ವಿಧಾನಸೌಧ ಮೇಲೆ ಬಿತ್ತು ಪೊಲೀಸರ 80 ಕಣ್ಣು
ಬೆಂಗಳೂರು, ಜುಲೈ 13: ಹೊಸ ರಾಜಕಳೆ ಹೊತ್ತಿರುವ ಶಕ್ತಿಕೇಂದ್ರ ವಿಧಾನಸೌಧಕ್ಕೆ ಮಾಟ ಮಂತ್ರ, ಭಯೋತ್ಪಾದಕ ದಾಳಿ ಭೀತಿ ಹೆಚ್ಚಾಗಿದೆಯಾ? ಹಾಗೇನೂ ಆತಂಕದ ವಾತಾವರಣವಿಲ್ಲ. ರಾಜಕೀಯವಾಗಿಯೂ ವಿಧಾನಸೌಧ ಆವರಣದಲ್ಲಿ ಶಾಂತಿ, ಸೌಹಾರ್ಧತೆ ನೆಲೆಸಿದೆ.
ಆದರೂ ಅನಗತ್ಯವಾಗಿ ದಾರೀಲಿ ಹೋಗೋ ಮಾರಿಗೆ ಅವಕಾಶ ನೀಡುವುದು ಬೇಡವೆಂದು ನಗರದ ಪೊಲೀಸರು ಮುಂಜಾಗರೂಕತೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ವಿಧಾನಸೌಧ ಮತ್ತು ಸುತ್ತಮುತ್ತಲ ಆವರಣದ ಮೇಲೆ ಹದ್ದಿನಕಣ್ಣಿಡಲು ನಿಶ್ಚಯಿಸಿರುವ ಪೊಲೀಸರು ಅಲ್ಲಲ್ಲಿ ರಹಸ್ಯವಾಗಿ 80 CCTV ಕ್ಯಾಮರಾಗಳನ್ನು ತೂಗುಹಾಕಿದ್ದಾರೆ.
ಪೊಲೀಸ್ ಸಿಬ್ಬಂದಿ ಇಡೀ ದಿನರಾತ್ರಿ ಈ ಕ್ಯಾಮರಾಗಳು ರವಾನಿಸುವ ದೃಶ್ಯಗಳ ಮೇಲೆ ಕಣ್ಣು ನೆಟ್ಟಿರುತ್ತಾರಂತೆ ಹುಷಾರು. ಸುಮ್ಮನೆ ಹಾಗೇ ಜ್ಞಾಪಿಸಿಕೊಳ್ಳುವುದಾದರೆ ವಿಧಾನಸೌಧದ ಒಳಗಿರುವ ಮಹತ್ವದ ಕುರ್ಚಿಯ ಮೇಲೆ ಕಣ್ಣಿಟ್ಟು ಈ ಹಿಂದೆ ಕೆಲ ಕಿಡಿಕೇಡಿಗಳು ಮಾಟಮಂತ್ರ ಮಾಡಿಸಿದ್ದರು. ಮೊನ್ನೆಮೊನ್ನೆಯೂ ಸದಾನಂದರು ಅಧಿಕಾರದ ಕುರ್ಚಿಯಿಂದ ಕೆಳಗಿಳಿಯುವ ಮುನ್ನ ನಿಂಬೆಹಣ್ಣು, ಅರಣಿಸನ ಕುಂಕುಮ, ಉಗುರುಗಳು, ಮಾಟದ ಯಂತ್ರವೊಂದು ಕಂಡುಬಂದಿತ್ತು.
ಇದರಿಂದ ಬೆಚ್ಚಿಬಿದ್ದಿರುವ ಬೆಂಗಲೂರು ಪೊಲೀಸ್ ಯಾವುದೇ chance ತೆಗೆದುಕೊಳ್ಳುವುದು ಬೇಡ. ಹೇಗೂ ತಂತ್ರಜ್ಞಾನ ನಮ್ಮೆದುರಿಗಿರುವಾಗ ಅದನ್ನು ಬಳಸಿಕೊಳ್ಳುವುದೇ ಜಾಣತನ ಎಂದು ಬಗೆದ ಪೊಲೀಸರು CCTV ಕ್ಯಾಮರಾಗಳಿಗೆ ಜೋತುಬಿದ್ದಿದ್ದಾರೆ. ಈ CCTV ಕ್ಯಾಮರಾಗಳೂ ಏನು ಕಡಿಮೆಯಿಲ್ಲ. ಅಪರಾಧಿಗಳನ್ನು ಅಂಜನ ಹಾಕಿ ಹುಡುಕುವಂತೆ ಹುಡುಕಿಬಿಡುತ್ತವೆ.
ಕಳೆದೊಂದು ವರ್ಷದಲ್ಲಿ ಅತಿ ಹೆಚ್ಚು ಭದ್ರತಾ ವಲಯದಲ್ಲಿರುವ ರಾಜಭವನ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರುಗಳ ಮನೆ ಮುಂಭಾಗದಲ್ಲೂ ಇಂತಹ ಮಾಟಮಂತ್ರದ ಕುರುಹುಗಳು ಕಂಡುಬಂದಿದ್ದವು.
ಇಷ್ಟಾಗಿ ಇಂತಹ ಭದ್ರತಾ ವಲಯಗಳಲ್ಲೂ ಅದ್ಹೇಗೆ ಈ ಪೂಜೆಪುನಸ್ಕಾರದ ಪರಿಕರಗಳು ಪ್ರವೇಶಿಸುತ್ತವೆ ಎಂಬುದು ಪೊಲೀಸರಿಗೂ ಯಕ್ಷ ಪ್ರಶ್ನೆಯೇ. ಅದಕ್ಕೇಯಾ ಸೀದಾ CCTV ಕ್ಯಾಮರಾಗಳ ಮೊರೆಹೋಗಿದ್ದಾರೆ.
'ಕಾರಿಡಾರ್, ಉದ್ಯಾನವನ, ಪಾರ್ಕಿಂಗ್ ಜಾಗಗಳು, ಮುಂದಿನ ಮತ್ತು ಹಿಂದಿನ ಗೇಟುಗಳ ಸಮೀಪ ಸೂಕ್ಷ್ಮವಾಗಿ ಗಮನಿಸಿದರೆ ನಿಮ್ಮನ್ನೇ ದಿಟ್ಟಿಸಿ ನೋಡುತ್ತಿರುವ ಇಂತಹ 80 CCTV ಕ್ಯಾಮರಾಗಳು ಕಣ್ಣಿಗೆ ಬಿದ್ದಾವು' ಎಂದು ವಿಧಾನಸೌಧ ಭದ್ರತೆಯ ಹೊಣೆಹೊತ್ತಿರುವ ಉಪ ಪೊಲೀಸ್ ಆಯುಕ್ತ ಲಕ್ಷ್ಮಣ ಸಿಂಗ್ ಹೇಳಿದ್ದಾರೆ. ಅಷ್ಟೇ ಅಲ್ಲ. ವಿಧಾನಸೌಧದ ಪ್ರವೇಶದ್ವಾರ ಮತ್ತು ನಿರ್ಗಮನ ದ್ವಾರದಲ್ಲಿ ವಾಹನ ಪರಿಶೀಲನಾ ಸಾಧನಗಳನ್ನೂ ಅಳವಡಿಸಲಾಗಿದೆ.