ಜೆಡಿಎಸ್ನಲ್ಲಿ ಸ್ವಾಮಿಗಳ ನಡುವೆ ಶೀತಲ ಸಮರ
ಬೆಂಗಳೂರು, ನ. 25 : ಮಂಡ್ಯ ಲೋಕಸಭಾ ಸದಸ್ಯ ಜೆಡಿಎಸ್ ನಾಯಕ ಚೆಲುವರಾಯಸ್ವಾಮಿ ಮತ್ತು ಪಕ್ಷದ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನಡುವೆ ಶೀತಲ ಸಮರ ಆರಂಭವಾಗಿದೆ. ಪಕ್ಷದಲ್ಲಿ ತಂದೆಮಕ್ಕಳು ಹೂಡಿದ್ದೇ ಲಗ್ಗೆ, ಆಡಿದ್ದೇ ಆಟ ಎಂಬ ಸ್ಥಿತಿಗೆ ಸೆಡ್ಡು ಹೊಡೆಯುವ ಪ್ರಯತ್ನಗಳು ರಾಜ್ಯದ ಅಲ್ಲಲ್ಲಿ ಕಂಡುಬರುತ್ತಿರುವುದಕ್ಕೆ ಇದು ಇನ್ನೊಂದು ಉದಾಹರಣೆಯಾಗಿದೆ.
ಹಾಸನ ಜಿಲ್ಲೆಯಲ್ಲಿ ಸಣ್ಣಗೆ ಆರಂಭವಾದ ಜೆಡಿಎಸ್ ಭೂಕಂಪ ಇದೀಗ ಮಂಡ್ಯ ಜಿಲ್ಲೆಯವರೆಗೂ ವಿಸ್ತರಿಸಿದ್ದು, ಚೆಲುವರಾಯಸ್ವಾಮಿ ಕುಮಾರಣ್ಣನ ಸರ್ವಾಧಿಕಾರದ ವಿರುದ್ಧ ಅಪಸ್ವರ ಎತ್ತುತ್ತಿದ್ದಾರೆ.
ಚೆಲುವಣ್ಣನ ಅಹವಾಲು ಏನೆಂದರೆ, ಪಕ್ಷ ಬಹುಮತ ಪಡೆದರೆ ಎಂದಿದ್ದರೂ ಕುಮಾರಸ್ವಾಮಿಗಳೇ ಮುಖ್ಯಮಂತ್ರಿ ಆಗುತ್ತಾರೆ. ಸ್ಥಿತಿ ಹೀಗಿರುವಾಗ ಪಕ್ಷದ ಅಧ್ಯಕ್ಷ ಸ್ಥಾನವನ್ನು ಅವರೇ ಏಕೆ ಇಟ್ಟುಕೊಳ್ಳಬೇಕು ಎನ್ನುವುದು ಅವರ ತಕರಾರು.
ಹಾಗಾಗಿ ಜೆಡಿಎಸ್ ಪಕ್ಷದ ಅಧ್ಯಕ್ಷ ಕುರ್ಚಿಯ ಮೇಲೆ ಚೆಲುವರಾಯಸ್ವಾಮಿ ಟರ್ಕಿ ಟವಲ್ಲು ಹಾಕಿದ್ದಾರೆ. ಇವರ ಆಸೆಗಳು ಕೇವಲ ಎರಡು. ಒಂದು ಪಕ್ಷಾಧ್ಯಕ್ಷ ತಾನಾಗಬೇಕು, ಎರಡನೇಯದು ಉತ್ತರ ಕರ್ನಾಟಕದ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಹಕ್ಕಿನಲ್ಲಿ ತಮಗೂ ಪಾಲುಬೇಕು ಎನ್ನುವುದು.
ಈ ಮಧ್ಯೆ, ತಂದೆಮಕ್ಕಳ ಪಾರ್ಟಿಯಲ್ಲಿ ತಮಗೆ ಸೇಬುಹಣ್ಣು ದಕ್ಕುವುದಿಲ್ಲ ಎನ್ನುವುದನ್ನು ಅರಿತ ಚೆಲುವಣ್ಣ ಕಳೆದ ವಾರ ಎಸ್.ಎಂ.ಕೃಷ್ಣ ಅವರನ್ನು ಭೇಟಿಯಾದುದು ಅನೇಕ ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ. ಪಕ್ಷದಲ್ಲಿ ದೇವೇಗೌಡರು, ಕುಮಾರಸ್ವಾಮಿಗಳು ಮತ್ತು ರೇವಣ್ಣ ಮೂರು ಶಕ್ತಿಕೇಂದ್ರಗಳು. ನಾಲ್ಕನೇ ಶಕ್ತಿಕೇಂದ್ರ ತಾವಾಗಬೇಕು ಎನ್ನುವುದು ಚೆಲುವರಾಯಸ್ವಾಮಿ ಅವರ ಮಹತ್ವಾಕಾಂಕ್ಷೆಯಾಗಿದೆ.
ಬಿಜೆಪಿ ಮತ್ತು ಕಾಂಗ್ರೆಸ್ಸಿನಲ್ಲಿ ಇರುವ ಹಾಗೆ ಹೈಕಮಾಂಡುಗಳ ಕೈವಾಡ ಜೆಡಿಎಸ್ ನಲ್ಲಿ ಇಲ್ಲ. ಅಲ್ಲಿರುವುದು ಏನಿದ್ದರೂ ಒಂದೇ ಕಮಾಂಡ್, ಒಂದೇ ಕಪಿಮುಷ್ಠಿ. ಇದರ ವಿರುದ್ಧ ಚೆಲುವರಾಯಸ್ವಾಮಿ ಇದೀಗ ಕೆಂಗಣ್ಣಾಗಿದ್ದಾರೆ. ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ಪಕ್ಷದಲ್ಲಿರುವ ಅಸಲಿ ಅಸಮಾಧಾನಗಳು ಹೊಗೆಯಾಗುವುದರ ಇನ್ನೊಂದು ಸೂಚನೆ ಇದಾಗಿದೆ.
ಇಂಥ ಹೊಗೆ ಜೆಡಿಎಸ್ನಲ್ಲಿ ಆರಂಭವಾದದ್ದು ಸಕಲೇಶಪುರ ಮತ್ತು ಶ್ರವಣಬೆಳಗೊಳದಲ್ಲಿ. ಶ್ರವಣಬೆಳಗೊಳ ಶಾಸಕ ಸಿಎಸ್ ಪುಟ್ಟೇಗೌಡ ಮತ್ತು ಸಕಲೇಶಪುರದ ಮಾಜಿ ಶಾಸಕ ಎಚ್ಎಂ ವಿಶ್ವನಾಥ್ ಕಳೆದ ತಿಂಗಳು ಎಚ್ ಡಿ ರೇವಣ್ಣನ ಸರ್ವಾಧಿಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದು ಇಲ್ಲಿ ಸ್ಮರಿಸಬಹುದಾಗಿದೆ.