ವಿಡಿಯೋ ನೋಡಿದ್ದು ನಿಜ, ಅದರಲ್ಲಿ 'ಅಂಥದ್ದು' ಏನಿರಲಿಲ್ಲ!
ವಿಧಾನಸಭೆ ಅಧಿವೇಶನ ನಡೆಯುತ್ತಿರುವಾಗ ಅಶ್ಲೀಲ ವಿಡಿಯೋವನ್ನು ನೋಡುತ್ತಿದ್ದಾಗ ಫೆ.7ರಂದು ಲಕ್ಷ್ಮಣ ಸವದಿ ಕ್ಯಾಮೆರಾ ಕಣ್ಣಿಗೆ ಸಿಕ್ಕುಬಿದ್ದಿದ್ದರು ಮತ್ತು ಅವರ ಪಕ್ಕದಲ್ಲಿ ಕುಳಿತಿದ್ದ ಸಿಸಿ ಪಾಟೀಲ್ ಕೂಡ ನೀಲಿ ಚಿತ್ರ ನೋಡಿದ ಆರೋಪಕ್ಕೆ ಗುರಿಯಾಗಿದ್ದರು. ಇಂಥ ನೀಲಿ ಚಿತ್ರವನ್ನು ಸವದಿಗೆ ಕಳಿಸಿದ ಆರೋಪವನ್ನು ಕೃಷ್ಣ ಪಾಲೇಮಾರ್ ಮೇಲೆ ಹೊರಿಸಲಾಗಿತ್ತು. ನಂತರ ಮೂವರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಅವರ ಉತ್ತರಗಳು ಕೆಳಗಿನಂತಿವೆ
ಲಕ್ಷ್ಮಣ ಸವದಿ : ಸದನದಲ್ಲಿ ವಿಡಿಯೋ ನೋಡಿದ್ದು ನಿಜ. ವಿಧಾನಸಭೆಗೆ ಮೊಬೈಲ್ ತಂದಿದ್ದು ಮೊದಲ ತಪ್ಪು, ವಿಡಿಯೋ ನೋಡಿದ್ದು ಎರಡನೇ ತಪ್ಪು. ಆದರೆ ಆ ವಿಡಿಯೋದಲ್ಲಿ 'ಅಂಥದ್ದು' ಏನೂ ಇರಲಿಲ್ಲ. ವಿದೇಶದಲ್ಲಿ ಮಹಿಳೆಯೊಬ್ಬಳ ಮೇಲೆ ಎಸಗಿದ ದೌರ್ಜನ್ಯ ಅದಾಗಿತ್ತು. ಅದನ್ನು ಕಳಿಸಿದ್ದು ಪಾಲೇಮಾರ್ ಅವರು. ಆ ವಿಡಿಯೋವನ್ನು ಪಾಟೀಲರಿಗೂ ತೋರಿಸಿದೆ. ಅದರಲ್ಲಿ ಅಶ್ಲೀಲತೆ ಇರಲಿಲ್ಲ.
ಸಿಸಿ ಪಾಟೀಲ : ಸವದಿಯವರು ನೋಡುತ್ತಿದ್ದ ವಿಡಿಯೋದಲ್ಲಿ ಅಶ್ಲೀಲತೆಯಿರಲಿಲ್ಲ. ಅದು ವಿದೇಶದಲ್ಲಿ ಮಹಿಳೆ ಮೇಲೆ ದೌರ್ಜನ್ಯ ಎಸಗಿದ ವಿಡಿಯೋ ಆಗಿತ್ತು. ಸ್ವಲ್ಪ ಹೊತ್ತು ನೋಡಿ, ಅದನ್ನು ಬಂದ್ ಮಾಡಿರೆಂದು ನಾನು ಆಚೆ ಸರಿದೆ. ಇದರಲ್ಲಿ ನನ್ನ ತಪ್ಪೇನೂ ಇಲ್ಲ. ಇದೆಲ್ಲ ಮಾಧ್ಯಮಗಳ ಕುಕೃತ್ಯ. ನನ್ನನ್ನು ಬಲಿಪಶು ಮಾಡಲಾಗಿದೆ.
ಕೃಷ್ಣ ಜೆ. ಪಾಲೇಮಾರ್ : ಮೊಬೈಲ್ ಬಳಕೆ ಬಗ್ಗೆ ನನಗೆ ತಲೆಬುಡ ಗೊತ್ತಿಲ್ಲ. ಇನ್ನು ಅಂಥ ವಿಡಿಯೋ ಇನ್ನೊಬ್ಬರಿಗೆ ಕಳಿಸುವುದು ದೂರದ ಮಾತು. ನಾನು ಲಕ್ಷ್ಮಣ ಸವದಿ ಅವರಿಗೆ ಕಳಿಸೇ ಇಲ್ಲ. ಅದು ಅವರ ಮೊಬೈಲ್ ಹೇಗೆ ಸೇರಿತು ಎಂಬ ಬಗ್ಗೆ ನನಗೆ ಮಾಹಿತಿಯಿಲ್ಲ. ನನ್ನ ಮೇಲೆ ಅನಗತ್ಯವಾಗಿ ಆರೋಪ ಹೊರಿಸಲಾಗಿದೆ. ನನ್ನನ್ನು ಕೂಡ ಬಲಿಪಶು ಮಾಡಲಾಗಿದೆ.
ಸಮಿತಿ ರಚನೆ : ಇಷ್ಟೆಲ್ಲ ಉತ್ತರ ಕೊಟ್ಟು ಮಂತ್ರಿತ್ರಯರು ನಿರಾಳರಾಗಿದ್ದಾರೆ. ಕಳಂಕಿತ ಶಾಸಕರ ಉತ್ತರ ಸಿಗುತ್ತಿದ್ದಂತೆ ಸ್ಪೀಕರ್ ಕೆ.ಜಿ. ಬೋಪಯ್ಯ ಅವರು ನೀಲಿ ಚಿತ್ರ ವೀಕ್ಷಣೆಯ ತನಿಖೆಗೆಂದು ಸಮಿತಿ ರಚಿಸಿದ್ದಾರೆ. ಶ್ರೀಶೈಲಪ್ಪ ಬಿದರೂರು ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಸಮಿತಿಯಲ್ಲಿರುವ ಇತರ ಸದಸ್ಯರು : ಅಮರೇಗೌಡ ಪಾಟೀಲ ಬಯ್ಯಾಪುರ, ಎಸ್ ಆರ್ ವಿಶ್ವನಾಥ್, ಬಿ ಸುರೇಶ್ ಗೌಡ, ನೆಹರು ಓಲೆಕಾರ್, ಎಚ್ ಸಿ ಮಹದೇವಪ್ಪ ಮತ್ತು ದಿನಕರ್ ಕೇಶವಶೆಟ್ಟಿ. ಇವರು ತನಿಖೆ ನಡೆಸಿ ಮಾ.13ರೊಳಗೆ ವರದಿ ಸಲ್ಲಿಸಬೇಕಾಗಿದೆ.