ಬಂ ಪ್ರಕರಣವೇ ಬೇರೆ; ಬಿಎಸ್ವೈ ಕೇಸೇ ಬೇರೆ
92-93ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್. ಬಂಗಾರಪ್ಪ ವಿರುದ್ಧ ಕ್ಲಾಸಿಕ್ ಕಂಪ್ಯೂಟರ್ ಹಗರಣ ಕೇಳಿ ಬಂದಿತ್ತು. ದೀರ್ಘ ಕಾಲದ ವಿಚಾರಣೆ ನಡೆದು ಕಳೆದ ವರ್ಷವಷ್ಟೇ ಬಂಗಾರಪ್ಪಗೆ ಇದರಿಂದ ಕ್ಲೀನ್ ಚೀಟ್ ಸಿಕ್ಕಿತ್ತು. ಬಂಗಾರಪ್ಪ ನಿರ್ದೋಷಿ ಎಂದು ತೀರ್ಪು ಹೊರ ಬಿತ್ತು. ಅದೇ ರೀತಿ ಯಡಿಯೂರಪ್ಪನವರೂ ನಿರ್ದೋಷಿಯಾಗಿ ಹೊರ ಬರುತ್ತಾರೆ ಎಂಬ ಮಾತುಗಳು ಹಲವೆಡೆ ಕೇಳಿಬಂದಿದೆ.
ಆದರೆ... ಗಣಿ ಲಂಚ ಪ್ರಕರಣದಲ್ಲಿ ತನಿಖೆಯಾಗಲಿ ಎಂದು ಸುಪ್ರೀಂಕೋರ್ಟ್ ಅರಣ್ಯ ಪೀಠದಿಂದ ಕಳೆದ ಶುಕ್ರವಾರ ತೀರ್ಪು ಹೊರಬಿದ್ದಿದ್ದೇ ತಡ, ತನಿಖೆಯ ಹೊಣೆ ಹೊತ್ತ ಸಿಬಿಐ ನಡೆಸುತ್ತಿರುವ ತನಿಖೆಯ ವೇಗ ನೋಡಿದರೆ... ಬಂಗಾರಪ್ಪ ಪ್ರಕರಣವೇ ಬೇರೆ; ಬಿಎಸ್ವೈ ಕೇಸೇ ಬೇರೆ ಎನ್ನುವ ಹಾಗಿದೆ.
ಅಷ್ಟಕ್ಕೂ ಬಂಗಾರಪ್ಪ ಪ್ರಕರಣದ ತನಿಖೆಯ ಕಾಲ ಧರ್ಮವೇ ಬೇರೆ, ಈಗಿನ ಸಿಬಿಐ ಮನೋಧರ್ಮವೇ ಬೇರೆಯಾಗಿದೆ. ಈಗ ನಡೆದಿರುವ ಸಿಬಿಐ ತನಿಖೆ ಸುಪ್ರೀಂಕೋರ್ಟಿನ ಆದೇಶದಡಿ ಅದರ ಮೂಗಿನಡಿ ನಡೆಯುತ್ತಿದೆ ಎಂಬುದು ಗಮನಾರ್ಹ. ಬಂ ಪ್ರಕರಣದಲ್ಲಿ ಸ್ವತಃ ಸರಕಾರವೇ ಸಿಬಿಐ ತನಿಖೆಗೆ ನೀಡಿತ್ತು. ಆದರೆ ಯಡಿಯೂರಪ್ಪ ಭ್ರಷ್ಟಾಚಾರದ ತನಿಖೆ ನಡೆಯುತ್ತಿರುವುದು ರಾಜ್ಯ ಸರಕಾರದ ಸೂಚನೆಯಂತೆ ಅಲ್ಲ; ಬದಲಿಗೆ ಖುದ್ದು ಸುಪ್ರೀಂಕೋರ್ಟಿನ ಕಟ್ಟುನಿಟ್ಟಿನ ಆದೇಶದಂತೆ ಎಂಬುದು ದಾಖಲಾರ್ಹ.
ತನಿಖೆ ಆದೇಶಿಸುವಾಗ ಸುಪ್ರೀಂಕೋರ್ಟಿನ observatins ನೋಡಿದಾಗ ಯಡಿಯೂರಪ್ಪ ಪ್ರಕರಣದಿಂದ ಬಚಾವಾದರೆ ಅದು ಪವಾಡವೇ ಸರಿ ಎಂಬಂತಾಗಿದೆ. ಬಂ ಪ್ರಕರಣದಲ್ಲಿ ಕೋರ್ಟ್ ನಿರ್ದೇಶನ ಇರಲಿಲ್ಲ. ಇದ್ದರೂ ಅದು ಸೀಮಿತಾವಗಿತ್ತು. ಜತೆಗೆ ಭ್ರಷ್ಟಾಚಾರದ ಬಗ್ಗೆ ಈ ಪಾಟಿ ವ್ಯಾಪಕ ವಿರೋಧ ವ್ಯಕ್ತವಾಗಿರಲಿಲ್ಲ. ಈ ಹಿಂದೆ ಎಲ್ಲವೂ ಗಪ್ ಚುಪ್ ಆಗಿ, ಗುಪ್ತ್ ಗಪ್ತ್ ಆಗಿ ನಡೆದುಹೋಗಿತ್ತು.
