ಏನಿದು ಕುಮಾರಸ್ವಾಮಿ-ಜಂತಕಲ್ ಮೈನಿಂಗ್ಸ್ ನಂಟು ?
ಚಿತ್ರದುರ್ಗ ಜಿಲ್ಲೆಯ ಮೀಸಲು ಅರಣ್ಯದಲ್ಲಿ ಗಣಿಗಾರಿಕೆ ನಡೆಸಲು ವಿನೋದ್ ಗೋಯಲ್ ಮಾಲೀಕತ್ವದ ಜಂತಕಲ್ ಎಂಟರ್ ಪ್ರೈಸಸ್ಗೆ ಅನುಮತಿ ನೀಡಿರುವ ಪ್ರಕರಣದಲ್ಲಿ ಕುಮಾರಸ್ವಾಮಿ ನೇರವಾಗಿ ಭಾಗಿಯಾಗಿದ್ದಾರೆ.
ಅದೇ ರೀತಿ ಬಳ್ಳಾರಿಯ ಸಂಡೂರಿನಲ್ಲಿ ಶ್ರೀಸಾಯಿ ವೆಂಕಟೇಶ್ವರ ಮಿನರಲ್ಸ್ಗೆ ಗಣಿ ಗುತ್ತಿಗೆ ನೀಡುವಲ್ಲಿ ಕುಮಾರಸ್ವಾಮಿ ಪ್ರಮುಖ ಪಾತ್ರ ವಹಿಸಿದ್ದು, ಈ ಎರಡು ಕಂಪನಿಗಳು ನಡೆಸಿದ ಅಕ್ರಮಗಳಿಂದ ರಾಜ್ಯದ ಬೊಕ್ಕಸಕ್ಕೆ 250 ಕೋಟಿ ರೂ. ನಷ್ಟವುಂಟಾಗಿದೆ ಎಂದು ಲೋಕಾಯುಕ್ತ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.
2006-07ನೇ ಸಾಲಿನಲ್ಲಿ ಪಾಕಿಸ್ತಾನದ ಕಂಪನಿಯೊಂದಕ್ಕೆ ಬೇಲಿಕೇರಿ ಬಂದರಿನಿಂದ ಅಕ್ರಮವಾಗಿ 32 ಸಾವಿರ ಮೆಟ್ರಿಕ್ ಟನ್ ಅದಿರು ರಫ್ತು ಮಾಡಿದ್ದ ವಿನೋದ್ ಗೋಯಲ್ ಕಂಪನಿಯನ್ನು ಕೇಂದ್ರ ಸರ್ಕಾರ ಕಪ್ಪುಪಟ್ಟಿಗೆ ಸೇರಿಸಿತ್ತು. ಆದರೂ ಕುಮಾರಸ್ವಾಮಿ ಇದನ್ನು ನಿರ್ಲಕ್ಷಿಸಿ ಚಿತ್ರದುರ್ಗದ ಮೀಸಲು ಅರಣ್ಯದಲ್ಲಿ ಗಣಿಗಾರಿಕೆ ನಡೆಸಲು ಜಂತಕಲ್ ಎಂಟರ್ ಪ್ರೈಸಸ್ಗೆ ಕೇವಲ 12 ಗಂಟೆ ಅವಧಿಯೊಳಗೆ ಗಣಿಗಾರಿಕೆಗೆ ಅನುಮತಿ ನೀಡಿದ್ದರು.
ಕುಮಾರಸ್ವಾಮಿ ಅವರೇ ನೇರವಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಶಿಫಾರಸು ಪತ್ರ ಬರೆದು ಜಂತಕಲ್ ಎಂಟರ್ ಪ್ರೈಸಸ್ಗೆ ತಕ್ಷಣ ಪರವಾನಗಿ ಮಂಜೂರು ಮಾಡಿಸಿದ್ದಾರೆ. ಅದೇ ರೀತಿ ಶ್ರೀಸಾಯಿ ವೆಂಕಟೇಶ್ವರ ಮಿನರಲ್ಸ್ ಅಕ್ರಮ ಗಣಿಗಾರಿಕೆ ನಡೆಸುತ್ತಿದೆ ಎಂಬ ಆರೋಪಗಳಿದ್ದರೂ ಬಳ್ಳಾರಿಯ ಸಂಡೂರು ವಲಯದಲ್ಲಿ 200 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಗುತ್ತಿಗೆಗೆ ಕೊಡಿಸುವಲ್ಲಿ ಕುಮಾರಸ್ವಾಮಿ ಪ್ರಮುಖ ಪಾತ್ರ ವಹಿಸಿರುವುದು ಲೋಕಾಯುಕ್ತ ತನಿಖೆಯಲ್ಲಿ ಸಾಬೀತಾಗಿದೆ.