ಶ್ರೀಜಾ ಪ್ರೇಮ ಎಡವಿದ್ದಾದರೂ ಎಲ್ಲಿ?
2007 ಅಕ್ಟೋಬರ್ 17ರಂದು ತನ್ನ ಸಹಪಾಠಿ ಶಿರೀಶ್ ಭಾರದ್ವಾಜ್ ಜತೆ ಬ್ಯಾಡ್ಮಿಂಟನ್ ಕೋರ್ಟ್-ನಿಂದ ಪುರ್-ಎಂದು ಹಾರಿಹೋದಳು. ಸ್ವಚ್ಚಂದವಾಗಿ ಹಾರಬೇಕಿದ್ದ ಪ್ರೇಮ ಪಾರಿವಾಳ ಈಗ ಘಾಸಿಗೊಂಡು ಪೊಲೀಸ್ ಠಾಣೆಯ ಮೆಟ್ಟಿಲ ಮೇಲೆ ಬಿದ್ದಿದೆ. ಹೀಗ್ಯಾಕಾಯಿತು!? ನಿಜ ಜೀವನವೇನು ಚಿರಂಜೀವಿಯ ಸಿನಿಮಾನಾ? ಶ್ರೀಜಾ, ಶಿರೀಶ್-ನಿಂದ ದೂರವಾದಳಂತೆ ಎಂಬ ಸುದ್ದಿ ಮಂಗಳವಾರ ಕಾಡ್ಗಿಚ್ಚಿನಂತೇ ಹರಿದಾಡಿದೆ. ಚಿರಂಜೀವಿ ಅಭಿಮಾನಿಗಳ ಸಂಘದ ವೆಬ್ ಸೈಟ್ ಸಾಂತ್ವನದ ಮಾತುಗಳಿಂದ ಸ್ಫೋಟಗೊಂಡಿದೆ. ಹೇಗೋ ಕೊನೆಗೂ ಅವನಿಂದ ದೂರವಾದಳಲ್ಲ. ಇದೆಲ್ಲ ಚಿರಂಜೀವಿಯ ಬುದ್ದಿವಂತಿಕೆ, ದೂರಾಲೋಚನೆಯಿಂದಲೇ ಆಗಿದೆ. ಇನ್ನೇನು ಅಪ್ಪನ ಮನೆಗೆ ವಾಪಸಾಗುತ್ತಾಳೆ ಎಂದೆಲ್ಲ ಚಿರು ಅಭಿಮಾನಿಗಳು ಸಮಾಧಾನ ಪಟ್ಟುಕೊಡಿದ್ದಾರೆ.
ಹಾಗೆ ನೋಡಿದರೆ ಶ್ರೀಜಾ-ಶಿರೀಶ್ ಪ್ರೇಮ ಜಾಸ್ತಿ ಕಾಲವೇ (ಸುಮಾರು ನಾಲ್ಕು ವರ್ಷ?) ಬಾಳಿದೆ. ಪ್ರೇಮ ಜೋಡಿ ಮದುವೆಯಾಗಿದ್ದ ರೀತಿ, ಚಿರು ಪ್ರತಿಷ್ಠೆ, ಖ್ಯಾತಿಗಳನ್ನು ತೂಗುಹಾಕಿ ನೋಡಿದಾಗ ಇದು ಹೆಚ್ಚು ದಿನ ಬಾಳುವುದಿಲ್ಲ ಎಂಬುದು ಯಾವಾಗಲೋ ವಿಧಿತವಾಗಿತ್ತು. ಮೊನ್ನೆ ವ್ಯಾಲೆಂಟೈನ್ಸ್ ದಿನ ಹೆಚ್ಚು ಚರ್ಚಿತ ಈ ಜೋಡಿ ಒಂದೇ ಟಿವಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಆದರೆ ಆಗಲೇ ಇಬ್ಬರ ನಡುವೆ ಬಿರುಕು ಬಿದ್ದಿರುವುದು ಕಣ್ಣಿಗೆ ರಾಚುತ್ತಿತ್ತು. ಹೆಂಗಿದೆ ನಿಮ್ಮ ಪ್ರೇಮ ಜೀವನ ಎಂದು ಕೇಳಿದ್ದಕ್ಕೆ ಅಷ್ಟೆಲ್ಲ ವೈಯಕ್ತಿಕ ಪ್ರಶ್ನೆಗಳನ್ನು ಎಸೆಯಬೇಡಿ ಎಂದು ತಣ್ಣಗೆ ಪ್ರತಿಕ್ರಿಯಿಸಿದ್ದಳು.
ಇದರ ಹೊರತಾಗಿಯೂ ಫೆಬ್ರವರಿ 26ರಂದು ಆಪ್ತ ಮಿತ್ರರಿಗೆ ಬೇಗಂಪೇಟೆಯಲ್ಲಿ ಭರ್ಜರಿ ಪಾರ್ಟಿ ನೀಡಿ ಎಲ್ಲವೂ ಸರಿಯಾಗಿಯೇ ಇದೆ ಎಂದು ಡಂಗುರ ಸಾರಿದ್ದಳು. ಗೋವಾದ ಟೈಟೋಸ್ ಗ್ಲೋಬಲ್ ಈವೆಂಟ್ಸ್ ಎಂಬ ದೊಡ್ಡ ಕಂಪನಿ ಜತೆ ಶಿರೀಶ್ ಡೀಲ್ ಕುದುರಿಸಿದ್ದಾನೆ. ವ್ಯಾವಹಾರಿಕ ಬುದುಕು ಸದೃಢಗೊಳ್ಳುತ್ತಿದೆ. ಹೈದರಾಬಾದಿನಲ್ಲಿ ಇನ್ನು ಮುಂದೆ ಎಲ್ಲ ಈವೆಂಟ್ ಮ್ಯಾನೇಜ್ ಮೆಂಟ್ ಗಳೂ ತನ್ನ ಗಂಡನ ಸುಪರ್ದಿಯಲ್ಲೇ ನಡೆಯುತ್ತವೆ ಎಂದು ಆಪ್ತರೆದುರು ಶ್ರೀಜಾ ಜಂಭ ಕೊಚ್ಚಿಕೊಂಡಿದ್ದೂ ಆಯಿತು. ಬುದ್ಧಿವಂತ ಶಿರೀಶ ಪರೋಕ್ಷವಾಗಿ ಚಿರಂಜೀವಿ ಹೆಸರು ಬಳಸಿಕೊಂಡು ತೆಲುಗು ಸಿನಿರಂಗ ಖ್ಯಾತ ನಾಮರನ್ನೆಲ್ಲ ಪಾರ್ಟಿಯಲ್ಲಿ ಕಲೆಹಾಕಿದ್ದ.
