ಲೋ..ಎಸ್ಪಿ ಹೊರಗೆ ಬಾರೋ ನೋಡ್ಕೊತೀನೋ ನಿನ್ನ
ಈ ಘಟನೆ ನಡೆದಿದ್ದು ಖೈದಿಗಳ ಹೆಡ್ ಆಫೀಸ್ ಪರಪ್ಪನ ಅಗ್ರಹಾರದಲ್ಲಿ. ಪೋಲೀಸ್ ವರಿಷ್ಠಾಧಿಕಾರಿ ಎಂದಿನಂತೆ ಸೋಮವಾರ (ಡಿ.5) ರಾತ್ರಿ ಖೈದಿಗಳ ತಪಾಸಣೆ ನಡೆಸುತ್ತಿದ್ದರು. ರಾತ್ರಿ ಸುಮಾರು 8.30ರ ವೇಳೆಗೆ 5ನೇ ಬ್ಯಾರಾಕ್ ನಲ್ಲಿದ್ದ ಕೊರಂಗು ಕೊಠಡಿಗೆ ಬಂದಿದ್ದರು. ತಪಾಸಣೆಗೆ ಸಹಕರಿಸಿದ ಕೊರಂಗು ಎಸ್ಪಿ ಕೃಷ್ಣಕುಮಾರ್ ಮತ್ತು ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾನೆಂದು ವರದಿಯಾಗಿದೆ. ಈತನಿಗೆ ಕೊಠಡಿಯಲ್ಲಿದ್ದ ಇತರ 40 ಮಂದಿ ಖೈದಿಗಳು ಸಹಕರಿಸಿದ್ದಾರೆ.
ರೌಡಿ ಕೊರಂಗುನನ್ನು ನಿಯಂತ್ರಣಕ್ಕೆ ತರಲು ಮುಂದಾದ ಎಸ್ಪಿ ಮೇಲೆ ಈತ ಹಲ್ಲೆ ಮಾಡಿದ್ದಾನೆ. ಜೈಲಿನ ಉಳಿದ ಸಿಬ್ಬಂದಿಗಳು ಎಸ್ಪಿಯವರನ್ನು ಈತನಿಂದ ಪಾರು ಮಾಡಿ ಆತನನ್ನು ಕೂಡಿ ಹಾಕಿ ವಾಪಾಸಾಗಿದ್ದಾರೆ. ಆ ನಂತರ 200 ಕ್ಕೂ ಹೆಚ್ಚು ಸಿಬ್ಬಂದಿಗಳು ಎಸ್ಪಿಯವರಿಗೆ ಕೊರಂಗುವನ್ನು ಎತ್ತಂಗಡಿ ಮಾಡಿ ಬೇರೆ ಜೈಲಿಗೆ ವರ್ಗಾವಣೆ ಮಾಡಬೇಕೆಂದು ಮನವಿ ಮಾಡಿ ಧರಣಿ ನಡೆಸಿದ್ದಾರೆ.
ಆದರೆ ಜೈಲಿಂದ ಅಧಿಕಾರಿ ಲಕ್ಷ್ಮೀ ನಾರಾಯಣ ಇದಕ್ಕೆ ತದ್ವಿರುದ್ದ ಹೇಳಿಕೆ ನೀಡಿದ್ದಾರೆ. ಕೊರಂಗು ಯಾರ ಮೇಲೂ ಹಲ್ಲೆ ಮಾಡಿಲ್ಲ. ಕೂಗಾಡಿರಬಹದು, ನಾನಿರುವವರೆಗೂ ಇಂತಹ ದುರಂತಗಳಿಗೆ ಅವಕಾಶ ನೀಡುವುದಿಲ್ಲ. ಆತ ತಾನು ಮಾಡಿದ ತಪ್ಪಿಗೆ ಕ್ಷಮೆ ಯಾಚಿಸಿದ್ದಾನೆ. ಇಂತಹ ಘಟನೆ ಮರುಕಳಿಸದಂತೆ ನೋಡಿ ಕೊಳ್ಳುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.
ಇದೀಗ ಬಂದ ಸುದ್ದಿ: ಕೊರಂಗುನನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವುದನ್ನು ವಿರೋಧಿಸಿ ಆತನ ಸಹಚರರು ಜೈಲಿನ ಆವರಣದಲ್ಲೇ ಮಾರಾಮಾರಿ ನಡೆಸಿದ್ದಾರೆ. ರೌಡಿ ಕೊರಂಗುನನ್ನು ಬಳ್ಳಾರಿಗೆ ಸ್ಥಳಾಂತರಿಸುತ್ತಿದ್ದ ಸಂದರ್ಭದಲ್ಲಿ ಈತನ ಸಹಚರರು ಮತ್ತು ಪೋಲೀಸರ ನಡುವೆ ಮಾರಾಮಾರಿ ನಡೆದಿದೆ. ಈ ಮಧ್ಯೆ, ಈ ಸಮಾಜಘಾತುಕ ರೌಡಿಯನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದೆ.