ಸತ್ಯ ಸತ್ಯ ಸತ್ಯ: ಮಂಜುನಾಥನೆದುರು ಸ್ವಾಮಿ ಪ್ರಮಾಣ
ಮಂಜುನಾಥ ಸ್ವಾಮಿ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ತಮ್ಮಿಬ್ಬರ ಭೇಟಿಯಿಂದ ಶ್ರೀ ಕ್ಷೇತ್ರದಲ್ಲಿ ಉಂಟಾದ ಅನಾನುಕೂಲಗಳಿಗೆ ಸಾರ್ವಜನಿಕರಿಗೆ ಮೊದಲನೆಯದಾಗಿ ಕ್ಷಮೆ ಬೇಡುವೆ ಎಂದು ಸ್ವಾಮಿ ಮಾತಿಗಿಳಿದರು.
ಸಂಧಾನಕ್ಕಾಗಿ ಯಡಿಯೂರಪ್ಪ ಅವರು ತಮ್ಮ ಬಳಿಗೆ ದೂತನನ್ನು ಕಳಿಸಿದ್ದರು. ಈ ವಿಚಾರದಲ್ಲಿ ನಾನು ಯಾವುದೇ ಸುಳ್ಳು ಹೇಳಿಲ್ಲ. ಇದು ನೂರಕ್ಕೆ ನೂರು ನಿಜ ಎಂದು ಸ್ವಯಂಪ್ರೇರಿತನಾಗಿ ಮಂಜುನಾಥನ ಸನ್ನಿಧಿಯಲ್ಲಿ ಪ್ರಮಾಣ ಮಾಡಿಕೊಂಡೆ. ನಾನು ಹೇಳಿರುವುದೆಲ್ಲ ಸತ್ಯ, ಸತ್ಯ, ಸತ್ಯ ಎಂದು ಮೂರು ಬಾರಿ ಹೇಳಿರುವುದಾಗಿ ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಬಳಿಕ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆ ಅವರಿಗೆ ನೀಡಿದ್ದ ಪತ್ರವನ್ನು ಯಥಾವತ್ತಾಗಿ ಓದಿದರು. ತಾವು ಮಾಡಿರುವ ಆರೋಪಗಳ ಸತ್ಯಾಸತ್ಯತೆಯನ್ನು ಆ ದೇವರೇ ನೋಡಿಕೊಳ್ಳಲಿ ಎಂದೂ ನುಡಿದರು.
ಅದಕ್ಕೂ ಮುಂಚೆ ಶಾಂತಿವನ ಅತಿಥಿ ಗೃಹದಲ್ಲಿ ತಂಗಿದ್ದ ಕುಮಾರಸ್ವಾಮಿ, ಪಕ್ಷದ ಶಾಸಕರು ಮತ್ತು ಕಾರ್ಯಕರ್ತರ ಪಟಾಲಂನೊಂದಿಗೆ ಜಿಟಿಜಿಟಿ ಮಳೆಯಲ್ಲಿ ನೇರವಾಗಿ ದೇವಸ್ಥಾನಕ್ಕೆ ಆಗಮಿಸಿದ್ದರು. ಆದರೆ ಬೆಳಗ್ಗೆ ನೀಡಿದ್ದ ಹೇಳಿಕೆಗೆ ವ್ಯತಿರಿಕ್ತವಾಗಿ, ಸಾರ್ವಜನಿಕವಾಗಿ ಸಾಲಿನಲ್ಲಿ ನಿಲ್ಲದೆ ನೇರವಾಗಿ ದೇವಾಲಯ ಪ್ರವೇಶಿಸಿದರು.
ಇದರಿಂದ ಭಕ್ತರಿಗೆ ಸಾಕಷ್ಟು ಕಸಿವಿಸಿಯಾಯಿತು. ಧಾರ್ಮಿಕ ಕ್ಷೇತ್ರವನ್ನು ರಾಜಕೀಯಕ್ಕೆ ಬಳಸಿಕೊಂಡ ಇಬ್ಬರೂ ನಾಯಕರಿಗೆ ಭಕ್ತಾದಿಗಳು ಛೀಮಾರಿ ಹಾಕಿದ್ದು ವಿಶೇಷವಾಗಿತ್ತು. ಆದರೆ ತಮ್ಮ ನಾಯಕರು ಮಾತು ಉಳಿಸಿಕೊಂಡರೆಂದು ಭಾವಿಸಿದ ಜೆಡಿಎಸ್ ಕಾರ್ಯಕರ್ತರು ಕುಮಾರಸ್ವಾಮಿಗೆ ಜೈಕಾರ ಹಾಕಿ, ಕುಮಾರಸ್ವಾಮಿ ಭೇಟಿಯನ್ನು ಬೆಂಬಲಿಸಿದರು. ಸಿಎಂಗೆ ಧಿಕ್ಕಾರವನ್ನೂ ಕೂಗಿದರು. ಈ ಸಂದರ್ಭದಲ್ಲಿ ಸಂಚಾರ ದಟ್ಟಣೆ ವಿಪರೀತವಾಗಿತ್ತು.