ಭವಿಷ್ಯ : ಡಿಸೆಂಬರ್ನಲ್ಲಿ ಚುನಾವಣೆ, ಬಿಜೆಪಿ ಧೂಳಿಪಟ!
13ನೇ ವಿಧಾನಸಭೆ ಚುನಾವಣೆ ನಡೆದ ನಂತರ ಕರ್ನಾಟಕ ಐದು ವರ್ಷಗಳಲ್ಲಿ ಮೂರು ಮುಖ್ಯಮಂತ್ರಿಗಳನ್ನು ಕಂಡಿದೆ. ಇನ್ನು ಉಳಿದಿರುವ 9 ತಿಂಗಳಲ್ಲಿ ಇನ್ನೂ ಎಷ್ಟು ಮುಖ್ಯಮಂತ್ರಿಗಳನ್ನು ನೋಡಲಿದೆಯೋ ಬಲ್ಲವರಾರು? ಒಂಬತ್ತು ತಿಂಗಳು ಅಧಿಕಾರ ನಡೆಸುವುದು ದೂರದ ಮಾತಾಯಿತು, ಶೆಟ್ಟರ್ ಪ್ರಮಾಣವಚನ ಸ್ವೀಕರಿಸಿದ ಕ್ಷಣದಿಂದಲೇ ಭಿನ್ನಮತ ಭುಗಿಲೆದ್ದಿದೆ.
ಈಗೇನೋ ಜಾತಿ ಲೆಕ್ಕಾಚಾರದ ಮೇಲೆ ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿದೆ. ಆದರೆ, ಈ ಜಾತಿ ಲೆಕ್ಕಾಚಾರ ಎಷ್ಟು ದಿನ ನಡೆಯುತ್ತದೆ ಎಂದು ಆ ಹಿರಿಯ ನಾಯಕರು ಪ್ರಶ್ನಿಸಿದ್ದಾರೆ. ಜನ ಬಿಜೆಪಿಗೆ ಬಹುಮತ ನೀಡಿದಾಗ ಜಾತಿ ಆಧರಿಸಿ ಮತ ಚಲಾವಣೆ ಮಾಡಿರಲಿಲ್ಲ. ಈ ಜಾತಿ ರಾಜಕಾರಣ ಹೀಗೇ ಮುಂದುವರಿದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜನ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಇದು ನಿಜವೂ ಹೌದು, 2008ರಲ್ಲಿ ಬಿಜೆಪಿಯನ್ನು ದಕ್ಷಿಣ ಭಾರತದಲ್ಲಿ ಜನರು ಪ್ರಪ್ರಥಮ ಬಾರಿಗೆ ಅಧಿಕಾರಕ್ಕೆ ತಂದಾಗ, ಉಳಿದ ರಾಜಕೀಯ ಪಕ್ಷಗಳ ಬಗ್ಗೆ ರೋಸಿ ಹೋಗಿದ್ದರು. ಹೀಗಾಗಿ ಯಡಿಯೂರಪ್ಪನವರ ನಾಯಕತ್ವದಲ್ಲಿ ಭಾರತೀಯ ಜನತಾ ಪಕ್ಷ ಉತ್ತಮ ಆಡಳಿತ ನೀಡುತ್ತದೆ ಎಂಬ ವಿಶ್ವಾಸದಿಂದ ಬಹುಮತ ನೀಡಿ ಜನರು ಗೆಲ್ಲಿಸಿಕೊಟ್ಟಿದ್ದರು. ಆದರೆ, ಮುಂದಿನ ನಾಲ್ಕು ವರ್ಷಗಳಲ್ಲಿ ಏನಾಗಿದೆ ಎಂದು ಜನರೇ ನೋಡಿದ್ದಾರೆ.
