ಯಾವುದೇ ಸಮಯದಲ್ಲಿ ಚುನಾವಣೆ : ಈಶ್ವರಪ್ಪ ಬಾಂಬ್
ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿದೆ, ಎಲ್ಲರೂ ಒಗ್ಗಟ್ಟಾಗಿದ್ದಾರೆ ಎಂಬುದನ್ನು ಸಾರಾಸಗಟಾಗಿ ಅಲ್ಲಗಳೆದ ಅವರು, ಬಿಜೆಪಿಯಲ್ಲಿ ಈಗಾಗಲೆ ಅನೇಕ ಪಂಗಡಗಳಿವೆ, ಒಳಜಗಳಗಳಿವೆ, ಸಮಸ್ಯೆಗಳು ಬೆಟ್ಟದಷ್ಟಿವೆ, ಒಡೆದು ಹೋಳಾದರೂ ಆಶ್ಚರ್ಯವಿಲ್ಲ ಎಂದು ವಸ್ತುನಿಷ್ಠ ಚಿತ್ರಣವನ್ನು ಈಶ್ವರಪ್ಪ ನೀಡಿದರು.
ಉಳಿದ ಪಕ್ಷಗಳು ಕೂಡ ಒಳಜಗಳಗಳಿಗೆ ಹೊರತಲ್ಲ. ಆದರೆ, ಎಲ್ಲ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವ ಶಕ್ತಿ ಬಿಜೆಪಿಗಿದೆ. ಚುನಾವಣೆ ಬಂದರೆ ಬಿಜೆಪಿ ಸನ್ನದ್ಧವಾಗಿದೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯಲ್ಲಿ ಭುಗಿಲೆದ್ದಿರುವ ಭಿನ್ನಮತ ಬೂದಿ ಕೆದರಿದ ಕೆಂಡದಂತಾಗಿದೆ. ಅನೇಕ ಶಾಸಕರು ಯಡಿಯೂರಪ್ಪಯನ್ನು ಮತ್ತೆ ಮುಖ್ಯಮಂತ್ರಿ ಮಾಡದಿರುವ ಬಗ್ಗೆ ಮತ್ತು ಸದಾನಂದ ಗೌಡರು ಬಜೆಟ್ ಮಂಡಿಸುತ್ತಿರುವ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಕೆಲ ದಿನಗಳ ಹಿಂದೆ ಕೋಡಿಮಠ ಶ್ರೀಗಳಾದ ಶಿವಯೋಗಿ ಶಿವಾನಂದ ಮಹಾಸ್ವಾಮೀಜಿಗಳು, ಬಿಜೆಪಿ ಸರಕಾರ ಪೂರ್ಣಾವಧಿ ಕಾರ್ಯ ನಿರ್ವಹಿಸುವುದು ಕಷ್ಟ, ಕೆಲ ದಿನಗಳಲ್ಲಿಯೇ ಬಿಜೆಪಿ ಒಡೆದು ಮೂರು ಹೋಳಾಗಲಿದೆ, ಬಿಜೆಪಿ ಸರಕಾರ ಅವಧಿ ಪೂರೈಸುವುದಿಲ್ಲ, ಸದ್ಯದಲ್ಲಿಯೇ ಚುನಾವಣೆ ಘೋಷಣೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದನ್ನು ನೆನಪಿಸುವಂತೆ ರಾಜ್ಯದಲ್ಲಿ ಬೆಳವಣಿಗಳು ನಡೆಯುತ್ತಿವೆ.