ಹಾಗಾದರೆ ಹುಚ್ಚು ಪ್ರೇಮದಲ್ಲಿದ್ದ ಜೋಡಿ ಎಡವಿದ್ದಾದರೂ ಎಲ್ಲಿ? ಇದಕ್ಕೆ ಉತ್ತರ ಆರಂಭದಿಂದಲೇ... ಎನ್ನಬಹುದು. ಶ್ರೀಜಾಗೆ ಯಾಕೋ ಏನೋ ಮದ್ವೆಯಾದ ಹೊಸದರಲ್ಲೇ ಶಿರೀಶ್ ತನ್ನ ಕನಸಿನ ರಾಜಕುಮಾರ ಅಲ್ಲ ಎನಿಸತೊಡಗಿದೆ. ಅವನ ಬುದ್ಧಿವಂತಿಕೆಗಳನ್ನು ನಂಬುವಷ್ಟು ಅಮಾಯಕಳಲ್ಲ ತಾನು ಎಂಬ ಸಂದೇಶ ಶ್ರೀಜಾಳಿಂದ ಹೊರಬಿದ್ದಿದೆ. ಇದರಿಂದ 'ಕ್ಯೂ' ಪಡೆದ ಚಿರು ಅಲ್ಲಿಂದ ಮುಂದಕ್ಕೆ ಮುದ್ದಿನ ಮಗಳ ಪ್ರೇಮ ಕಥೆಯನ್ನು ಸ್ವತಃ ತಾವೇ ರಚಿಸತೊಡಗಿದ್ದಾರೆ. ತೋಳ ಇದೀಗ ಹಳ್ಳಕ್ಕೆ ಬಿದ್ದಿದೆ.
ಚಿರು, ತನ್ನ ಅಳಿಯ ಶಿರೀಶನ ಬಗ್ಗೆ ಎಂದೂ ಅಭಿಮಾನಪಡಲಿಲ್ಲ. ಶ್ರೀಜಾ ಯಾವಾಗ ಬೇಕಾದರೂ ತವರಿಗೆ ಮರಳಬಹುದು ಎಂಬುದು ಚಿರು ಸಂದೇಶವಾಗಿತ್ತು. ಶ್ರೀಜಾ ಮದುವೆಯಾಗುತ್ತಿದ್ದಂತೆ ಚಿರಂಜೀವಿ ಅಪ್ಪ ತೀರಿಕೊಂಡಾಗ ಶ್ರೀಜಾ ಅಪ್ಪನ ಮನೆಗೆ ಓಡೋಡಿ ಬಂದಿದ್ದಳು. ಆಗ ಅಪ್ಪನ ಮನೆಯತ್ತ ಶ್ರೀಜಾ ಹಾಕುತ್ತಿದ್ದ ಹೆಜ್ಜೆಗಳು ಸಪ್ತಪದಿಯಿಂದ ವಾಪಸಾಗುತ್ತಿರುವ ಹೆಜ್ಜೆಗಳು ಎಂಬುದನ್ನು ಹಿರಿಯ ತಲೆಗಳು ಗಮನಿಸಿದ್ದವು. ಅದಾದ ನಂತರ ಶ್ರೀಜಾ ಎಷ್ಟೋ ಸಾರಿ ತವರಿಗೆ ಬಂದಿದ್ದಾಳಾದರೂ ಎಂದಿಗೂ ಪತಿಯ ಜತೆ ಬಂದಿರಲಿಲ್ಲ. ಅತ್ತ ಶ್ರೀಜಾ ತವರಿಗೆ ಹತ್ತಿರವಾಗುತ್ತಿರುವುದು ಶಿರೀಶ್ ಕಣ್ಣು ಕುಕ್ಕಿತ್ತು. ಮೊಮ್ಮಗಳು ಹುಟ್ಟಿದ ನೆಪ ಮಾಡಿಕೊಂಡು ಮಾವ ಚಿರಂಜೀವಿ ಮನೆಗೆ ಬರುತ್ತಾರೆ ಎಂದು ಶಿರೀಶ್-ಗೆ ಕಾದಿದ್ದೇ ಬಂತು, ಚಿರು ಬರಲಿಲ್ಲ. ಮುಂದೆ ಶ್ರೀಜಾಗೆ ಬ್ರೇನ್ ವಾಷಿಂಗ್ ಜೋರಾಗಿ ಗಂಡನಿಂದ ಆಕೆ ಶಾಶ್ವತವಾಗಿ ದೂರವಾಗಲು ನಿಶ್ಚಯಿಸಿದಳು ಎನ್ನುತ್ತದೆ ಕುಟುಂಬದ ಮೂಲಗಳು.