ಯಡಿಯೂರಪ್ಪ ಬೆಂಬಲಿಗರನ್ನು ಉಚ್ಚಾಟಿಸಿ
ಯಡಿಯೂರಪ್ಪ ಬಣದ ಶಾಸಕರು ಪಾಯಸದಲ್ಲಿ ಪಾದರಕ್ಷೆ ಪ್ರಯೋಗಿಸುವ ಕೆಲಸ ಮಾಡುತ್ತಿದ್ದಾರೆ ಮುಖ್ಯಮಂತ್ರಿ ಡಿವಿ ಸದಾನಂದಗೌಡ ಹಸನ್ಮುಖಿಯಾಗಿ ಅತ್ಯುತ್ತಮ ಕಾರ್ಯನಿರ್ವಹಿಸುತ್ತಿದ್ದಾರೆ. ಉತ್ತಮ ಅಭಿವೃದ್ದಿ ಕೆಲಸ ಮಾಡುತ್ತಿದ್ದು, ಈ ಸಂದರ್ಭದಲ್ಲಿ ಅವರನ್ನು ಪದಚ್ಯುತಿಗೊಳಿಸಲು ನಡೆಸುತ್ತಿರುವ ಯತ್ನಕ್ಕೆ ಹೈಕಮಾಂಡ್ ಸೊಪ್ಪು ಹಾಕಬಾರದು ಎಂದು ಕಿಡಿಕಾರಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬೆಂಬಲಿಗರು ಅನಗತ್ಯವಾಗಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸದಾನಂಗೌಡರನ್ನು ಅಧಿಕಾರದಿಂದ ಕೆಳಗಿಳಿಸುವ ಯತ್ನ ಮಾಡುತ್ತಿರುವ ಕೆಲವರು ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಯಾವ ಶಾಸಕನಿಗೂ ಚುನಾವಣೆ ಎದುರಿಸುವ ತಾಕತ್ತಿಲ್ಲ. ಅನಗತ್ಯವಾಗಿ ಬೆದರಿಕೆ ಹಾಕುವ ತಂತ್ರದಲ್ಲಿ ತೊಡಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸದಾನಂದಗೌಡರು ಒಕ್ಕಲಿಗ ಸಮುದಾಯದ ನಾಯಕರು. ಅವರನ್ನು ಕುರ್ಚಿಯಿಂದ ಕೆಳಗಿಳಿಸುವ ಪ್ರಯತ್ನಕ್ಕೆ ಯಾರೂ ಕೈಹಾಕಬಾರದು. ಆದರೆ ಸರ್ಕಾರವನ್ನು ಮುಜುಗರಕ್ಕೀಡು ಮಾಡುವ ಕೆಲಸದಲ್ಲಿ ಬಿಜೆಪಿಯ ಕೆಲವು ಶಾಸಕರು ನಿರತರಾಗಿರುವುದು ನಿಜಕ್ಕೂ ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕಾಂಗ ಸಭೆ ಅಗತ್ಯವಿಲ್ಲ: ಲರಾಜ್ಯದಲ್ಲಿ ಅಭಿವೃದ್ದಿ ಕೆಲಸಗಳು ನಿರಂತರವಾಗಿ ನಿರಾತಂಕವಾಗಿ ನಡೆದುಕೊಂಡು ಹೋಗುತ್ತಿವೆ. ಈ ಸಂದರ್ಭದಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆಯುವ ಅಗತ್ಯವಿಲ್ಲ. ಬಿಜೆಪಿಯ ಕೆಲವು ಶಾಸಕರು ಶಾಸಕಾಂಗ ಸಭೆಗೆ ಒತ್ತಾಯಿಸುತ್ತಿರುವುದರಲ್ಲಿ ಅರ್ಥವೇ ಇಲ್ಲ ಎಂದರು.
ಮುಖ್ಯಮಂತ್ರಿಗಳ ವಿರುದ್ದವೇ ಬಹಿರಂಗ ಹೇಳಿಕೆ ನೀಡುವ ಮೂಲಕ ಪಕ್ಷ ಹಾಗೂ ಸರ್ಕಾರಕ್ಕೆ ದ್ರೋಹ ಬಗೆಯುವ ಕೆಲಸ ಮಾಡುತ್ತಿದ್ದಾರೆ. ಇಂತಹ ಚಟವಟಿಕೆಗಳನ್ನು ಬಿಜೆಪಿ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿ, ಪಕ್ಷ ವಿರೋಧಿಗಳನ್ನು ಮುಲಾಜಿಲ್ಲದೆ ಉಚ್ಚಾಟಿಸುವಂತೆ ಆಗ್ರಹಿಸಿದರು.
ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ. ಮುಖ್ಯಮಂತ್ರಿಗಳು ಅಧಿಕಾರಿಗಳ ಜತೆ ಸಮನ್ವಯತೆಯಿಂದ ಪರಿಹಾರ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಕೈಗೊಂಡಿದ್ದಾರೆ. ಇದಕ್ಕೆ ಸರ್ಕಾರದಲ್ಲಿರುವ ಇತರ ಸಚಿವರು ಸಹಕಾರ ನೀಡಬೇಕಿತ್ತು. ಆದರೆ, ಭಿನ್ನಮತೀಯ ಚಟವಟಿಕೆ ನಡೆಸುವ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೂ ಗೌರವ ನೀಡದೆ ಅನುಚಿತ ಹೇಳಿಕೆಗಳನ್ನು ನೀಡಿ ಹೀನಾಮಾನವಾಗಿ ಟೀಕಿಸುತ್ತಿದ್ದಾರೆ. ಕೆಲವು ಶಾಸಕರ ವರ್ತನೆ ಅಸಹನೀಯ. ಇಂತಹವರನ್ನು ಬೆಂಬಲಿಸುವುದು ಅಪಮಾನ. ಶಾಸಕರ ಈ ರೀತಿಯ ವರ್ತನೆಗಳು ರಾಜ್ಯದ ಜನರಲ್ಲಿ ರಾಜಕೀಯದ ಬಗ್ಗೆ ಅಸಹ್ಯ ಉಂಟು ಮಾಡುತ್ತಿದೆ ಎಂದು ವಿಷಾದಿಸಿದರು.