ಕ್ರೈಂ ಪತ್ರಕರ್ತ ಡೇ ಕೊಲೆ ಮಾಡಿದ್ದು ಯಾರು ದಾವೂದ್?
ಪ್ರಮುಖ ಕ್ರೈಂ ರಿಪೋರ್ಟರ್ ಆಗಿದ್ದರೂ ಪಲ್ಸರ್ ಬೈಕಿನಲ್ಲಿ ಬೇಕೆಂದ ಕಡೆ ಸುತ್ತುತ್ತಿದ್ದ ಡೇಗೆ ಒಮ್ಮೆ ಕೂಡಾ ಬೆದರಿಕೆ ಕರೆ ಬಂದಿರಲಿಲ್ಲ. ಹಾಗಾಗಿ ಡೇ ವಿರುದ್ಧ ಯಾರು ತಿರುಗಿಬಿದ್ದಿದ್ದಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಆದರೆ, ಡೇ ಅವರನ್ನು ಕೊಂದಿರುವ ಆಯುಧಗಳು ಮಾತ್ರ ದಾವೂದ್ ಗ್ಯಾಂಗ್ ಕಡೆ ಬೊಟ್ಟು ಮಾಡಿ ತೋರಿಸುತ್ತಿದೆ.
ಮಿಡ್ ಡೇ ಪತ್ರಿಕೆಯ ವಿಶೇಷ ಯನಿಖೆ ಸಂಪಾದಕ 56 ವರ್ಷದ ಜೆ ಡೇ ಕೊಲೆಯಾಗಿ 24 ಗಂಟೆ ಕಳೆದರೂ ಪೊಲೀಸರು ಇನ್ನೂ ಯಾವುದೇ ಪ್ರಗತಿ ತೋರಿಸುತ್ತಿಲ್ಲ. ಕೊಲೆ ಕೇಸ್ ನಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಪತ್ರಕರ್ತರನ್ನು ನಡುಬೀದಿಯಲ್ಲಿ ಕೊಲೆ ಮಾಡಿರುವುದು ಖಂಡನೀಯ ಎಂದು ಮುಂಬೈನ ಪತ್ರಕರ್ತರು ಸೋಮವಾರ ಕಪ್ಪುಪಟ್ಟಿ ಧರಿಸಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಗೆ ಘೇರಾವ್ ಹಾಕಿದರು.
ಈ ವರೆಗೂ ಸ್ಪಷ್ಟವಾಗಿ ಯಾವುದೇ ಸುಳಿವು ಸಿಕ್ಕಿಲ್ಲ. ಆದರೆ, ಗ್ಯಾಂಗ್ ಸ್ಟರ್ ಗಳ ಕೈವಾಡದ ಶಂಕೆಯಿದೆ. ಜಂಟಿ ಆಯುಕ್ತ ಹಿಮಾಂಶು ರಾಯ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದೆ. ಡೇ ಅವರ ಲ್ಯಾಪ್ ಟಾಪ್ ನಲ್ಲಿ ಹೆಚ್ಚಿನ ಮಾಹಿತಿ ಸಿಗುವ ಭರವಸೆಯಿದೆ ಎಂದು ಮಹಾರಾಷ್ಟ್ರದ ಗೃಹ ಸಚಿವ ಆರ್ ಆರ್ ಪಾಟೀಲ್ ಹೇಳಿದ್ದಾರೆ.
