ನಿಮ್ ಕೈಲಿ ಆಗದಿದ್ರೆ ಹೇಳಿ : ಮಿರ್ಜಿ ಮೇಲೆ ಸಿಎಂ ಗರಂ
ಮಾಧ್ಯಮದವರ ಮತ್ತು ಪೊಲೀಸರ ಮೇಲೆ ವಕೀಲರಿಂದ ಹಲ್ಲೆ ನಡೆದಿರುವ ಘಟನೆ ನಿಜಕ್ಕೂ ವಿಷಾದನೀಯ ಮತ್ತು ದುರದೃಷ್ಟಕರ. ಈ ಘಟನೆಯಲ್ಲಿ ಅನೇಕರಿಗೆ ಗಾಯವಾಗಿದ್ದರೂ ಯಾರ ಜೀವಕ್ಕೂ ಅಪಾಯವಾಗಿಲ್ಲ. ಹಲ್ಲೆ ಮಾಡಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವುದಾಗಿ ಡಿವಿ ಸದಾನಂದ ಗೌಡ ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಶುಕ್ರವಾರ ಬೆಳಿಗ್ಗೆ ಜನಾರ್ದನ ರೆಡ್ಡಿಯನ್ನು ಸಿಬಿಐ ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಂದರ್ಭದಲ್ಲಿ ಪತ್ರಕರ್ತರ ಮೇಲೆ ವಕೀಲರು ಹಲ್ಲೆ ನಡೆಸಿದ ಘಟನೆ ಬಗ್ಗೆ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ಗೃಹ ಸಚಿವ ಆರ್ ಅಶೋಕ್, ಡಿಜಿಪಿ ಬಿದರಿ, ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಮುಂತಾದವರಿಂದ ವರದಿ ತರಿಸಿಕೊಂಡ ನಂತರ ಪತ್ರಿಕಾಗೋಷ್ಠಿ ಉದ್ದೇಶಿಸಿ ವಿಧಾನಸೌಧದಲ್ಲಿ ಗೌಡರು ಮಾತನಾಡಿದರು.
ಎಲ್ಲ ಅಧಿಕಾರಿಗಳ ಜೊತೆ ಮಧ್ಯಾಹ್ನ 2 ಗಂಟೆಗೆ, 4 ಗಂಟೆಗೆ ಮತ್ತು ಸಂಜೆ 6 ಗಂಟೆಗೆ ಸಭೆ ನಡೆಸಿ ಎಲ್ಲ ವಿವರಗಳನ್ನು ತರಿಸಿಕೊಂಡಿದ್ದೇನೆ. ಈ ಘಟನೆಯ ಶೀಘ್ರ ತನಿಖೆಯನ್ನು ನಿವೃತ್ತ ನ್ಯಾಯಮೂರ್ತಿಗಳಿಂದ ನಡೆಸಿ, ಎಲ್ಲ ಸತ್ಯ ಸಂಗತಿಗಳು ಹೊರಬಂದನಂತರ, ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸದಾನಂದ ಗೌಡ ಅವರು ನುಡಿದರು.
ಘಟನೆ ನಡೆದ ನಂತರ ಗೃಹ ಸಚಿವ ಕೂಡಲೆ ಕಾರ್ಯಪ್ರವೃತ್ತರಾಗಿದ್ದರಿಂದ ಈಗ ನಗರದಲ್ಲಿ ಶಾಂತಿ ನೆಲೆಸಿದೆ. ಅನೇಕ ಪೊಲೀಸರಿಗೆ, ಮಾಧ್ಯಮದವರಿಗೆ ಮತ್ತು ಸಾರ್ವಜನಿಕರಿಗೆ ಗಾಯವಾಗಿರುವುದು ತಿಳಿದುಬಂದಿದೆ. ಅವರ ಆಸ್ಪತ್ರೆಯ ಖರ್ಚನ್ನು ಸರಕಾರವೇ ಭರಿಸಲಿದೆ. ಹಾಗೆಯೆ, ಸಾರ್ವಜನಿಕ ಆಸ್ತಿಪಾಸ್ತಿಗೆ ಆದ ಹಾನಿಯನ್ನೂ ಸರಕಾರವೇ ಭರಿಸಲಿದೆ ಎಂದು ಅವರು ಹೇಳಿದರು.
ನಗರದಲ್ಲಿ ನಾಳೆಯವರೆಗೂ ಸಿಆರ್ಪಿಸಿ ಸೆಕ್ಷನ್ 144 ಅಡಿಯಲ್ಲಿ ನಿಷೇಧಾಜ್ಞೆ ಮುಂದುವರಿಯಲಿದೆ. ಮತ್ತೆ ಇಂತಹ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಅಲರ್ಟ್ ಆಗಿರಲು ಸೂಚಿಸಲಾಗಿದೆ. ಸಮಾಜಘಾತುಕ ಶಕ್ತಿಗಳಿಗೆ ಕಾನೂನು ಕೈಗೆ ತೆಗೆದುಕೊಳ್ಳಲು ಖಂಡಿತ ಅವಕಾಶ ನೀಡುವುದಿಲ್ಲ. ಸಾರ್ವಜನಿಕರು ಯಾವುದೇ ಗಾಳಿಸುದ್ದಿಗಳಿಗೆ ಕಿವಿಯಾಗಬಾರದು ಮತ್ತು ಶಾಂತಿ ನೆಲೆಸಲು ಸಹಕರಿಸಬೇಕು ಎಂದು ಸದಾನಂದ ಗೌಡರು ಮನವಿ ಮಾಡಿದರು.
ಬೆಂಗಳೂರಿನಲ್ಲಿ ಶುಕ್ರವಾರ ಇಡೀ ದಿನ ಇಷ್ಟೆಲ್ಲ ಹಿಂಸಾಚಾರ, ಆಸ್ತಿಪಾಸ್ತಿ ಹಾನಿ ಸಂಭವಿಸಿದ್ದರೂ ಪೊಲೀಸರು ಯಾರನ್ನೂ ಬಂಧಿಸಿಲ್ಲ. ಅನೇಕ ಪತ್ರಕರ್ತರ ಮೇಲೆ ತೀವ್ರತರವಾದ ಹಲ್ಲೆಗಳಾಗಿವೆ. ಕೋರ್ಟಿನ 5ನೇ ಮಹಡಿಯಿಂದ ಕುರ್ಚಿ ಎಸೆದಿದ್ದರಿಂದ, ಕಲ್ಲು ತೂರಿದ್ದರಿಂದ ಹದಿನೈದಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಪಕ್ಕದ ವಿಜ್ಞಾನ ಮತ್ತು ಕಲಾ ಕಾಲೇಜಿನ ವಿದ್ಯಾರ್ಥಿಗಳಿಗೂ ಹೊಡೆತಬಿದ್ದಿವೆ. ಹತ್ತಾರು ಬೈಕುಗಳನ್ನು ಐದಾರು ಕಾರುಗಳನ್ನು ಸುಟ್ಟು ಭಸ್ಮ ಮಾಡಲಾಗಿದೆ.