ರೋಮ್ ಹೊತ್ತಿ ಉರಿಯುತ್ತಿದ್ದಾಗ ದೊರೆ ನೀರೊ...
ಎಲ್ಲಿಯ ಕರ್ನಾಟಕ, ಎಲ್ಲಿಯ ರೋಮ್? ಎಲ್ಲಿಯ ಸದಾನಂದ ಗೌಡ, ಎಲ್ಲಿಯ ನೀರೊ!? ಆದರೂ... ನೀರೊ ಕುರಿತಾದ ಕುತೂಹಲಕಾರಿ ಇತಿಹಾಸ. ಅದು ಕ್ರಿಸ್ತ ಶಕ 64ರ ಕಾಲಘಟ್ಟ. ಇದೋ 2010ರ ಬರಗೆಟ್ಟ ಕಾಲಘಟ್ಟ.
ರೋಮ್ ಹೊತ್ತಿ ಉರಿಯುತ್ತಿದ್ದಾಗ ರೋಮನ್ ದೊರೆ ನೀರೊ ಪಿಟೀಲು ಬಾರಿಸುತ್ತಿದ್ದರು ಎಂದು ಮಂದಿ ಅಂದಿನಿಂದಲೂ ಕೊರೆಯುತ್ತಿದ್ದಾರೆ. ಆದರೆ ಇದೇ ವಾಸ್ತವವಾ? ಎಂಬುದರ ಬಗ್ಗೆ ಅಂದಿನಿಂದಲೂ ಚರ್ಚೆಗಳಾಗಿವೆ. ಅಂದು ಏನಾಯಿತೆಂದರೆ ಮುಕ್ಕಾಲು ಭಾಗ ರೋಮ್ ಪಟ್ಟಣಕ್ಕೆ ಬೆಂಕಿಬಿದ್ದಿತ್ತು. Circus Maximus ಎಂಬ ಸ್ಟೇಡಿಯಂ ಬಳಿ ಕಾಣಿಸಿಕೊಂಡ ಈ ಬೆಂಕಿ ಆರು ದಿನಗಳ ಕಾಲ ತನ್ನ ಕೆನ್ನಾಲಗೆ ಚಾಚಿತ್ತು.
ಆರು ದಿನಗಳ ನಂತರ ಒಮ್ಮೆ ಬೆಂಕಿಯನ್ನು ನಂದಿಸಲಾಯಿತು. ಆದರೆ ಇನ್ನೂ ಮೂರು ದಿನಗಳ ಕಾಲ ತನ್ನ ಸಂಗೀತಕ್ಕೆ ತಕ್ಕಂತೆ ನರ್ತಿಸುವಂತೆ ನೀರೊ ಕಿಡಿ ಹೊತ್ತಿಸಿದ. ಬಳಿಕ, ಬೆಂಕಿಬಿದ್ದ ಜಾಗದಲ್ಲಿ ಸುಮಾರು 200 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡ ನೀರೊ ಭವ್ಯವಾದ ಸಂಗ್ರಹಾಲಯ ನಿರ್ಮಿಸಿದ ಎನ್ನುತ್ತದೆ ಇತಿಹಾಸ. ಇಲ್ಲಿ ಇನ್ನೂ ಒಂದಷ್ಟು ಉಪಕಥೆಗಳಿವೆ:
ಈ ಬೆಂಕಿ ಅವಘಡಕ್ಕೆ ಜನ ಒಬ್ಬರಿಗೊಬ್ಬರನ್ನು ದೂಷಿಸತೊಡಗಿದರು. ಅನೇಕ ಗಾಳಿಸುದ್ದಿಗಳು ಈ ಬೆಂಕಿಗೆ ಮತ್ತಷ್ಟು ಗಾಳಿ ಹಾಕತೊಡಗಿದವು. ಅತ್ತ ರೋಮ್ ಪಟ್ಟಣ ಹೊತ್ತಿ ಉರಿಯುತ್ತಿದ್ದಾಗ ದೊರೆ ನೀರೊ ಪಿಟೀಲು ಕೊಯ್ಯುತ್ತಿದ್ದ. ಏಕೆಂದರೆ ಆತನಿಗೆ ಸಂಗೀತವೆಂದರೆ ಅಷ್ಟು ಇಷ್ಟವಾಗಿತ್ತು. ಆತ ಜನರ ರಕ್ಷಣೆಗೆ ಧಾವಿಸಲಿಲ್ಲ ಎಂಬುದು ಮುಖ್ಯವಾದ ಆಪಾದನೆ. ಆದರೆ ಇದು ಆಪವಾದವಾ!? ಏಕೆಂದರೆ ಆ ಕಾಲಕ್ಕೆ ಪಿಟೀಲನ್ನು ಕಂಡುಹಿಡಿದೇ ಇರಲಿಲ್ಲ. ಆ ಘಟನೆ ನಡೆದ 1,500 ವರ್ಷಗಳ ಬಳಿಕ ಪಿಟೀಲನ್ನು (fiddle/violin) ಕಂಡುಹಿಡಿಯಲಾಯಿತು ಎನ್ನುತ್ತದೆ ಇತಿಹಾಸ.
ಇಲ್ಲಿ ಗಮನಿಸಬಹುದಾದ ಅಂಶವೆಂದರೆ ರಾಜ್ಯಭಾರ ನಡೆಸುವ ದೊರೆಗಳ ನಿಷ್ಪ್ರಯೋಜಕತನ, ನಿಷ್ಕಾಳಜಿಯನ್ನು ಎತ್ತಿ ತೋರಿಸುವುದಕ್ಕಾಗಿ ಇಂತಹ ಮಾತು ಚಾಲ್ತಿಗೆ ಬಂತು ಎಂಬ ವಾದವೂ ಇದೆ. ಹಾಗಾದರೆ ಈಗಿನ ಕಾಲದಲ್ಲಿ ನಮ್ಮನ್ನಾಳುವ ದೊರೆಗಳು ಇಂತಹ ನೀರೋಗಳೇ ಎಂಬುದರಲ್ಲಿ ಎರಡು ಮಾತಿಲ್ಲ.