ಬಳ್ಳಾರಿ ಮರುಎಣಿಕೆ ಮುಕ್ತಾಯ: ಘೋಷಣೆಯಷ್ಟೇ ಬಾಕಿ
ಶಾಂತಾ: 4,02,213
ಹನುಮಂತಪ್ಪ: 3,99,970
ಖುದ್ದು ಹನುಮಂತಪ್ಪ ಅವರೇ ಮತ ಎಣಿಕೆ ಕೇಂದ್ರದಿಂದ ಹತಾಶರಾಗಿ ಹೊರನಡೆದಿದ್ದಾರೆ. ಇದರೊಂದಿಗೆ ಬಿಜೆಪಿಯ ಜೆ. ಶಾಂತಾ ಅವರು ಸಂಸದೆಯಾಗಿ ಮುಂದುವರಿಯುವುದು ಖಾತ್ರಿಯಾಗಿದೆ. ಆದರೆ ಅಧಿಕೃತವಾಗಿ ಮರು ಎಣಿಕೆ ಫಲಿತಾಂಶ ಇನ್ನೂ ಘೋಷಣೆಯಾಗಿಲ್ಲ.
ಮೂಲಗಳ ಪ್ರಕಾರ ಎಣಿಕೆ ಕಾರ್ಯ ಎಲ್ಲವೂ ಮುಗಿದಿದ್ದು, ಚುನಾವಣಾಧಿಕಾರಿ ಫಲಿತಾಂಶವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಹೈಕೋರ್ಟಿನಿಂದ ಅಂತಿಮ ಅನುಮೋದನೆ ಪಡೆದು ಫಲಿತಾಂಶ ಘೋಷಿಸಲಾಗುವುದು ಎಂದು ತಿಳಿದುಬಂದಿದೆ.
ಬೆಳಗಿನ ಸುದ್ದಿ- ಇತಿಹಾಸ ನಿರ್ಮಾಣದ ತವಕ: ಕರ್ನಾಟಕದ ಮಟ್ಟಿಗೆ ಇಂದೊಂದು ಅಪೂರ್ವ ಇತಿಹಾಸ ನಿರ್ಮಾಣವಾಗಲಿದೆ. ಇದು ಮಹಾಫಲಿತಾಂಶದ ದಿನವಾಗಲಿದೆ. ಬಳ್ಳಾರಿಯ ಸಂಸದೀಯ ಚುನಾವಣೆಯ ಮರು ಮತಎಣಿಕೆ ಇಂದು ನಡೆಯಲಿದ್ದು ಈ ನವ ಇತಿಹಾಸ ನಿರ್ಮಾಣದ ನಾಟಕ ನಡೆದಿದೆ. ಹಾಗೆ ನೋಡಿದರೆ ಇಂತಹ ಅಪಖ್ಯಾತಿಗೆ ಅಂದಿನ ಜಿಲ್ಲಾಡಳಿತ ರಾಜಕೀಯ ಪ್ರಲೋಭೆಗಳಿಗೆ ಮಂಡಿಯೂರಿದ್ದೇ ಕಾರಣ.
ಈಗಾಗಲೇ ಶನಿವಾರ (ಸೆ. 15) ಮತಗಳ ಮರು ಎಣಿಕೆ ಪ್ರಕ್ರಿಯೆ ಜಿಲ್ಲಾಧಿಕಾರಿಯೂ ಆಗಿರುವ ಚುನಾವಣಾಧಿಕಾರಿ ಎ.ಎ. ಬಿಸ್ವಾಸ್ ಉಸ್ತುವಾರಿಯಲ್ಲಿ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬೆಳಗ್ಗೆ 8 ಗಂಟೆಗೆ ಆರಂಭವಾಗಿದೆ.
ಯಾರೇ ಗೆಲ್ಲಲಿ/ಸೋಲಲಿ ಅಂತಿಮ ನಗೆ ಮಾತ್ರ ಖಂಡಿತಾ ಮತದಾರ ಪ್ರಭುವಿನದೇ. ಏನೇ ರಾಜಕೀಯ ಆಮಿಷಗಳ ಮೇಲಾಟ ನಡೆದಿದ್ದರೂ ಅಂದು (2009ರ ಎಪ್ರಿಲ್ 23) ತಾವು ನೀಡಿದ್ದ ತೀರ್ಪೇ ಅಂತಿಮವಾಗಲಿದೆ ಎಂಬ ಹೆಮ್ಮೆ ಇಲ್ಲಿನ ಮತದಾರನದ್ದಾಗಿದೆ.
