ಖೇಣಿ ಪಕ್ಷಕ್ಕೆ ಯಡ್ಡಿ, ಅಂಬಿ, ಸುದೀಪ್ ತಾರೆಯರು
ಆದರೆ, ವಿಜೃಂಭಣೆಯಿಂದ ನಡೆದ ಕಾರ್ಯಕ್ರಮದಲ್ಲಿ ಎಂದಿನಂತೆ ಖೇಣಿ ಬೆಂಬಲಿಸುವ ಕಾಂಗ್ರೆಸ್ಸಿಗ ಅಂಬರೀಷ್, ನಟ ಸುದೀಪ್ ಹಾಜರಿದ್ದು ಶುಭ ಹಾರೈಸಿದ್ದರು.
ಲಿಂಗಾಯತ ಸಮುದಾಯಕ್ಕೆ ಸೇರಿದ ಖೇಣಿ ಬೀದರ್, ಗುಲ್ಬರ್ಗ, ಬಿಜಾಪುರ್, ರಾಯಚೂರು ಮತ್ತು ಉತ್ತರ ಕರ್ನಾಟಕದಲ್ಲಿ ಉತ್ತಮ ಬೆಂಬಲ ಗಳಿಸಿ ಇತರ ಪಕ್ಷಗಳಿಗೆ ಅಡ್ಡಿ ಉಂಟುಮಾಡಬಹುದು ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.
ತಮ್ಮ ಬಿಎಂಐಸಿ ಯೋಜನೆಯಲ್ಲಿ ಬಂಡವಾಳ ಹೂಡಲು ಈಗಾಗಲೇ ವಾಣಿಜ್ಯೋದ್ಯಮಿಗಳನ್ನು ಪ್ರಚೋದಿಸುತ್ತಿರುವ ಖೇಣಿ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಯನ್ನೇ ತಮ್ಮ ಮೂಲಮಂತ್ರವನ್ನಾಗಿ ಪರಿಗಣಿಸುವ ಸಾಧ್ಯತೆ ಇದೆ.
ಈ ಪ್ರಾಂತ್ಯದ ಪ್ರವಾಸೋದ್ಯಮಕ್ಕೆ ಉತ್ತಮ ಅವಕಾಶವಿದ್ದು ಬಂಡವಾಳ ಹೂಡಿಕೆಗಾಗಿ ಪ್ರಯತ್ನಿಸುತ್ತೇನೆ ಎಂದು ಖೇಣಿ ಹೇಳುತ್ತಾರೆ. ನಾಗೇಂದ್ರ ಪ್ರಸಾದ್ ಅವರು ನೊಂದಾಯಿಸಿರುವ ಕೆಎಂಪಿ ಪಕ್ಷ ಬಹುಶಃ ದೇವೇಗೌಡರ ವಿರುದ್ಧ ನಡೆಯುತ್ತಿರುವ ಕಾನೂನು ಕಲಹದ ಹಿನ್ನೆಲೆಯಲ್ಲಿ ಸ್ಥಾಪಿಸಲಾಗಿದೆ ಎಂದೂ ಹೇಳಲಾಗುತ್ತಿದೆ.
ಸ್ಟಾರ್ ಗಳ ದಂಡು: ಈಗಾಗಲೇ 8 ಲಕ್ಷ ಸದಸ್ಯರನ್ನು ನೊಂದಾಯಿಸಿರುವ ಈ ಪಕ್ಷ ಇತರ ಶಾಸಕ- ಸಂಸದರನ್ನೂ ಸೆಳೆಯಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ.
ನಟ ಸುದೀಪ್, ಮಾಧುರಿ ಭಟ್ಟಾಚಾರ್ಯ, ಸೋನು ನಿಗಮ್, ರಾಗಿಣಿ ದ್ವಿವೇದಿ ಸೇರಿದಂತೆ ಹಲವು ನಟ. ನಟಿ, ಗಾಯಕ, ಗಾಯಕಿಯರನ್ನು ಪಕ್ಷದ ಐಕಾನ್ ಗಳಾಗಿ ಖೇಣಿ ಬಳಸುವ ಸಾಧ್ಯತೆಯಿದೆ. ಕಾಂಗ್ರೆಸ್ + ಜೆಡಿಎಸ್ ನ ಹತ್ತಿರ ನಂಟು ಹೊಂದಿರುವ ಸುದೀಪ್ ಖೇಣಿ ಪಕ್ಷದತ್ತ ವಾಲಿದರೆ ವಿಪಕ್ಷಗಳಿಗೆ ಭಾರಿ ಹೊಡೆತ ಎನ್ನಲಾಗಿದೆ. ಪಕ್ಕಾ ಕಾಂಗ್ರೆಸ್ಸಿಗ ಅಂಬರೀಷ್ ಮುಂದಿನ ನಡೆ ಕೂಡಾ ಕುತೂಹಲವಾಗಿದೆ
ಯಡಿಯೂರಪ್ಪ ಅವರ ಅಂದಿನ ಸರ್ಕಾರಕ್ಕೆ ಸಾಕಷ್ಟು ನೆರವು ನೀಡಿದ್ದ ಖೇಣಿ ಉಪಕಾರ ಸ್ಮರಿಸಿ, ಯಡಿಯೂರಪ್ಪ ಅವರು ಖೇಣಿ ಬೆಂಬಲ ನೀಡುವ ಸಾಧ್ಯತೆಯಿದೆ. ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಪದವಿ ಸಿಗದಿರುವುದರಿಂದ ಮುಂದಿನ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಒಡಕು ಮೂಡಿಸಿ ಹೊಸ ಪಕ್ಷದ ಮೂಲಕ ಹೊಸ ಭವಿಷ್ಯ ಕಂಡುಕೊಳ್ಳುವ ಯೋಚನೆ ಯಡಿಯೂರಪ್ಪ ಅವರಿಗಿದೆ ಎನ್ನಲಾಗಿದೆ. ಯಾವುದಕ್ಕೂ ಕಾದು ನೋಡೋಣ...