ರೈತನ ಕತ್ತುಹಿಡಿದು ದಬ್ಬಿದ ಡಿಸಿ ಬೆನ್ನುತಟ್ಟಿದ ಸಿಎಂ
ಸುವರ್ಣ ಭೂಮಿ ಯೋಜನೆಯಲ್ಲಿ ಯಾವುದೇ ಭಾನಗಡಿ ನಡೆದಿಲ್ಲ. ಸಭೆಯಲ್ಲಿ ರೈತರೇ ಜಿಲ್ಲಾಧಿಕಾರಿ ಆಕ್ರೋಶಗೊಳ್ಳುವಂತೆ ಅನುಚಿತವಾಗಿ ವರ್ತಿಸಿದ್ದರಿಂದ ಅವರು ಹಾಗೆ ವರ್ತಿಸಿದ್ದಾರೆ. ಇದರಲ್ಲಿ ಅವರ ತಪ್ಪೇನು ಇಲ್ಲ. ರೈತರೇ ಸಂಯಮದಿಂದ ವರ್ತಿಸಬೇಕಾಗಿತ್ತು. ಮೀನಾರನ್ನು ಎತ್ತಂಗಡಿ ಮಾಡುವ ಪ್ರಶ್ನೆಯೇ ಇಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಜಿಲ್ಲಾಧಿಕಾರಿ ವರ್ತನೆ ಮತ್ತು ಯಡಿಯೂರಪ್ಪ ಅವರ ಸಮರ್ಥನೆ ಸಾರ್ವಜನಿಕ ಮತ್ತು ರಾಜಕೀಯ ವಲಯದಿಂದ ಭಾರೀ ಟೀಕೆಗೆ ಒಳಗಾಗಿದೆ. ರೈತ ಸಂಘ, ಕಾಂಗ್ರೆಸ್ ಪಕ್ಷ ಇವರಿಬ್ಬರ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲಾಧಿಕಾರಿಯನ್ನು ಕೂಡಲೆ ಎತ್ತಂಗಡಿ ಮಾಡಬೇಕೆಂದು ಆಗ್ರಹಿಸಿ ಕೋಲಾರದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಕೋಲಾರದಿಂದ ಸಂಸತ್ತಿಗೆ ಆಯ್ಕೆಯಾಗಿರುವ ಮುನಿಯಪ್ಪ ಮತ್ತು ಕೋಲಾರದ ಶಾಸಕ ವರ್ತೂರು ಪ್ರಕಾಶ್ ಅವರು ರಾಜಸ್ತಾನ ಮೂಲಕ ಮನೋಜ್ ಕುಮಾರ್ ಮೀನಾ ಅವರ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರು ಕೂಡ, ರೈತ ರೊಚ್ಚಿಗೆದ್ದರೆ ಮುಂದಿರುವವನು ಡಿಸಿಯಾದರೂ ಅಷ್ಟೆ, ಮುಖ್ಯಮಂತ್ರಿಯಾಗಿದ್ದರೂ ಅಷ್ಟೇ ಎಂದು ಎಚ್ಚರಿಕೆ ನೀಡಿದ್ದಾರೆ.