ಬೆಂಗಳೂರು ಮೆಟ್ರೋಗೆ ಮತ್ತೊಂದು ವ್ಯಕ್ತಿ ಬಲಿ
ನಮ್ಮ ಮೆಟ್ರೋ ಎರಡನೇ ಹಂತದ ಕಾಮಗಾರಿಯಲ್ಲಿ ತೊಡಗಿದ್ದ ಆಂಧ್ರಪ್ರದೇಶದ ಗುಂಟೂರು ಜಿಲ್ಲೆ ನಮಕ್ಕಲ್ ಮೂಲದ ನಟ್ಕಲ್ ಎಂಬ 18 ವರ್ಷದ ಯುವಕ ಮೃತಪಟ್ಟ ದುರ್ದೈವಿ.
ನಮ್ಮ ಮೆಟ್ರೋ ಶೌಚಾಲಯ ನಿರ್ಮಾಣ ಮತ್ತು ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಪ್ರದೀಪ್ ಇಂಡಸ್ಟೀಯಲ್ ಪ್ಯಾಕರ್ಸ್ ಲಿ. ಮೂಲಕ ನಟ್ಕಲ್ ಕೆಲಸ ಗಿಟ್ಟಿಸಿಕೊಂಡಿದ್ದ.
ಬುಧವಾರ ಮಧ್ಯಾಹ್ನ ಕಾಮಗಾರಿಯಲ್ಲಿ ತೊಡಗಿದ್ದಾಗ ವಿದ್ಯುತ್ ತಗುಲಿದೆ ತಕ್ಷಣವೇ ಬೌರಿಂಗ್ ಆಸ್ಪತ್ರೆಗೆ ಸೇರಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಆತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲಾಗುತ್ತದೆ ಎಂದು ಬಿಎಂಆರ್ ಸಿಎಲ್ ಮೆಟ್ರೋ ಸಂಸ್ಥೆ ಹೇಳಿಕೆ ನೀಡಿದೆ.
ಕಾರ್ಮಿಕ ಸುರಕ್ಷತೆ ಯಾರ ಹೊಣೆ?: ಮೆಟ್ರೋ ಕಾಮಗಾರಿ ಸಂದರ್ಭದಲ್ಲಿ ಅವಘಡಗಳು ಪದೇ ಪದೇ ಸಂಭವಿಸುತ್ತಲೇ ಇದೆ. ಕಾರ್ಮಿಕರ ಸಾವು ನೋವು ಜೊತೆಗೆ ಸಾರ್ವಜನಿಕರಿಗೂ ಅನೇಕ ಬಾರಿ ಗಾಯಗಳಾಗಿದೆ.
ಕಾರ್ಮಿಕರ ಸುರಕ್ಷತೆ ಬಗ್ಗೆ ಸ್ಯಾಮುಯಲ್ ಸತ್ಯಶೀಲನ್ ಎಂಬುವರ ತಂಡ ಸುಮಾರು ಎರಡು ವರ್ಷ ಅಧ್ಯಯನ ನಡೆಸಿ ವರದಿಯನ್ನು ತೆಗೆದುಕೊಂಡು ಕರ್ನಾಟಕ ಕಾರ್ಮಿಕ ಇಲಾಖೆಗೆ ಸಲ್ಲಿಸಿದೆ.
ಆದರೆ, ಕಾರ್ಮಿಕ ಇಲಾಖೆ ನಮಗೆ ಸಂಬಂಧಿಸಿಲ್ಲ ಎಂದು ಕೈ ಕೊಡವಿಕೊಂಡಿದೆ. ಕೇಂದ್ರ ರೈಲ್ವೆ ಹಾಗೂ ಕಾರ್ಮಿಕ ಇಲಾಖೆಗೆ ವರದಿ ಸಲ್ಲಿಸಿದ್ದಾರೆ. ನಂತರ ನಗರಾಭಿವೃದ್ಧಿ ಇಲಾಖೆಗೂ ವರದಿ ಸೇರಿದೆ.