ದಾವೂಡ್ ಕೈವಾಡ : ಎನ್ ಡಿಟಿವಿ: ಪೊಲೀಸರಿಂದ ಒಂದು ಕೈ ಮುಂದೆ ಎಂಬಂತೆ ತನಿಖಾ ವರದಿ ಬಿತ್ತರಿಸಿದ ಎನ್ ಡಿಟಿವಿ ನೇರವಾಗಿ ಜೆ.ಡೆಯನ್ನು ದಾವೂದ್ ಗ್ಯಾಂಗ್ ಹತ್ಯೆ ಮಾಡಿದೆ ಎಂಬ ಸಂಶಯವನ್ನು ಹೊರಹಾಕಿದೆ. ಜೆ.ಡೆ ಯನ್ನು ಹತ್ಯೆ ಮಾಡಲು ಬಳಸಿದ 7.65 ಎಂಎಂ ಪಿಸ್ತೂಲನ್ನು ದಾವೂದ್ ಗ್ಯಾಂಗ್ ಬಳಸುತ್ತಿದೆ. ಪೊಲೀಸರು ಇನ್ನು ಈ ವಿಷಯ ಬಹಿರಂಗಪಡಿಸಿಲ್ಲ. ಜೆ.ಡೆ ತೈಲ ಮಾಫಿಯಾಕ್ಕೆ ಅಥವಾ ದಾವೂದ್ ಗ್ಯಾಂಗ್ಗೆ ಬಲಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಡೇ ಕೊಲೆ ಪ್ರಮುಖ ಕಾರಣಗಳು:
* ಇತ್ತೀಚೆಗೆ ತೈಲ ಮಾಫಿಯಾ ವಿರುದ್ಧ ಡೇ ಲೇಖನ ಬರೆದಿದ್ದರು. ದಾವೂದ್ ಸೋದರಿ ಹಸೀನಾ ಪಾರ್ಕರ್ ಹಾಗೂ ಪೊಲೀಸ್ ಅಧಿಕಾರಿ ವಿರುದ್ಧ ಇದ್ದ ಲೇಖನ ಡಿ ಗ್ಯಾಂಗ್ ನ ಕಣ್ಣು ಕೆಂಪಾಗಿಸಿರಬಹುದು.
* ಎನ್ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾ ಹಾಗೂ ತೈಲ ಮಾಫಿಯಾ ಡಾನ್ ಜನಾರ್ದನ ಬಾಯ್ ಇಬ್ಬರು ಗ್ಯಾಂಗ್ಸ್ಟರ್ ಲಖನ್ ಬೈಯ್ಯ ಎಂಬಾತನನ್ನು ಹತ್ಯೆ ಆರೋಪಿಗಳಾಗಿ ಜೈಲು ಸೇರಿದ್ದಾರೆ. ಇವರಿಬ್ಬರೂ ಡಿ ಗ್ಯಾಂಗ್ ನ ಸಂಪರ್ಕದಲ್ಲಿದ್ದವರು ಜೆ.ಡೇ ಈ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದರು.
* ದಾವೂದ್ನ ಸೋದರ ಇಕ್ಬಾಲ್ ಕಸ್ಕರ್ ಮೇಲೆ ಇತ್ತೀಚೆಗೆ ಛೋಟಾ ರಾಜನ್ ಗ್ಯಾಂಗ್ನ ಉಮೈದ್ ಖಾನ್ ದಾಳಿ ಮಾಡಿದ್ದ. ಉಮೈದ್ ಖಾನ್ನ ವೃದ್ಧ ತಾಯಿಯ ಬಗ್ಗೆ ವರದಿ ಮಾಡಿದ್ದ ಜೆಡೆ, ವೃದ್ಧ ತಾಯಿ ಬಗ್ಗೆ ಕಳಕಳಿ ವ್ಯಕ್ತಪಡಿಸಿದ್ದರು. ಈ ಅಂಶ ಡಿ ಗ್ಯಾಂಗ್ ನ ಕೋಪ ಕೆರಳಿಸಿರಬಹುದು. ಒಟ್ಟಿನಲ್ಲಿ ಸಮಾಜದ ಹುಳುಕು ಎತ್ತಿ ತೋರಿಸಿದ ದಿಟ್ಟ ಪತ್ರಕರ್ತ ದುರಂತ ಸಾವನ್ನಪ್ಪಿದ್ದಾನೆ. ಇದು ದೇಶದ ಎಲ್ಲಾ ಪತ್ರಕರ್ತರಿಗೂ ಎಚ್ಚರಿಕೆ ಗಂಟೆ ಎಂದರೆ ತಪ್ಪಾಗಲಾರದು.