಹಲಿಯಲ್ಲಿ ನಡೆದ ಕರಾಳ ಸಾಮೂಹಿಕ ಅತ್ಯಾಚಾರದ ವಿರುದ್ಧ ದನಿಯೆತ್ತಿದ ವಿದ್ಯಾರ್ಥಿ ಸಮೂಹ ಪ್ರತಿಭಟನೆ ನಡೆಸಿದ್ದು ಎಲ್ಲರಿಗೂ ತಿಳಿದಿರುವ ವಿಷಯ. ಈ ಸಂದರ್ಭದಲ್ಲಿ ಪೇದೆ ತೋಮರ್ ಸಿಂಗ್ ಅವರು ಹೃದಯಾಘಾತಕ್ಕೆ ಒಳಗಾಗಿ ಮೃತರಾಗಿದ್ದರು. ಆದರೆ, ತೋಮರ್ ಸಾವಿಗೆ ರೊಚ್ಚಿಗೆದ್ದ ವಿದ್ಯಾರ್ಥಿ ಸಮೂಹವೇ ಕಾರಣ ಎಂದು ಹೇಳಿ ಪೊಲೀಸರು ಹಲವರನ್ನು ಬಂಧಿಸಿದ್ದರು.
ಈ ರೀತಿ ಬಂಧಿತರಾದ ಅಮಾಯಕರ ಪರವಾಗಿ ವಕೀಲ ಸೋಮನಾಥ್ ಅವರು ವಾದಿಸಲು ಮುಂದಾಗಿದ್ದರು. ಆದರೆ, ಈ ನಡುವೆ ಅವರ ತಮ್ಮ ಲೋಕನಾಥ್ ಅವರನ್ನು ಎಳೆದುಕೊಂಡು ಹೋಗಿ ಎಚ್ ಎಸ್ ಆರ್ ಲೇಔಟ್ ಠಾಣೆಯಲ್ಲಿ ಪೊಲೀಸರು ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಮೂಲಕ ತೋಮರ್ ಕೇಸ್ ನಿಂದ ಸೋಮನಾಥ್ ಅವರ ಗಮನ ಅವರ ತಮ್ಮನ ಪ್ರಕರಣದ ಕಡೆಗೆ ತಿರುಗಲಿ ಎಂದು ಸಂಚು ಮಾಡಲಾಗಿದೆ ಎನ್ನಲಾಗಿದೆ.
ಆರೋಪಿತ ಬೆಂಗಳೂರು ಪೊಲೀಸರ ವಿರುದ್ಧ ಐಪಿಸಿ ಸೆಕ್ಷನ್ 304, 326,331, 340, 506(b) ಹಾಗೂ 120(b) ಅನ್ವಯ ದೂರು ದಾಖಲಿಸಲಾಗಿದೆ.
ಜ.12 ರಂದು ನನ್ನ ತಮ್ಮ ಲೋಕನಾಥ್ ಭಾರ್ತಿಯನ್ನು ರಾತ್ರಿ 11 ಗಂಟೆಗೆ ಬಂಧಿಸಿದ್ದಲ್ಲದೆ ಬಲವಂತವಾಗಿ ಎಚ್ ಎಸ್ ಆರ್ ಲೇಔಟ್ ಪೊಲೀಸ್ ಠಾಣೆಗೆ ಎಳೆದೊಯ್ಯಲಾಗಿದೆ. ಠಾಣೆಯಲ್ಲಿ ವಿಚಾರಣೆ ಹೆಸರಿನಲ್ಲಿ ಹಿಗ್ಗಾ ಮುಗ್ಗಾ ಥಳಿಸಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಲೋಕನಾಥ್ ಅಳಲು: ನನ್ನನ್ನು ಬಂಧಿಸಿರುವುದು ಏಕೆ ಎಂಬ ಸಿಂಪಲ್ ಪ್ರಶ್ನೆಗೆ ಪೊಲೀಸರು ಉತ್ತರಿಸಲಿಲ್ಲ. ಅವಾಚ್ಯ ಶಬ್ದದಲ್ಲಿ ನಿಂದಿಸುತ್ತಾ ಬಲವಂತವಾಗಿ ಪೊಲೀಸ್ ಠಾಣೆಗೆ ಕರೆದೊಯ್ದರು. ಇಬ್ಬರು ಪೇದೆಗಳು ನನ್ನನ್ನು ಒಂದು ಸೆಲ್ ಗೆ ದೂಡಿದರು. ನಂತರ ಕೈಕೋಳ ತೊಡಿಸಿದರು.
ಲಾಠಿ ಏಟು ಕೊಟ್ಟರು. ಪ್ರತಿರೋಧ ವ್ಯಕ್ತಪಡಿಸಿದ್ದಕ್ಕೆ ನನ್ನ ಜನನಾಂಗಕ್ಕೆ ಬಲವಾಗಿ ಲಾಠಿಯಿಂದ ಹೊಡೆದರು. ಕಿರುಚಾಟ ಜಾಸ್ತಿ ಮಾಡಿದಾಗ ನನ್ನ ಬಾಯಿಗೆ ಬಟ್ಟೆ ತುರುಕಿ ಪುನಃ ಹೊಡೆಯಲು ಆರಂಭಿಸಿದರು. ಈಗಲೂ ನೆನಸಿಕೊಂಡರೆ ಮೈ ನಡುಕುತ್ತದೆ ಎಂದು ಟೆಕ್ಕಿ ಲೋಕನಾಥ್ ತಮ್ಮ ಅನುಭವವನ್ನು ಪತ್ರಿಕೆಯೊಂದರ ಜೊತೆ ಹೇಳಿಕೊಂಡಿದ್ದಾರೆ.
ಆದರೆ, ಎಚ್ ಎಸ್ ಆರ್ ಲೇಔಟ್ ಪೊಲೀಸರು ಈ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಲೋಕನಾಥ್ ಮೇಲೆ ಕೊಲೆ ಬೆದರಿಕೆ ದೂರು ದಾಖಲಾಗಿದೆ.
ಲೋಕನಾಥ್ ಅವರು ತಾವು ವಾಸಿಸುತ್ತಿರುವ ಪಿಜಿಯಲ್ಲಿರುವ ಅಡುಗೆ ಕೆಲಸದಾಳು ಗೋವಿಂದ ಅವರನ್ನು ಚಾಕು ಹಿಡಿದು ಬೆದರಿಸಿದ್ದಾರೆ. ಲೋಕನಾಥ್ ವಿರುದ್ಧ ಮನೆ ಮಾಲೀಕ ರವೀಂದರ್ ಅನೆಜಾ ದೂರು ನೀಡಿದ್ದರು, ಜ.7ರಂದು ನಡೆದ ಈ ಘಟನೆ ಸಂಬಂಧ ಲೋಕನಾಥ್ ರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆದರೆ, ಲೋಕನಾಥ್ ಬಂಧನ ಪ್ರಕರಣ ದಿನದಿಂದ ದಿನಕ್ಕೆ ವಿಷಯಗೊಳ್ಳುತ್ತಿದ್ದು, ಬಂಧನವನ್ನು ಖಂಡಿಸಿ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ ಅವರು ಪ್ರತಿಭಟನೆ ನಡೆಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಆಯುಕ್ತ ಟಿ. ಸುನೀಲ್ ಕುಮಾರ್ ಅವರು ನಿಷ್ಪಕ್ಷಪಾತ ತನಿಖೆ ನಡೆಸುವ ಭರವಸೆ ನೀಡಿದ್ದಾರೆ.