ಬರ: ಗೃಹ ಸಚಿವ ಅಶೋಕ್ ಆದೇಶ ಏನು?
'ಮುಂದಿನ ಮೂರು ತಿಂಗಳು ರಜೆ ತೆಗೆದುಕೊಳ್ಳಬೇಡಿ. ಎಲ್ಲ ಅಧಿಕಾರಿಗಳೂ ಮನೆ, ಮಠ ಬಿಟ್ಟು ಕಾರ್ಯನಿರ್ವಹಿಸಬೇಕು. ಸಂತ್ರಸ್ತರ ಯಾವುದೇ ಕುಂದು ಕೊರತೆಗೆ ದಿನ 24 ಗಂಟೆಯೂ ಸ್ವಂದಿಸುವಂತಿರಬೇಕು. ಇಲ್ಲದಿದ್ದರೆ ಅಂಥವರ ವಿರುದ್ಧ ಕಠಿಣ ಕ್ರಮ ಜರಗಿಸಲಾಗುವುದು. ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ' ಎಂದು ಆಶೋಕ್ ಎಚ್ಚರಿಕೆ ನೀಡಿದ್ದಾರೆ.
ಟ್ಯಾಂಕರ್ ಮೂಲಕ ನೀರು: 'ರಾಜ್ಯದ ಬರಗಾಲ ಪರಸ್ಥಿತಿಯ ಕಾಮಗಾರಿಗಳ ಪರಿಶೀಲನೆ ನಿಮಿತ್ತ ಜಿಲ್ಲೆಯಲ್ಲಿ ಮುಳಬಾಗಿಲುನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕೋಲಾರ ಜಿಲ್ಲೆಗೆ 19 ಕೋಟಿ ರೂ. ಬಿಡುಗಡೆಯಾಗಿದ್ದು, ಇದರಲ್ಲಿ 14 ಕೋಟಿ ರೂ. ಖರ್ಚಾಗಿದ್ದು, ಉಳಿದಿದ್ದ 5 ಕೋಟಿ ರೂ. ಖರ್ಚು ಮಾಡಬೇಕಾಗಿದೆ' ಎಂದರು.
'ನೀರನ್ನೇ ಕಾಣದ ಬರಗೆಟ್ಟ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ಇದೆ. ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಬಗ್ಗೆ ಗಂಭೀರ ಕ್ರಮಕೈಗೊಳ್ಳಲಾಗಿದೆ. ಆದರೆ ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ನೀಡುತ್ತಿರುವ 325 ರೂ ಅನುದಾನ ಸಾಕಾಗುವುದಿಲ್ಲ' ಎಂದು ತಾ.ಪಂ. ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.
ಬರ ಪರಿಹಾರ ಪರಸ್ಥಿತಿಯ ಕಾಮಗಾರಿಗಳ ಪರಿಶೀಲನೆ ಸರಕಾರದಿಂದ ತಂಡೋಪ ತಂಡಗಳಾಗಿ ವೀಕ್ಷಿಸಿದ ಸಚಿವರ ತಂಡ, ಅತ್ತಿಕುಂಟೆ, ಮುಡಿಯ ನೂರು ಬಲ್ಲ ಗ್ರಾಮಗಳಲ್ಲಿ ಸಂಚರಿಸಿ ಬರ ಪರಿಸ್ಥಿತಿಯನ್ನು ವೀಕ್ಷಿಸಿದರು.
ಈ ತಂಡದಲ್ಲಿ ಗೃಹ ಸಚಿವ ಆರ್.ಆಶೋಕ್ ಕಾನೂನು ಸಚಿವ ಸುರೇಶ್ ಕುಮಾರ್, ಕಾರ್ಮಿಕ ಸಚಿವ ಬಚ್ಚೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ವರ್ತೂರು ಪ್ರಕಾಶ್, ಬಂಗಾರಪೇಟೆ ಶಾಸಕ ನಾರಾಯಣ ಸ್ವಾಮಿ, ಜಿಲ್ಲಾಧಿಕಾರಿ ಮನೋಜ್ ಕುಮಾರ್ ಮೀನಾ, ಜಿಲ್ಲಾ ಉಸ್ತುವಾರಿ ಅಧಿಕಾರಿ ಶ್ರೀನಿವಾಸಾಚಾರಿ, ಸಿಇಓ ರಾಜೇಂದ್ರ ಚೋಳನ್, ತಾಲೂಕು ದಂಡಾಧಿಕಾರಿ ಪಿ. ಜಯಮಾಧವ್, ಡಿವೈಎಸ್ಪಿ ಗೋವಿಂದಯ್ಯ, ಟಿ.ಪಿ.ಎಸ್ ಅಧ್ಯಕ್ಷ ಶ್ರೀನಿವಾಸರೆಡ್ಡಿ, ಬಿಜೆಪಿ ಯುವ ಮುಖಂಡ ಪ್ರಸಾದ್ ಮುಂತಾದವರು ಹಾಜರಿದ್ದರು.