ಯಡಿಯೂರಪ್ಪ ನಿಷ್ಠರನ್ನು ಎತ್ತಂಗಡಿ ಮಾಡಿದ ಗೌಡ
ಯಡಿಯೂರಪ್ಪ ಅವರ ಸಹೋದರಿಯ ಪುತ್ರರಾದ ಅರವಿಂದ ಕೆಎಂಎಫ್ ನಲ್ಲಿ ಉದ್ಯೋಗ ಮಾಡುತ್ತಿದ್ದರು. ಅರವಿಂದ್ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನಗೊಂಡಿದ್ದ ಸಿಎಂ ಸದಾನಂದಗೌಡರು ಈ ಬಗ್ಗೆ ಹಲವಾರು ಬಾರಿ ಅವರಿಗೆ ಎಚ್ಚರಿಕೆ ನೀಡಿದ್ದರು ಎಂದು ಹೇಳಲಾಗಿದೆ. ಆದರೆ, ತಮ್ಮ ಕಾರ್ಯ ವೈಖರಿ ಸುಧಾರಿಸಿಕೊಳ್ಳದ ಹಿನ್ನೆಲೆಯಲ್ಲಿ ಅರವಿಂದ್ಗೆ ಗೇಟ್ಪಾಸ್ ನೀಡಲಾಗಿದೆ.
ಯಡಿಯೂರಪ್ಪ ಅಧಿಕಾರ ಅವಧಿಯಲ್ಲಿ ನಿಯೋಜನೆ ಮೇಲೆ ಮುಖ್ಯಮಂತ್ರಿಗಳ ವಿಶೇಷ ಅಧಿಕಾರಿಯಾಗಿ ಅರವಿಂದ್ ನೇಮಕಗೊಂಡಿದ್ದರು. ಇತ್ತೀಚೆಗೆ ಯಡಿಯೂರಪ್ಪ ಜತೆಗೇ ಹೆಚ್ಚು ಓಡಾಡಿಕೊಂಡು ಇದ್ದ ಅರವಿಂದ್ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ. ಈ ಮೂಲಕ ಸಿಎಂ ಕಚೇರಿಯಲ್ಲಿ ತಳವೂರಿದ್ದ ಯಡಿಯೂರಪ್ಪ ಅವರ ಆಪ್ತರನ್ನು ಹೊರ ಹಾಕುವ ಕಾಯಕವನ್ನು ಅವರು ಮುಂದುವರಿಸಿಕೊಂಡು ಹೋಗುತ್ತಿರುವುದು ಖಚಿತಗೊಂಡಿದೆ.
ಇತ್ತೀಚಿಗೆ ಯಡಿಯೂರಪ್ಪ ಅವರ ಪರಮಾಪ್ತರೆನ್ನಲಾದ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಆರ್.ಪಿ. ಜಗದೀಶ್ ಅವರನ್ನು ಕೂಡಾ ಸದಾನಂದಗೌಡರು ತೆಗೆದು ಹಾಕಿದ್ದರು. ಇದಕ್ಕೂ ಮುನ್ನ ರಾಜಕೀಯ ಕಾರ್ಯದರ್ಶಿ ಪುಟ್ಟಸ್ವಾಮಿ ರಾಜ್ಯಸಭೆ ಚುನಾವಣೆ ಸ್ಪರ್ಧೆ ಹಿನ್ನೆಲೆಯಲ್ಲಿ ಹುದ್ದೆ ತ್ಯಜಿಸಿದ್ದನ್ನು ಇಲ್ಲಿ ನಾವು ಸ್ಮರಿಸಬಹುದು.
ಸದಾನಂದ ಗೌಡ ಅವರ ಈ ಬೆಳವಣಿಗೆಯು ರಾಜಕೀಯ ವಲಯದಲ್ಲಿ ಹೊಸ ಅಲೆಗಳನ್ನು ಎಬ್ಬಿಸಿದೆ.