ಆದರೆ ಮೂರು ವರ್ಷಗಳ ಹಿಂದೆಯೇ ತಾನು ತೀರ್ಪು ನೀಡಿದ್ದರೂ ಅನರ್ಹ ವ್ಯಕ್ತಿ ಸುಖಾಸುಮ್ಮನೆ ಆಡಳಿತ ನಡೆಸಿದರು ಎಂಬ ವಿಷಾದ ಮತದಾರನಿಗೆ ಆಗುತ್ತದೋ ಅಥವಾ ಶ್ರೀರಾಮುಲು ಅವರ ಸೋದರಿ ಶಾಂತಾ ಅವರೇ ಹಾಲಿ ಸಂಸದೆ ಇನ್ನು ಧೈರ್ಯವಾಗಿ ಮುಂದುವರಿಯಲಿದ್ದಾರೋ ಎಂಬುದು ಬಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಗಮನಿಸಿ: ಕಣದಲ್ಲಿ ಕಾಂಗ್ರೆಸ್ (ಎನ್.ವೈ. ಹನುಮಂತಪ್ಪ) ಮತ್ತು ಬಿಜೆಪಿ (ಜೆ. ಶಾಂತ) ಅವರ ಹೊರತಾಗಿ ಇನ್ನೂ ಕೆಲವು ಅಭ್ಯರ್ಥಿಗಳೂ ಇದ್ದಾರೆ. ಟಿ ನಾಗೇಂದ್ರ (ಬಿಎಸ್ಪಿ), ಚೌಡಪ್ಪ(ಸಿಪಿಐಎಂಎಲ್), ಡಿ. ಗಂಗಣ್ಣ ರಾಂಪುರ, ಬಿ. ರಾಮಯ್ಯ ಹಾಗು ರಾಮಾಂಜಿನಪ್ಪ(ಪಕ್ಷೇತರರು).
ಏನಿದು ತಕರಾರು: 2009ರ ಎಪ್ರಿಲ್ 23ರಂದು ಬಳ್ಳಾರಿ ಲೋಕಸಭಾ ಚುನಾವಣೆಗೆ ಮತದಾನ ನಡೆದಿದ್ದು, 2009ರ ಮೇ 16ರಂದು ಮತ ಎಣಿಕೆ ಕಾರ್ಯ ನಡೆದಿದ್ದು, ಬಿಜೆಪಿ ಅಭ್ಯರ್ಥಿ ಜೆ. ಶಾಂತಾ ಜಯಗಳಿಸಿದ್ದಾರೆಂದು ಅಂದಿನ ಜಿಲ್ಲಾಧಿಕಾರಿ ಬಿ ಶಿವಪ್ಪ ಪ್ರಕಟಿಸಿದ್ದರು. ಆದರೆ, ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಚಂದ್ರೇಗೌಡ ಮತ್ತಿತರು ಹೈಕೋರ್ಟ್ನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆಗೆ ನಡೆಸಿದ ನ್ಯಾಯಾಲಯ ಸಂಸದೆ ಜೆ.ಶಾಂತಾ ಅವರನ್ನು ಅನರ್ಹಗೊಳಿಸಿ ಮತಗಳ ಮರು ಎಣಿಕೆಗೆ ಆದೇಶ ಮಾಡಿತ್ತು. ಈ ಮಧ್ಯೆ ಸಂಸದೆ ಜೆ. ಶಾಂತಾ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಜೆ.ಶಾಂತಾ ಮನವಿಯನ್ನು ತಿರಸ್ಕರಿಸಿ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿತ್ತು. ಆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಸೆ. 15ರಂದು ಮರು ಎಣಿಕೆ ನಡೆಸಲು ಬಳ್ಳಾರಿ ಜಿಲ್ಲಾಡಳಿತಕ್ಕೆ ಸೂಚಿಸಿತ್ತು.