45 ತಿಂಗಳ ನಂತರ ದಕ್ಕಿದ ಸಂಸತ್ ಸದಸ್ಯತ್ವ
ಹೌದು. ಜೆ ಶಾಂತಾ ಅವರು ಎಂಪಿ ಆಗಿ ಆಯ್ಕೆಯಾಗಿರುವುದಕ್ಕೆ ಯಾವುದೇ ಬಾಧಕವಾಗದಂತೆ ಹೈಕೋರ್ಟ್ ಇಂದು ಅಧಿಕೃತವಾಗಿ ಒಪ್ಪಿಗೆಯ ಮುದ್ರೆಯೊತ್ತಿದೆ. ಈ ಸಂಬಂಧ ಚಂದ್ರೇಗೌಡ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಅನೂರ್ಜಿತಗೊಳಿಸಿದೆ. ಪ್ರಸ್ತುತ, 15ನೇ ಲೋಕಸಭೆಯ ಅವಧಿ ಬರೋಬ್ಬರಿ ಮುಕ್ಕಾಲು ಪಾಲು ಮುಗಿದಿದ್ದು, ಇನ್ನೇನು ಚುನಾವಣೆಯ ಹೊಸ್ತಿಲಿಗೆ ಬಂದುನಿಂತಿದೆ.
ಮೊನ್ನೆಯಷ್ಟೇ ಸಂಸತ್ತಿನಲ್ಲಿ ಮತದಾನಕ್ಕೆ ತಮಗೆ ಅವಕಾಶ ನೀಡದಿರುವುದಕ್ಕೆ ತೀವ್ರ ಅಸಮಾಧಾನ ವ್ಯಪ್ತಪಡಿಸಿದ್ದ ಶಾಂತಾ ಅವರಿಗೆ ಇಂದಿನ ಕೋರ್ಟ್ ತೀರ್ಪು ನೈತಿಕ ಜಯ ತಂದಿತ್ತಿದೆ.
ಶಾಂತಾ ಆಯ್ಕೆಯನ್ನು ಪ್ರಶ್ನಿಸಿ ಪರಾಜಿತ ಅಭ್ಯರ್ಥಿ, ಕಾಂಗ್ರೆಸ್ಸಿನ ಎನ್.ವೈ. ಹನುಮಂತಪ್ಪ ಸುಪ್ರೀಂಕೋರ್ಟ್ ಮೊರೆಹೋಗಿದ್ದರು. ಸುಪ್ರೀಂ ಆಣಿತಿಯಂತೆ ಕಳೆದ ಸೆಪ್ಟೆಂಬರಿನಲ್ಲಿ ಮತಗಳ ಮರು ಎಣಿಕೆ ನಡೆದಿತ್ತು.
ಮರು ಮತ ಎಣಿಕೆ ಫಲಿತಾಂಶ ಹೀಗಿತ್ತು: 2009ರ ಏಪ್ರಿಲ್ನಲ್ಲಿ ನಡೆದಿದ್ದ 13ನೇ ಲೋಕಸಭೆ ಚುನಾವಣೆಯಲ್ಲಿ 2,243 ಮತಗಳ ಅಂತರದಿಂದ ಕಾಂಗ್ರೆಸ್ನ ಎನ್.ವೈ. ಹನುಮಂತಪ್ಪ ಸೋತಿದ್ದರು.
ಶಾಂತಾ 4,02,213 ಮತಗಳು ಮತ್ತು ಹನುಮಂತಪ್ಪ 3,99,970 ಮತಗಳನ್ನು ಗಳಿಸಿದ್ದರು. ಇದನ್ನು ಪ್ರಶ್ನಿಸಿ, ಚಂದ್ರೇಗೌಡ ಹೈಕೋರ್ಟ್ ಮೊರೆಹೋಗಿದ್ದರು. ಸೋದರಿ ಶಾಂತಾ ಗೆಲುವಿನ ಬಗ್ಗೆ ಬಿ ಶ್ರೀರಾಮುಲು ಸಂತಸ ವ್ಯಕ್ತಪಡಿಸಿದ್ದಾರೆ.