ಕೊಪ್ಪಳದಿಂದ ಶ್ರೀರಾಮುಲು ಸ್ಪರ್ಧೆ: ಜೆಡಿಎಸ್ಸೋ, ಸ್ವತಂತ್ರರೋ?
ಜಿ. ಜನಾರ್ದನ ರೆಡ್ಡಿ ನಿವಾಸದಲ್ಲಿ ರಾಜಕೀಯ ಭವಿಷ್ಯದ ಬಗ್ಗೆ ಚರ್ಚಿಸಲು ಸಭೆ ಸೇರಿದ್ದ ಶ್ರೀರಾಮುಲು ಹಾಗೂ ಬೆಂಬಲಿಗರು, ಕೊಪ್ಪಳ ಉಪ ಚುನಾವಣೆಯಲ್ಲಿ ಸ್ಫರ್ಧಿಸುವ ಮೂಲಕ ಬಲಾಬಲ ಪ್ರದರ್ಶಿಸುವ ಬಗ್ಗೆ ತೀವ್ರವಾಗಿ ಚರ್ಚಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲೇ ಕೊಪ್ಪಳ ಉಪ ಚುನಾವಣೆ ಎದುರಿಸಬೇಕು ಎಂಬ ಮಾತುಗಳು ಬಿಜೆಪಿಯಲ್ಲಿ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಗೆ ತಕ್ಷಣಕ್ಕೇ ತಕ್ಕ ಪಾಠ ಕಲಿಸಲು ಸದವಕಾಶವಿದ್ದು, ಶ್ರೀರಾಮುಲು ಏಕೆ ಸ್ಫರ್ಧಿಸಬಾರದು? ಎಂಬ ಕುರಿತು ಗಹನವಾದ ಚರ್ಚೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ತಮ್ಮ ರಾಜಕೀಯ ಹಿನ್ನಡೆಗೆ ಕಾರಣವಾಗಿರುವ ಯಡಿಯೂರಪ್ಪ ಅವರ ನಾಯಕತ್ವಕ್ಕೇ ಪೆಟ್ಟು ನೀಡಿದರಾಯಿತು ಎಂಬ ನಿಲುವನ್ನೂ ಹೊಂದಿರುವ ರೆಡ್ಡಿ ಸೋದರರು, ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವುದು ಬಾಕಿ ಇದೆ ಎನ್ನಲಾಗಿದೆ. ಬಳ್ಳಾರಿಯವರೇ ಆಗಿರುವ ಎನ್.ಆರ್. ಸೂರ್ಯನಾರಾಯಣ ರೆಡ್ಡಿ ಜೆಡಿಎಸ್ನಿಂದ ಸ್ಫರ್ಧಿಸಲಾರೆ ಎಂದು ಹೇಳಿದ್ದು, ಈವರೆಗೆ ಜೆಡಿಎಸ್ ಅಭ್ಯರ್ಥಿಯನ್ನು ಅಂತಿಮಗೊಳಿಸದೆ ಇರುವುದು ಶ್ರೀರಾಮುಲು ಸ್ಫರ್ಧೆಯ ಕುರಿತು ಸೂಚನೆ ನೀಡುತ್ತಿವೆ.