ಯಡಿಯೂರಪ್ಪನವರು ಅಧಿಕಾರದ ಚುಕ್ಕಾಣಿ ಹಿಡಿದ ಎರಡು ವರ್ಷಗಳಲ್ಲಿ ಅರ್ಧ ಡಜನ್ ಗಟ್ಟಲೆ ಅಡೆತಡೆಗಳನ್ನು ಎದುರಿಸಬೇಕಾಯಿತು, ಡಜನ್ ಗಟ್ಟಲೆ ಕಾನೂನು ಪ್ರಕರಣಗಳನ್ನು ಎದುರಿಸಬೇಕಾಯಿತು. ಅವರು ಅಕ್ರಮ ಗಣಿಗಾರಿಕೆಯಲ್ಲಿ ಆರೋಪ ಎದುರಿಸಿದಾಗ ರಾಮಾಯಣವೇ ನಡೆದು 2011ರ ಆಗಸ್ಟ್ ನಲ್ಲಿ ಸದಾನಂದ ಗೌಡರಿಗೆ ಅಧಿಕಾರ ಬಿಟ್ಟುಕೊಡಬೇಕಾಯಿತು. ಅವರು ರಾಜ್ಯವನ್ನು ಆಳಿದ್ದು 11 ತಿಂಗಳು ಮಾತ್ರ.
ಕೊನೆಗೆ ಬಿಜೆಪಿಯೇ ಎರಡು ಹೋಳಾಗಿ ಯಡಿಯೂರಪ್ಪ ಮತ್ತು ಸದಾನಂದ ಗೌಡರ ನೇತೃತ್ವದಲ್ಲಿ ಎರಡು ಹೋಳಾಗಿದೆ, ಲಿಂಗಾಯತ ಮತ್ತು ಒಕ್ಕಲಿಗರ ನಡುವೆ ರಾಜಕೀಯ ಯುದ್ಧವೇ ಶುರುವಾಗಿದೆ. ಮೇಲ್ನೋಟಕ್ಕೆ ಎಲ್ಲವೂ ಬಗೆಹರಿದಿದೆ ಎಂದು ದೆಹಲಿಗೆ ತೆರಳಿರುವ ಬಿಜೆಪಿ ಹೈಕಮಾಂಡ್ಗೆ ಮತ್ತಷ್ಟು ತಲೆನೋವುಗಳು ರವಾನೆಯಾದರೂ ಆಶ್ಚರ್ಯವಿಲ್ಲ. ಸದ್ಯಕ್ಕೆ ಅಂತಹ ತಲೆನೋವಿಗೆ ಯಾವ ಮಾತ್ರೆಯೂ ಬಿಜೆಪಿ ಹೈಕಮಾಂಡ್ ಬಳಿಯಿಲ್ಲ.
ಪರಿಸ್ಥಿತಿ ಹೀಗಿರುವಾಗ, ಬಿಜೆಪಿಯ ಹಿರಿಯ ನಾಯಕರು ಸಿಡಿಸಿರುವ ಸಣ್ಣ ಪ್ರಮಾಣದ ಬಾಂಬ್ ಬಿಜೆಪಿ ನಾಯಕರನ್ನು ಎಚ್ಚೆತ್ತುವಂತೆ ಮಾಡುತ್ತದಾ? ಅಥವಾ ತಾವು ಆಡಿದ್ದೇ ಆಟ ಎಂದು ತನ್ನ ಹಳೆಯ ಚಾಳಿಯನ್ನು ಮುಂದುವರಿಸುತ್ತದಾ? ಮುಂದಿನ 9 ತಿಂಗಳಲ್ಲಿ ಉತ್ತಮ ಆಡಳಿತ ನೀಡಲು ಬಿಜೆಪಿ ವಿಫಲವಾದರೆ, ಬಿಜೆಪಿಯ ಭವಿಷ್ಯವನ್ನು ಯಾವ ಜ್ಯೋತಿಷಿಯೂ ನುಡಿಯಬೇಕಾಗಿಲ್ಲ, ಜನರೇ ನುಡಿಯಲಿದ್ದಾರೆ.