ಕೊನೆಗೂ ಸೆ.6, 2012 ರಲ್ಲಿ ನಗರಾಭಿವೃದ್ಧಿ ಸಚಿವಾಲಯ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಬಿಎಂಆರ್ ಸಿಎಲ್ ಕಂಪನಿಗೆ ಪತ್ರ ಕಳಿಸಿದೆ.
ಅದರೆ, ಮೆಟ್ರೋ ಎರಡನೇ ಹಂತದ ಕಾಮಗಾರಿಯಲ್ಲಿ ದಿನನಿತ್ಯ ಕೆಲಸ ಮಾಡುವ ಕಾರ್ಮಿಕರ ಸ್ಥಿತಿ ಅಧೋಗತಿ ತಲುಪಿದ್ದು, ಯಾವುದೇ ಕಾರ್ಮಿಕ ಕಾಯ್ದೆ ನಿಯಮಗಳನ್ನು ಪಾಲಿಸಿಲ್ಲದಿರುವುದು ಕಂಡು ಬಂದಿದೆ.
1970ರ ಗುತ್ತಿಗೆದಾರ ಕಾರ್ಮಿಕ ಕಾಯ್ದೆ, ಕಟ್ಟಡ ನಿರ್ಮಾಣ ಕಾರ್ಮಿಕರ ಕಾಯ್ದೆ 1996ರ ನಿಮಯಗಳನ್ನು ಬಿಎಂಆರ್ ಸಿಎಲ್ ಮೀರಿದೆ ಎಂದು ಎಂದು ಆರ್ ಟಿಐ ಕಾರ್ಯಕರ್ತ ಸತ್ಯಶೀಲನ್ ಹೇಳಿದ್ದಾರೆ.
ಕಾರ್ಮಿಕರ ಜೀವಕ್ಕೆ ಬೆಲೆ ನೀಡಿದೆ ಬಿಎಂಆರ್ ಸಿಎಲ್ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದೆ. ಕಾಮಗಾರಿ ವಿಳಂಬಕ್ಕೂ ಕಾರ್ಮಿಕರ ಮೇಲೆ ಒತ್ತಡ ಹಾಕಲಾಗುತ್ತಿದೆ ಎಂದು ಸತ್ಯಶೀಲನ್ ಹೇಳಿದ್ದಾರೆ.
76 ಕಿ.ಮೀ ವ್ಯಾಪ್ತಿಯ ಬಿಎಂಆರ್ ಸಿಎಲ್ ನಮ್ಮ ಮೆಟ್ರೋ ಎರಡನೇ ಹಂತದ ಯೋಜನಾ ವೆಚ್ಚ 27,000 ಕೋಟಿ ರು ವೆಚ್ಚದಲ್ಲಿ ಕಾಮಗಾರಿ ನಡೆದಿದೆ. ಮೊದಲ ಹಂತಕ್ಕೆ ಸುಮಾರು 11,000 ಕೋಟಿ ರು ಖರ್ಚಾಗಿದೆ. ಆದರೂ ಎಂಜಿ ರಸ್ತೆ-ಭೈಯಪ್ಪನಹಳ್ಳಿ ಮಾರ್ಗ ಬಿಟ್ಟರೆ ಉಳಿದ ಮಾರ್ಗಗಳು ಇನ್ನೂ ಕಾಮಗಾರಿ ಹಂತದಲ್ಲಿದೆ.
2021ರ ಹೊತ್ತಿಗೆ ಮೆಟ್ರೋದಲ್ಲಿ ಸುಮಾರು 19 ಲಕ್ಷ ಜನ ಪ್ರಯಣಿಸುವ ನಿರೀಕ್ಷೆಯಿದೆ. ದೆಹಲಿ ಮೆಟ್ರೋ ಈಗಾಗಲೇ 20 ಲಕ್ಷ ಜನರನ್ನು ಪ್ರತಿದಿನ ಕರೆದೊಯ್ಯುತ್ತಿದೆ. ಗುರ್ ಗಾಂವ್ ಹಾಗೂ ನೋಯ್ಡಾ ಕಡೆಗೂ ಮೆಟ್ರೋ ಹಬ್ಬಿದೆ.