ಯಡಿಯೂರಪ್ಪನವರಿಗೆ ಆ ಭಾಗ್ಯವೂ ಇಲ್ಲ: ಈಗ ಪರಿಸ್ಥಿತಿ ಹಾಗಿಲ್ಲ. ಸಿಬಿಐ ಎದುರಿಗೆ ಸುಪ್ರೀಂ ಆದೇಶವಿದೆ. ಕೋರ್ಟ್ ಸೂಚನೆಯನ್ನು ಮೀರಿ ಸಿಬಿಐ ತನಿಖೆಯನ್ನು ನಿರ್ಲಕ್ಷಿಸುತ್ತದೆ ಎನ್ನುವ ಹಾಗಿಲ್ಲ. ಏಕೆಂದರೆ ತನಿಖೆಯ ಪ್ರತಿ ಕಾಲಘಟ್ಟದಲ್ಲೂ ಸಿಬಿಐಗೆ ಸುಪ್ರೀಂಕೋರ್ಟಿನ ಸಲಹೆ, ಸೂಚನೆ, ಆದೇಶಗಳು ಜಾರಿಯಲ್ಲಿರುತ್ತವೆ.
ಎಲ್ಲಕ್ಕಿಂತ ಮುಖ್ಯವಾಗಿ ಬಂ ಪ್ರಕರಣದಲ್ಲಿ ಮೇಲ್ಮನವಿಗಳ ಮೇಲೆ ಮೇಲ್ಮನವಿಗಳು ದಾಖಲಾಗುತ್ತಿದ್ದವು. ಆದರೆ ಯಡಿಯೂರಪ್ಪನವರಿಗೆ ಆ ಭಾಗ್ಯವೂ ಇಲ್ಲವಾಗಿದೆ. ಏಕೆಂದರೆ ಖುದ್ದು ಸುಪ್ರೀಂಕೋರ್ಟೇ ಪ್ರಕರಣವನ್ನು ತನಿಖೆಗೆ ಒಪ್ಪಿಸಿರುವಾಗ ಯಡಿಯೂರಪ್ಪನವರಿಗೆ ಮೇಲ್ಮನವಿಗೆ ಅವಕಾಶ ಎಲ್ಲಿಯದು?
ಅದೂ ದೇಶದ ಮೊದಲ ನ್ಯಾಯಮೂರ್ತಿ ಕಪಾಡಿಯಾ ಅವರೇ ನ್ಯಾಯಪೀಠದ ನೇತೃತ್ವ ವಹಿಸಿರುವಾಗ ಸನ್ಮಾನ್ಯ ಯಡಿಯೂರಪ್ಪನವರು ಯಾರ ವಿರುದ್ಧ ಮೇಲ್ಮನವಿ ಸಲ್ಲಿಸುತ್ತಾರೆ? ಇನ್ನು, appeal ಹೋದರೂ ಪೂರ್ಣ ಪೀಠಕ್ಕೆ ಅಥವಾ ಅದೇ ಪೀಠಕ್ಕೆ ಮತ್ತೊಮ್ಮೆ ಮೊರೆ ಹೋಗಬಹುದು.
ಆದರೆ ಆ ವೇಳೆಗಾಗಲೇ ಪ್ರಕರಣದಲ್ಲಿ ಆರೋಪಿಗಳ ಅಪರಾಧ ಜಗಜ್ಜಾಹೀರಾಗಿರುತ್ತದೆ. ಏಕೆಂದರೆ ಇಲ್ಲಿ media trial ಸಹ ಮುಖ್ಯ ಪಾತ್ರವಹಿಸಿರುತ್ತದೆ. ಕೇಸಿನ ಪ್ರತಿ ಹಂತವನ್ನೂ media ದಾಖಲಿಸುತ್ತಾ, ಜನತೆಯ ಮುಂದಿಡುತ್ತಾ ಇರುತ್ತದೆ. ಅಲ್ಲಿಗೆ ಯಡಿಯೂರಪ್ಪ ಅವರ ಕೇಸ್ ...ನಿಮ್ಮ ತೀರ್ಮಾನಕ್ಕೆ ಬಿಟ್ಟಿದ್ದು!