ಯೂನಿಕೋಡ್ ಬಳಕೆ : ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಂಬಾರ
ಡಾ.ಕಂಬಾರ ಅವರು ಜ. 30ರಂದು ಸೋಮವಾರ ಕಣಜ' ಅಂತರಜಾಲ ಕನ್ನಡ ಜ್ಞಾನಕೋಶದ ವತಿಯಿಂದ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸಹಯೋಗದೊಡನೆ ಆಯೋಜಿಸಿದ್ದ 'ಕದಿರು' ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಲೇಖನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡುತ್ತಿದ್ದರು.
ಕುವೆಂಪು, ತೇಜಸ್ವಿ ಅವರು ಕನ್ನಡ ನಾಡು ನುಡಿಯ ಅಭಿವೃದ್ಧಿಗೆ ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಬಳಕೆ ಬಗ್ಗೆ ಕಾಳಜಿ ವಹಿಸಿದ್ದರು. ಕಳೆದ ಏಳೆಂಟು ವರ್ಷಗಳಿಂದ ಕನ್ನಡ ಸಾಹಿತಿಗಳು, ತಜ್ಞರು ಈ ನಿಟ್ಟನಲ್ಲಿ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಆದರೆ, ಸರಕಾರ ಮಾತ್ರ ಇನ್ನು ಕಲ್ಲಿನಂತೆ ನಿಶ್ಚಲವಾಗಿದೆ ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ತಮಿಳುನಾಡು ಸರಕಾರ ಯೂನಿಕೋಡ್ ಬಳಕೆ ಬಗ್ಗೆ ಕಾಯಿದೆ ಕೂಡ ಮಾಡಿದೆ. ವಿಶ್ವ ಕನ್ನಡ ಸಮ್ಮೇಳನ ಸಂದರ್ಭದಲ್ಲಿ ಕನ್ನಡ ಯೂನಿಕೋಡ್ ಬಳಕೆ ಬಗ್ಗೆ ಸರಕಾರ ಭರವಸೆ ನೀಡಿತ್ತು. ಆದರೆ, ಸರಕಾರ ಕಾಳಜಿ ವಹಿಸುತ್ತಿಲ್ಲ ಎಂದ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರು ಇ-ಗವರ್ನನ್ಸ್ ಇಲಾಖೆಯ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ದೇಶದ ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಉನ್ನತ ಶಿಕ್ಷಣ ಸಂಸ್ಥೆಯಾದ ಇಂಟರನ್ಯಾಶನಲ್ ಇನ್ಸಿಟ್ಯೂಟ್ ಆಫ್ ಇನ್ಫಾರ್ಮೆಶನ್ ಟೆಕ್ನಾಲಾಜಿ (ಐಐಐಟಿ-ಬಿ) ವತಿಯಿಂದ ಪ್ರೊ.ಎಸ್.ಎಸ್.ಪ್ರಭು ಮತ್ತು ಪ್ರೊ.ಎಸ್.ರಾಜಗೋಪಾಲನ್ ಅವರು ಚಂದ್ರಶೇಖರ ಕಂಬಾರ ಅವರನ್ನು ಅಭಿನಂದಿಸಿದರು.
ಕಾಲೇಜು ವಿದ್ಯಾರ್ಥಿಗಳಿಗಳಲ್ಲಿ ಬರವಣಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಕಣಜ ಅಂತರಜಾಲ ಕನ್ನಡ ಜ್ಞಾನಕೋಶ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ ರಾಜ್ಯಮಟ್ಟದಲ್ಲಿ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಲೇಖನ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ 750ಕ್ಕಿಂತ ಹೆಚ್ಚು ಮಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.