ದುಬೈ ICWC: ಸಂತ್ರಸ್ತ ಭಾರತೀಯ ಮಹಿಳೆಯರು, ಮಕ್ಕಳಿಗಾಗಿ ನಿಧಿ
ಆರ್ಥಿಕ ಸಂಕಷ್ಟದ ಸಂದರ್ಭಗಳಲ್ಲಿ ಆತ್ಮಹತ್ಯೆಯಂತಹ ನಿರ್ಧಾರಗಳನ್ನು ಕೈಗೊಳ್ಳುವ ಕುಟುಂಬಗಳನ್ನು ಅಪಾಯದಿಂದ ರಕ್ಷಿಸುವಲ್ಲಿ ಈ ನಿಧಿ ನೆರವಾಗಲಿದೆ. ಭಾರತೀಯ ರಾಜತಾಂತ್ರಿಕ ಕಚೇರಿಯ ಘಟಕವಾದ ಭಾರತೀಯ ಸಮುದಾಯ ಕ್ಷೇಮಾಭಿವೃದ್ಧಿ ಸಮಿತಿ ಈ ನಿಧಿ ಸ್ಥಾಪಿಸಿದೆ.
ಯೋಜನೆಗೆ ಚಾಲನೆ ನೀಡುವ ನಿಟ್ಟಿನಲ್ಲಿ ಸಮುದಾಯದ ಸದಸ್ಯರೊಬ್ಬರು ಐದು ಲಕ್ಷ ದಿರಹಂ ಮೊತ್ತದ ದೇಣಿಗೆ ನೀಡಿದ್ದಾರೆ ಎಂದೂ ICWC ಪ್ರಕಟನೆ ತಿಳಿಸಿದೆ. ಈ ಸಂಬಂಧ ಕಾರ್ಯಚಟುವಟಿಕೆಗಳ ಮೇಲುಸ್ತುವಾರಿ ನೋಡಿಕೊಳ್ಳುವ ಸಲುವಾಗಿ ವಿವಿಧ ಮಹಿಳಾ ಸಂಘಟನೆಗಳ ಕಾರ್ಯಕರ್ತರ ಸದಸ್ಯತ್ವವುಳ್ಳ ನೂತನ ಸಮಿತಿಯೊಂದು ರಚನೆಯಾಗಲಿದೆ ಎಂದು ಕಾನ್ಸುಲ್ ಜನರಲ್ ಸಂಜಯ್ ವರ್ಮಾ ತಿಳಿಸಿದ್ದಾರೆ.
ಭಾರತೀಯ ಉದ್ಯಮಿ ಸಿದ್ಧಾರ್ಥ ಬಾಲಚಂದ್ರನ್ ನೀಡಿರುವ ದೇಣಿಗೆಯನ್ನು ಸಂಜಯ್ ವರ್ಮಾ ಹಾಗೂ ICWC ಮುಖ್ಯಸ್ಥ ಕೆ. ಕುಮಾರ್ ಸ್ವೀಕರಿಸಿರುವುದಾಗಿ ವರದಿ ತಿಳಿಸಿದೆ. ICWC ಇಲ್ಲಿನ ಶಾಲೆಗಳಿಗೆ ತೆರಳಿ ಅರ್ಹ ಕುಟುಂಬಗಳನ್ನು ಗುರುತಿಸುವಲ್ಲಿ ತಮಗೆ ನೆರವಾಗುವಂತೆ ಕೇಳಿಕೊಳ್ಳಲಿದೆ ಎಂದೂ ಅವರು ತಿಳಿಸಿದ್ದಾರೆ.
'ಆರ್ಥಿಕ ಬಿಕ್ಕಟ್ಟು ಹಾಗೂ ಸಾಲ ನಿರ್ವಹಣೆಯ ವೈಫಲ್ಯದಿಂದಾಗಿ ಹಣಕಾಸಿನ ಮುಗ್ಗಟ್ಟನ್ನು ಎದುರಿಸುತ್ತಿರುವ ಕುಟುಂಬಗಳ ಸಂಖ್ಯೆ ಅಪಾಯಕಾರಿ ಮಟ್ಟಕ್ಕೆ ಬೆಳೆಯುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ. ಇಂತಹ ಸಂದರ್ಭಗಳಲ್ಲಿ ಅತ್ಯಂತ ಹೆಚ್ಚು ಸಂಕಷ್ಟಕ್ಕೆ ಒಳಗಾಗುವವರು ಮಹಿಳೆಯರು ಹಾಗೂ ಮಕ್ಕಳಾಗಿದ್ದಾರೆ. ಈ ಕಾರಣದಿಂದಾಗಿ ನಾವು ಇಂತಹ ನಿರ್ಧಾರವೊಂದನ್ನು ಕೈಗೊಂಡಿದ್ದೇವೆ' ಎಂದು ಕುಮಾರ್ ವಿವರಿಸಿದ್ದಾರೆ.