ಜಗದೀಶರ ಸಚಿವ ಸಂಪುಟದಲ್ಲಿ 11 ಲಿಂಗಾಯತರು
ಬೆಂಗಳೂರು, ಜು.12: ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಹೊಸ ಸಚಿವ ಸಂಪುಟದಲ್ಲಿ ಜಾತಿವಾರು ಪ್ರಾತಿನಿಧ್ಯದಲ್ಲಿ ಲಿಂಗಾಯತರು ಮೇಲುಗೈ ಸಾಧಿಸಿದ್ದಾರೆ. ಏಕೈಕ ಮಹಿಳಾ ಪ್ರತಿನಿಧಿಯಾಗಿ ಶೋಭಾ ಕರಂದ್ಲಾಜೆ ಅವರು ಸಂಪುಟ ಸೇರಿದ್ದಾರೆ. ಅಲ್ಪ ಸಂಖ್ಯಾತರಿಗೆ ಸ್ಥಾನ ಕಲ್ಪಿಸಲಾಗಿಲ್ಲ.
ಹಲವು ಸುತ್ತಿನ ಮಾತುಕತೆ, ಹೈಕಮಾಂಡ್ ಜೊತೆ ಚರ್ಚೆ ನಂತರ ಯಡಿಯೂರಪ್ಪ ಬಣ ಹಾಗೂ ಡಿವಿ ಸದಾನಂದ ಗೌಡರ ಬಣಕ್ಕೆ ಹೆಚ್ಚು ಕಮ್ಮಿ ಸಮಾನಾಂತರ ಗೌರವ ನೀಡಲಾಗಿದೆ. ಪುರ್ಣ ಪ್ರಮಾಣದ ಸಚಿವ ಸಂಪುಟ ರಚನೆಯಾಗಿರುವುದರಿಂದ ಯಾವುದೇ ಸ್ಥಾನ ಖಾಲಿ ಇಲ್ಲ ಎಂಬ ಸಂದೇಶ ರವಾನೆಯಾಗಿದೆ.
ಜಾತಿವಾರು ಲೆಕ್ಕಾಚಾರದಂತೆ ಸಿಎಂ ಪಟ್ಟಕ್ಕೇರಿದ ಜಗದೀಶ್ ಶೆಟ್ಟರ್ ಅವರು, ಒಕ್ಕಲಿಗ ಹಾಗೂ ಕುರುಬ ಜನಾಂಗದ ಪ್ರತಿನಿಧಿಗಳಾಗಿ ಆರ್ ಅಶೋಕ್ ಹಾಗೂ ಕೆಎಸ್ ಈಶ್ವರಪ್ಪ ಅವರನ್ನು ಡಿಸಿಎಂ ಆಗಿ ಮಾಡಲಾಗಿದೆ.
ಜಾತಿ ಲೆಕ್ಕ: ಆದರೆ, ಎಲ್ಲಾ ವರ್ಗಕ್ಕೂ ಸಾಮಾಜಿಕ ಅವಕಾಶ ನೀಡುವಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ. ಲಿಂಗಾಯತ 11, ಒಕ್ಕಲಿಗ 7, ಬ್ರಾಹ್ಮಣ 3, ದಲಿತ 7 ಹಾಗೂ ಹಿಂದುಳಿದ ವರ್ಗಗಳಿಗೆ 6 ಸ್ಥಾನಗಳನ್ನು ನೀಡಲಾಗಿದೆ.
ಬೋವಿ, ಲಂಬಾಣಿ, ಎಡಗೈ ಸಮುದಾಯ ಅವಕಾಶ ಪಡೆದರೆ, ಬಲಗೈ ಪಂಗಡಕ್ಕೆ ಸ್ಥಾನ ಸಿಕ್ಕಿಲ್ಲ, ಮುಸ್ಲಿಂ, ಕ್ರೈಸ್ತ ಅಲ್ಪಸಂಖ್ಯಾತರು ಪಟ್ಟಿಯಲ್ಲೇ ಇರಲಿಲ್ಲ. ಶೇ 33ರಷ್ಟು ಮಹಿಳಾ ಪ್ರಾತಿನಿಧ್ಯವನ್ನು ಬಿಜೆಪಿ ಮರೆತಿದೆ.
ಲಿಂಗಾಯತ: ಜಗದೀಶ್ ಶೆಟ್ಟರ್, ಸಿಎಂ ಉದಾಸಿ, ಉಮೇಶ್ ಕತ್ತಿ, ಬಸವರಾಜ ಬೊಮ್ಮಾಯಿ, ಮುರುಗೇಶ್ ನಿರಾಣಿ, ವಿ ಸೋಮಣ್ಣ, ರೇಣುಕಾಚಾರ್ಯ, ಎಸ್ ಎ ರವೀಂದ್ರನಾಥ್, ಎಸ್ ಕೆ ಬೆಳ್ಳುಬ್ಬಿ, ಸೊಗಡು ಶಿವಣ್ಣ ಹಾಗೂ ಕಳಕಪ್ಪ ಬಂಡಿ
ಒಕ್ಕಲಿಗ: ಆರ್ ಅಶೋಕ್, ಶೋಭಾ ಕರಂದ್ಲಾಜೆ, ಬಿಎನ್ ಬಚ್ಚೇಗೌಡ, ಸಿಪಿ ಯೋಗೇಶ್ವರ್, ಸಿಟಿ ರವಿ, ಜೀವರಾಜ್ ಹಾಗೂ ಅಪ್ಪಚ್ಚು ರಂಜನ್
ಬ್ರಾಹ್ಮಣ: ಸುರೇಶ್ ಕುಮಾರ್, ವಿಶ್ವೇಶ್ವರ ಹೆಗಡೆ ಕಾಗೇರಿ, ಎಸ್ ಎ ರಾಮದಾಸ್
ದಲಿತ: ಗೋವಿಂದ ಕಾರಜೋಳ(ಎಡಗೈ) ನಾರಾಯಣ ಸ್ವಾಮಿ(ಎಡಗೈ), ಬಾಲಚಂದ್ರ ಜಾರಕಿಹೊಳಿ(ನಾಯಕ), ರೇವೂನಾಯಕ ಬೆಳಮಗಿ(ಲಂಬಾಣಿ) ರಾಜೂಗೌಡ(ನಾಯಕ), ಅರವಿಂದ ಲಿಂಬಾವಳಿ(ಬೋವಿ)ಹಾಗೂ ಸುನೀಲ್ ವಲ್ಯಾಪುರೆ(ಬೋವಿ)
ಹಿಂದುಳಿದ ವರ್ಗ: ಕೆಎಸ್ ಈಶ್ವರಪ್ಪ(ಕುರುಬ), ವರ್ತೂರು ಪ್ರಕಾಶ್ (ಕುರುಬ), ಆನಂದ್ ಆಸ್ನೋಟಿಕರ್ (ದೇವಳಿ), ಬಿಜಿ ಪುಟ್ಟಸ್ವಾಮಿ(ಗಾಣಿಗ), ಕೋಟ ಶ್ರೀನಿವಾಸ ಪೂಜಾರಿ(ಬಿಲ್ಲವ), ಆನಂದ್ ಸಿಂಗ್ (ರಜಪುತ)