ಲೋಕಾಯುಕ್ತ 'ಗಣಿಗಾರಿಕೆ' ಬಿರುಗಾಳಿ ಎಬ್ಬಿಸಲಿದೆಯೇ?
ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಬಿಜೆಪಿ ಸರ್ಕಾರವು ಈ ತನಿಖೆಯನ್ನು ಲೋಕಾಯುಕ್ತರಿಗೆ ವಹಿಸಿತ್ತು. ಅಕ್ರಮ ಗಣಿಗಾರಿಕೆ ಕುರಿತು 2007ರ ಮಾರ್ಚ್ ತಿಂಗಳಲ್ಲಿ ಆರಂಭವಾಗಿದ್ದ ಲೋಕಾಯುಕ್ತ ತನಿಖೆ ಈಗ ನಿರ್ಣಾಯಕ ಘಟ್ಟ ತಲುಪಿದೆ. ಇನ್ನು, ನ್ಯಾ. ಸಂತೋಷ್ ಹೆಗ್ಡೆ ಅವರು ಆಗಸ್ಟ್ 2ರಂದು ಹುದ್ದೆಯನ್ನು ತ್ಯಜಿಸಲಿದ್ದಾರೆ.
ರಾಜ್ಯದ ಬಳ್ಳಾರಿ, ತುಮಕೂರು, ಚಿತ್ರದುರ್ಗ, ಗದಗ ಮತ್ತಿತರ ಜಿಲ್ಲೆಗಳಲ್ಲಿ ನಡೆದಿರುವ ಕಬ್ಬಿಣದ ಅದಿರು ಗಣಿಗಾರಿಕೆಯ ಬಗ್ಗೆ ಈ ತನಿಖೆ ಪ್ರಮುಖವಾಗಿ ಕೇಂದ್ರೀಕೃತವಾಗಿತ್ತು. 2000ರ ಜ. 1ರಿಂದ ನಡೆದಿರುವ ಅಕ್ರಮ ಗಣಿಗಾರಿಕೆ, ಅಕ್ರಮ ಅದಿರು ಸಾಗಾಣಿಕೆ ಮತ್ತು ರಫ್ತು ಕುರಿತ ತನಿಖಾ ವರದಿ ಇದಾಗಿದೆ. ಮೂರು ವರ್ಷ ನಾಲ್ಕು ತಿಂಗಳ ಕಾಲ ನಡೆದ ತನಿಖೆಯ ಸಮಗ್ರ ವರದಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್ ವಿ ರಂಗನಾಥ್ ಕೈಸೇರಲಿದೆ.
ಲೋಕಾಯುಕ್ತರ ತನಿಖಾ ವರದಿ ಸಲ್ಲಿಕೆಯ ಬಗ್ಗೆಯೇ ಕೆಲ ದಿನಗಳಿಂದ ವ್ಯಾಪಕ ಚರ್ಚೆ ನಡೆಯುತ್ತಿದೆ. ಎಸ್ಎಂ ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ, ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ, ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್- ಬಿಜೆಪಿ ಸಮ್ಮಿಶ್ರ ಸರ್ಕಾರ ಮತ್ತು ಈಗ ಅಧಿಕಾರದಲ್ಲಿರುವ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯನ್ನು ಈ ತನಿಖೆ ಕೇಂದ್ರೀಕರಿಸಿದೆ. ಈ ನಡುವೆ ರಾಜ್ಯಪಾಲರ ಆಡಳಿತವಿದ್ದ ದಿನಗಳ ಬಗ್ಗೆಯೂ ತನಿಖೆ ನಡೆದಿದೆ.